ಹಸಿವು ಮತ್ತು ರಾಜಕೀಯ

Update: 2023-05-05 18:29 GMT

 ನಾನು ತುಮಕೂರು ಜಿಲ್ಲೆಯ ಶಿರಾದಿಂದ ಸುಮಾರು 27 ಕಿ.ಮೀ. ದೂರವಿರುವ ಹೊಸೂರು ಎಂಬ ಸೇವಾ ವಂಚಿತ ಊರಿನಲ್ಲಿ ಹುಟ್ಟಿದ್ದು, ನಾನು ಹುಟ್ಟಿದ್ದು 20ನೇ ಶತಮಾನದ ಕೊನೆಯಲ್ಲಿ ಆದರೂ ಜೀವನ ಕಟ್ಟಿಕೊಂಡಿದ್ದು 21ನೇ ಶತಮಾನದಲ್ಲಿಯೇ, ನಮ್ಮದು ತುಂಬಾ ಬಡಕುಟುಂಬ ಒಮ್ಮಿಮ್ಮೆ ಊಟವಿಲ್ಲದೆ ಮೇಲ್ವರ್ಗದವರ ತಿಥಿ ಮತ್ತು ಮದುವೆಗಳಲ್ಲಿ ಉಳಿದ ಊಟ ತಿಂದು ಬಂದು ಮಲಗುತ್ತಿದ್ದ ಎಷ್ಟೋ ಉದಾಹರಣೆಗಳು ಇವೆ. ಒಮ್ಮೆ ನಮ್ಮ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ರಾಗಿ ಮತ್ತು ಅಕ್ಕಿ ಒಟ್ಟಿಗೆ ಖಾಲಿಯಾಗಿತ್ತು ಅಪ್ಪಅವೆಲ್ಲವನ್ನು ತರಲು ಅಶಕ್ತನಾಗಿದ್ದ. ಅಜ್ಜಿ ಮತ್ತು ಅಮ್ಮ ಎಲ್ಲರ ಮನೆಗಳಲ್ಲಿಯೂ ಬಟ್ಟಲಿನಲ್ಲಿ ಅಕ್ಕಿ ಮತ್ತು ರಾಗಿಹಿಟ್ಟನ್ನು ಸಾಲ ಮಾಡಿದ್ದರು, ಮತ್ತೆ ಮತ್ತೆ ಹೋಗಿ ಬೇರೆಯವರಲ್ಲಿ ಸಾಲ ಕೇಳಲು ಅವರಿಬ್ಬರಿಗೂ ತಮ್ಮ ಸ್ವಾಭಿಮಾನ ಹಿಂದೆ ಎಳೆಯುತ್ತಿತ್ತು. ನಮ್ಮ ಕುಟುಂಬದಲ್ಲಿ ಅತಿಯಾಗಿ ಊಟ ಮಾಡುತ್ತಿದ್ದವನೆಂದರೆ ನಾನೊಬ್ಬನೇ. ಒಮ್ಮಿಮ್ಮೆ ಮನೆಯಲ್ಲಿ ಯಾರೂ ಇಲ್ಲದಿದ್ದರೆ ಪಾತ್ರೆ ಪೂರ್ತಿ ಖಾಲಿ ಮಾಡಿಬಿಡುತ್ತಿದ್ದೆ. ನನಗೂ ನನ್ನ ತಮ್ಮನಿಗೂ ಮನೆಯಲ್ಲಿ ಊಟಕ್ಕಾಗಿ ಆಗಾಗ ಮಹಾಯುದ್ಧ ನಡೆಯುತ್ತಿತ್ತು. ಮನೆಯಲ್ಲಿ ಹಿಟ್ಟು ಖಾಲಿಯಾದಾಗ ಕೆಲವು ರಾತ್ರಿಗಳು ನಮ್ಮ ಮನೆಯಲ್ಲಿ ನಮ್ಮ ಊರಿನ ಬೋರಿನ ನೀರು ನಮ್ಮ ಆಹಾರವಾಗಿರುತ್ತಿತ್ತು. ಅಪ್ಪ ಯಾಕಾದರೂ ಬೆಳಗ್ಗೆಯಾಗುತ್ತೋ ಎಂದು ಗುನುಗಿ ನಿದ್ರೆಗೆ ಜಾರಿದರೆ, ಅಮ್ಮ ನಮ್ಮನ್ನು ದಿಟ್ಟಿಸಿ ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡು ಮಲಗುತ್ತಿದ್ದಳು. ಅಜ್ಜಿ ದೇವರೇ ಯಾಕಪ್ಪಇಂತಹ ಕಷ್ಟ ಕೊಟ್ಟೆ ಅಂತ ದೇವರಿಗೆ ಹಿಡಿ ಶಾಪ ಹಾಕುತ್ತಾ ನಿದ್ರಿಸಲು ಮುಂದಾಗುತ್ತಿದ್ದಳು. ಆ ಸಮಯದಲ್ಲಿ ನಮಗೆ ಬೇಕಾಗಿದ್ದು ಯಾರ ಸಾಂತ್ವನವೂ ಅಲ್ಲ, ಒಂದು ತುತ್ತು ಅನ್ನ ಮಾತ್ರ. ಆದರೆ ಅದೇ ಇರಲಿಲ್ಲ. ಒಂದು ದಿನ ಬೆಳಗ್ಗೆ ಎದ್ದಾಗ ಅಮ್ಮ ಒಲೆಯಲ್ಲಿ ಸೌದೆ ಹಾಕಿ ಮನೆ ತುಂಬಾ ಹೊಗೆ ಎಬ್ಬಿಸಿದ್ದಳು. ನಾನು ಮಲಗಿಕೊಂಡೇ ಮೃಷ್ಟಾನ್ನ ಭೋಜನದ ಕನಸು ಕಾಣುತ್ತಿದ್ದೆ. ಎದ್ದು ನೋಡಿದರೆ ಒಲೆ ಹೊತ್ತಿಸಿದ್ದಳು. ಎದ್ದು ಬಂದವನೇ ಅಮ್ಮನನ್ನು ಕೇಳಿದಾಗ, ''ಬೇರೆಯವರಿಗೆ ನಮ್ಮ ಮನೆಯಲ್ಲಿ ಅಡುಗೆ ಮಾಡಿಲ್ಲ ಅಂತ ಗೊತ್ತಾಗಬಾರದು ಅಂತ ಒಲೆ ಹೊತ್ತಿಸಿದ್ದೇನೆ. ನಿಮ್ಮಪ್ಪ ಊರೋರ ಹತ್ತಿರ ಸಾಲ ಕೇಳೋಕೆ ಹೋಗಿದ್ದಾರೆ. ಒಂದು ಕೆಜಿ ಅಕ್ಕಿ ತಗೊಂಡ್ ಬರ್ತಾರೆ ಇರು ಅನ್ನ ಮಾಡೋಣ'' ಅಂದಳು. ಆಗಲೇ ನಿರಾಸೆಯಿಂದ ದುಃಖ ಒತ್ತರಿಸಿ ಬಂತು. ಆಗಲೇ ಅಳಲು ಶುರು ಮಾಡಿದೆ. ''ರಾತ್ರಿನೂ ಊಟ ಇಲ್ಲ, ಈಗಲೂ ಇಲ್ಲ, ನನಗೆ ಹೊಟ್ಟೆ ಹಸೀತಿದೆ ಏನಾದರೂ ಕೊಡಮ್ಮ'' ಎಂದು ಜೋರಾಗಿ ಅಳಲು ಶುರು ಮಾಡಿದೆ. ನನ್ನೊಡನೆ ನನ್ನ ತಮ್ಮನೂ ಅಳಲು ಶುರು ಮಾಡಿದ. ಅಮ್ಮ ಮತ್ತು ಅಜ್ಜಿ ಇಬ್ಬರನ್ನು ಸಂತೈಸಲು ವಿಫಲರಾಗಿ ಅವರ ಕಣ್ಣುಗಳು ತೇವಗೊಂಡವು. ಅಪ್ಪಊರಿನಿಂದ ಸಪ್ಪೆ ಮೋರೆ ಹಾಕಿಕೊಂಡು ಸಾಲ ಸಿಗದೆ ಬರಿ ಕೈನಲ್ಲಿ ವಾಪಸ್ಸಾಗಿದ್ದನ್ನು ನೋಡಿ ನನಗೆ ಇನ್ನು ಅಳು ಜಾಸ್ತಿಯಾಯಿತು. ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಆವತ್ತು ರವಿವಾರ ನಮ್ಮೂರಿನಲ್ಲಿ ಮೇಲ್ವರ್ಗದವರ ಒಂದು ದೊಡ್ಡ ವಿವಾಹವಿತ್ತು. ಅವರ ಮನೆಕಡೆಯಿಂದ ಗಾಳಿ ಬೀಸಿದಾಗ ನನ್ನ ಹಸಿವೂ ಇನ್ನೂ ಜಾಸ್ತಿಯಾಗುತ್ತಿತ್ತು. ಕೊನೆಗೆ ನನ್ನ ಹಸಿವಿನ ಕಟ್ಟೆಯೊಡೆದು ಮದುವೆಯ ಮನೆ ಕಡೆ ಓಡಿದೆ. ಅಲ್ಲಿ ನೋಡಿದರೆ ಮುಹೂರ್ತ ಆಗೋವರೆಗೂ ಊಟ ಹಾಕೋದಿಲ್ಲ ಎಂದು ಹೇಳಿ ಬಿಟ್ಟರು. ಅಲ್ಲಿಯೇ ನಿಂತು ಬೇಗ ಸಮಯ ಆಗ್ಲಪ್ಪದೇವರೇ ಎಂದು ಬೇಡಿಕೊಳ್ಳಲು ಶುರು ಮಾಡಿದೆ, ಕೊನೆಗೆ ಊಟದ ಸಮಯ ಬಂದೇ ಬಿಟ್ಟಿತು. ನಾನು ಆಸೆಯಿಂದ ಮೊದಲನೇ ಪಂಕ್ತಿಯಲ್ಲಿ ಕುಳಿತು ಮಾಸಿದ ಶಾಲಾ ಸಮವಸ್ತ್ರದಲ್ಲಿ ಊಟಕ್ಕಾಗಿ ಬಕಾಸುರನಂತೆ ಕಾಯುತ್ತಿದ್ದೆ. ಹಾಗೆಯೇ ನನ್ನ ಪಕ್ಕದಲ್ಲಿ ಮದುವೆಗೆ ಬಂದ ಬಂಧು-ಬಳಗ ಕುಳಿತುಕೊಂಡರು. ಇನ್ನೇನು ಊಟಕ್ಕೆ ಬಾಳೆ ಎಲೆ ಪಡೆಯುವಷ್ಟರಲ್ಲಿ ಮದುವೆ ಮನೆಯವನು ಬಂದು ನೀವು ಕೊನೆಯ ಪಂಕ್ತಿಯಲ್ಲಿ ತಿನ್ನಬೇಕು, ಈಗಲ್ಲ. ಎದ್ದೇಳೋ ಮೇಲೆ'' ಎಂದು ಅವಮಾನಿಸಿ ನನ್ನನ್ನು ಅಲ್ಲಿಂದ ಏಳಿಸಿಯೇ ಬಿಟ್ಟ. ಅವನು ಗದರಿದ ಧ್ವನಿಗೆ ನನ್ನ ಹೃದಯದ ಬಡಿತ ಇನ್ನೂ ಜೋರಾಯಿತು. ಅಲ್ಲಿಂದ ಅಳುತ್ತಾ ಹೊರ ನಡೆದೆ. ಅಂದು ನಾನು ಒಂದು ತುತ್ತು ಅನ್ನಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ ನಮಗೆ ಅನ್ನ ತುಂಬಾ ಅಪರೂಪದ ಆಹಾರವಾಗಿತ್ತು.

