ಕೋಟಕ್ಪುರ ಗೋಲಿಬಾರ್ ಪ್ರಕರಣ: ಪ್ರಕಾಶ್ ಸಿಂಗ್ ಬಾದಲ್ ಸಹಿತ 8 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ಎಸ್ಐಟಿ

Update: 2023-02-25 17:07 GMT

ಚಂಡಿಗಢ, ಫೆ. 25: ಕೋಟಕ್ಪುರ ಪೊಲೀಸ್ ಗೋಲಿಬಾರ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಅಕಾಲಿ ದಳದ ಅಧ್ಯಕ್ಷ ಸುಕ್ಬೀರ್ ಸಿಂಗ್ ಬಾದಲ್ ಸಹಿತ 8 ಮಂದಿಯ ವಿರುದ್ಧ ಪಂಜಾಬ್ ಪೊಲೀಸ್ನ ವಿಶೇಷ ತನಿಖಾ ತಂಡ ಶುಕ್ರವಾರ ಆರೋಪ ಪಟ್ಟಿ ಸಲ್ಲಿಸಿದೆ.

ಫರೀದ್ಕೋಟ್ ಜಿಲ್ಲೆಯ ಕೋಟಕ್ಪುರ ನಗರದಲ್ಲಿ 2015 ಅಕ್ಟೋಬರ್ 14ರಂದು ನಡೆದ ಪ್ರತಿಭಟನೆ ಸಂದರ್ಭ ಪ್ರತಿಭಟನಕಾರರ ಮೇಲೆ ಪೊಲೀಸರು ಲಾಠಿ ಜಾರ್ಚ್ ಹಾಗೂ ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಅದೇ ದಿನ ಜಿಲ್ಲೆಯ ಬೆಹ್ಬಾಲ್ ಕಾಲನ್ ಗ್ರಾಮದಲ್ಲಿ ಪೊಲೀಸ್ ಗೋಲಿಬಾರ್ಗೆ ಇಬ್ಬರು ಸಾವನ್ನಪ್ಪಿದ್ದರು.

ಸಿಕ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸಿದ ಸರಣಿ ಘಟನೆಯ ವಿರುದ್ಧ ಈ ಪ್ರತಿಭಟನೆ ನಡೆದಿತ್ತು. ಆಗ ಪ್ರಕಾಶ್ ಸಿಂಗ್ ಬಾದಲ್ ಅವರು ಪಂಜಾಬ್ನ ಮುಖ್ಯಮಂತ್ರಿಯಾಗಿದ್ದರು. ಅವರ ಪುತ್ರ ಸುಕ್ಬೀರ್ ಸಿಂಗ್ ಬಾದಲ್ ಗೃಹ ಸಚಿವರಾಗಿದ್ದರು.

Similar News