ಪುದುಚೇರಿ: ಬಿಜೆಪಿ ನಾಯಕನ ಮೇಲೆ ಬಾಂಬೆಸೆದು ಮಚ್ಚುಗಳಿಂದ ಕೊಚ್ಚಿ ಹತ್ಯೆ

Update: 2023-03-27 16:23 GMT

ಪುದುಚೇರಿ,ಮಾ.27: ಆಘಾತಕಾರಿ ಘಟನೆಯೊಂದರಲ್ಲಿ ಪುದುಚೇರಿಯ ಬಿಜೆಪಿ ನಾಯಕ ಸೆಂಥಿಲ್ ಕುಮಾರನ್ ಅವರನ್ನು ರವಿವಾರ ರಾತ್ರಿ ಬೈಕ್ ಗಳಲ್ಲಿ ಬಂದಿದ್ದ ಏಳು ದುಷ್ಕರ್ಮಿಗಳು ಮಚ್ಚುಗಳಿಂದ ಕೊಚ್ಚಿ ಹತ್ಯೆಗೈಯಿದ್ದಾರೆ. ಈ ವೇಳೆ ಆರೋಪಿಗಳು ಕುಮಾರನ್ ಮೇಲೆ ಬಾಂಬ್ ಗಳನ್ನೂ ಎಸೆದಿದ್ದು, ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆರೋಪಿಗಳು ಸ್ವಯಂ ಶರಣಾಗಿದ್ದು, ಪೊಲೀಸರು ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಕುಮಾರ ಪುದುಚೇರಿಯ ಗೃಹಸಚಿವ ಎ.ನಮಶಿವಾಯಂ ಅವರ ಸಂಬಂಧಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ್ದ ಸಚಿವರು ಕುಮಾರನ್ರನ್ನು ನೋಡಿದ ಬಳಿಕ ಬಿಕ್ಕಿ ಬಿಕ್ಕಿ ಅತ್ತರು ಎಂದೂ ವರದಿಗಳು ಹೇಳಿವೆ.

ಕುಮಾರನ್ ಜನಸಂದಣಿ ಪ್ರದೇಶದಲ್ಲಿಯ ಬೇಕರಿಯೊಂದರ ಬಳಿ ನಿಂತುಕೊಂಡಿದ್ದಾಗ ಬೈಕ್ಗಳಲ್ಲಿ ಬಂದಿದ್ದ ಏಳು ಜನರು ಅವರನ್ನು ಸುತ್ತುವರಿದಿದ್ದರು. ಇಬ್ಬರು ಕುಮಾರನ್ರತ್ತ ಕಚ್ಚಾ ಬಾಂಬ್ ಗಳನ್ನು ಎಸೆಯುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ಸ್ಪಷ್ಟವಾಗಿ ತೋರಿಸಿವೆ. ಘಟನಾ ಸ್ಥಳಕ್ಕೆ ಸುಮಾರು 700 ಬಿಜೆಪಿ ಕಾರ್ಯಕರ್ತರು ಧಾವಿಸಿದ್ದರು. ಪೊಲೀಸರೂ ಸ್ಥಳಕ್ಕೆ ಆಗಮಿಸಿ ಕುಮಾರನ್ ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದರು.

ಪ್ರದೇಶದಲ್ಲಿ ದಟ್ಟ ಹೊಗೆ ತುಂಬಿಕೊಂಡಿದ್ದು ದುಷ್ಕರ್ಮಿಗಳು ದೊಣ್ಣೆಯಿಂದ ಕುಮಾರನ್ ರನ್ನು ಥಳಿಸುತ್ತಿದ್ದನ್ನೂ ಸಿಸಿಟಿವಿ ದೃಶ್ಯಾವಳಿ ತೋರಿಸಿದೆ.

Similar News