ಆಗ ತಾನೇ ಸರಕಾರದಿಂದ ಬಿಪಿಎಲ್ ಕಾರ್ಡಿನವರಿಗೆ ಅಕ್ಕಿ ಕೊಡುತ್ತಾರೆ ಎಂದು ನಮ್ಮೂರಿನ ಸೊಸೈಟಿಯಿಂದ ಒಂದು ಅಧಿಸೂಚನೆ ಬಂದಿತ್ತು, ಅಪ್ಪ ಬಿಪಿಎಲ್ ಕಾರ್ಡ್ ಮಾಡಿಸಲು ಅವರಿವರ ಕೈ ಕಾಲು ಹಿಡಿದು ಅರ್ಜಿ ಹಾಕಿದಾಗ ನಿಮಗೆ ಜಮೀನು ಜಾಸ್ತಿ ಇದೆ ಎಂದು ಎಪಿಎಲ್ ಕಾರ್ಡ್ ಕೊಟ್ಟುಬಿಟ್ಟರು. ಅದಕ್ಕೆ 2 ಲೀಟರ್ ಸೀಮೆಎಣ್ಣೆ ಬಿಟ್ಟರೆ ಬೇರೆ ಏನೂ ಕೊಡುತ್ತಿರಲಿಲ್ಲ. ಹೀಗೆ ನಮ್ಮ ಬಾಲ್ಯವನ್ನು ಅನ್ನವಿಲ್ಲದೆ ಅರೆ ಹೊಟ್ಟೆಯಲ್ಲಿ ಕಳೆದೆವು. ಆನಂತರ ನಾನು 6ನೇ ತರಗತಿಗೆ ಹೋದಾಗ 1ರಿಂದ 5ನೇ ತರಗತಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಜಾರಿಗೆ ತಂದಿದ್ದರು. ನನ್ನ ತಮ್ಮನಿಗೆ ಮಧ್ಯಾಹ್ನದ ಸಮಯದಲ್ಲಿ ಅನ್ನ ಸಿಗುತ್ತಿತ್ತು. ನಾನು ಶಾಲೆಗೆ ಒಂದೇ ಡಬ್ಬಿಯಲ್ಲಿ ಮುದ್ದೆ ಮತ್ತು ಸಾರನ್ನು ಹಾಕಿಕೊಂಡು ಹೋಗುತ್ತಿದ್ದೆ. ಇದನ್ನು ನೋಡಿ ನನ್ನ ಸ್ನೇಹಿತರು ಎಷ್ಟೋ ಸಲ ಅಪಹಾಸ್ಯ ಮಾಡುತ್ತಿದ್ದರು. ದಿನ ಕಳೆದಂತೆ ನಾನು ಡಬ್ಬಿ ತರುವುದನ್ನು ನಿಲ್ಲಿಸಿಬಿಟ್ಟೆ. ನಂತರ ನಾನು ಎಸೆಸೆಲ್ಸಿಗೆ ಬಂದಾಗ ಪ್ರೌಢಶಾಲೆಗೂ ಬಿಸಿಯೂಟದ ಯೋಜನೆಯನ್ನು ವಿಸ್ತರಿಸಿದರು. ಆಗ ನಾನು ಪ್ರತಿ ನಿತ್ಯವೂ ಶಾಲೆಯಲ್ಲಿ ಬೆಳಗ್ಗೆಯದು ಮತ್ತು ಮಧ್ಯಾಹ್ನದ ಊಟವನ್ನು ಒಟ್ಟಿಗೆ ಮಾಡುತ್ತಿದ್ದೆ. ಅಪ್ಪ ಆಗ ತಾನೇ ನಮ್ಮೂರಿನ ಸಾಹುಕಾರರ ಜಮೀನನ್ನು ಕೋರಿ ಪಡೆದು ಗದ್ದೆ ಮಾಡಿ ಭತ್ತ ಬೆಳೆಯಲು ಶುರು ಮಾಡಿದ್ದರು. ಶ್ರಮವಹಿಸಿ ಭತ್ತ ಬೆಳೆಯುತ್ತಿದ್ದರು, ಆದರೆ ನಮ್ಮದು ಅವಿಭಕ್ತ ಕುಟುಂಬವಾದ್ದರಿಂದ ಅವು ಎರಡರಿಂದ ಮೂರು ತಿಂಗಳಿಗೆ ಖಾಲಿಯಾಗುತ್ತಿದ್ದವು. ಮರಳಿ ನಾವು ಅದೇ ಸ್ಥಿತಿಗೆ ಬರುತ್ತಿದ್ದೆವು. ವರ್ಷವಿಡೀ ನಮ್ಮ ಮನೆಯಲ್ಲಿ ಅದೇ ಬಡತನ ಮತ್ತು ಹಸಿವಿನ ನರ್ತನವಾಗುತ್ತಿತ್ತು.


ನಾನು ಪದವಿಗೆ ಬಂದಾಗ ನನ್ನ ವಿದ್ಯಾಭ್ಯಾಸ ಮಾಡಿಸಲು ಅಪ್ಪ ಒದ್ದಾಡುತ್ತಿದ್ದರು. ಪ್ರತಿನಿತ್ಯವೂ ಬಸ್‌ಚಾರ್ಜಿಗೆ ಅಪ್ಪನನ್ನು ತಿಗಣೆ ರಕ್ತ ಹೀರುವಂತೆ ಪೀಡಿಸುತ್ತಿದ್ದೆ. ಆ ಸಮಯದಲ್ಲಿ ಹಬ್ಬಗಳೇನಾದರೂ ಬಂದರೆ ಅಪ್ಪಹಬ್ಬಗಳಿಗೆ ಶಾಪ ಹಾಕುತ್ತಿದ್ದರು, ಯಾಕಾದರೂ ಈ ಹಬ್ಬಗಳು ಬರುತ್ತವೋ ಎಂದು. ನಾನು ಪದವಿಗೆ ಬಂದಾಗ ಸುಮಾರು 2013ನೇ ಇಸವಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡ ನಂತರ ಅನ್ನ ಭಾಗ್ಯ ಎಂಬ ಯೋಜನೆಯನ್ನು ಜಾರಿಗೆ ತಂದರು, ಅಪ್ಪ ಇದೇ ಸರಿಯಾದ ಸಮಯವೆಂದು ರೇಷನ್ ಕಾರ್ಡ್ ಅನ್ನು ಬಿಪಿಎಲ್‌ಗೆ ತಿದ್ದುಪಡಿ ಮಾಡಿಸಿದರು. ಇದರಿಂದ ನಮ್ಮ ಕುಟುಂಬಕ್ಕೆ ಪ್ರತೀ ತಿಂಗಳೂ 28 ಕೆಜಿ ಅಕ್ಕಿ ಸಿಗಲು ಪ್ರಾರಂಭವಾಯಿತು. ಆಗ ಅಪ್ಪಸ್ವಲ್ಪನಿರಾಳನಾದ ಮತ್ತು ನಮ್ಮ ಮನೆಯಲ್ಲಿ ಪ್ರತಿನಿತ್ಯವೂ ಒಲೆ ಉರಿಯಲು ಪ್ರಾರಂಭಿಸಿತು. ಒಂದಂತೂ ನಿಜ ಈ ಯೋಜನೆಯಿಂದ ಎಷ್ಟೋ ಬಡಜನರ ಹೊಟ್ಟೆ ತುಂಬಿದೆ ಮತ್ತು ಕೆಳವರ್ಗದ ಜನರು ಈಗಲೂ ಸಂತೃಪ್ತಿಯಿಂದ ಊಟ ಮಾಡುತ್ತಿದ್ದಾರೆ. ಅನ್ನಕ್ಕಾಗಿ ಖರ್ಚು ಮಾಡುತ್ತಿದ್ದ ಹಣವನ್ನು ಬಡ ಕುಟುಂಬಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಿವೆ. ಹಾಗೆಯೇ ಆಗಾಗ ಕೆಲವು ಉಳ್ಳವರು ಹೇಳುತ್ತಾರೆ ಬಡವರು ಈ ಯೋಜನೆಯಿಂದ ಸೋಮಾರಿಯಾಗುತ್ತಿದ್ದಾರೆ ಎನ್ನುವ ಮಿಶ್ರ ಪ್ರತಿಕ್ರಿಯೆಗಳನ್ನು ಫೇಸ್ ಬುಕ್ ಮತ್ತು ಟಿವಿಗಳಲ್ಲಿ ನೋಡುವಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ನಾನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಸಮಾಜ ಕಾರ್ಯ(ಎಂಎಸ್‌ಡಬ್ಲ್ಯೂ) ಓದುವಾಗ ಹಳ್ಳಿಗಳ ಕುಟುಂಬಗಳ ಮೇಲೆ ಅನ್ನಭಾಗ್ಯ ಯೋಜನೆಯ ಪರಿಣಾಮದ ಮೇಲೆ ಒಂದು ಅಧ್ಯಯನ ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಮಾಡಿದೆ ಮತ್ತು ತುಮಕೂರಿನ ಸುತ್ತಮುತ್ತ ಹಾಗೂ ಶಿರಾ ತಾಲೂಕಿನ ಸುಮಾರು ಹಳ್ಳಿಗಳಲ್ಲಿ ದತ್ತಾಂಶಗಳನ್ನು ಕಲೆ ಹಾಕಿದಾಗಲೇ ನನಗೆ ಗೊತ್ತಾಗಿದ್ದು ತುತ್ತು ಅನ್ನಕ್ಕಾಗಿ ಪ್ರಾಣ ಬಿಟ್ಟ ಜೀವಗಳು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳು ಹಾಗೂ ಅದೇ ಅನ್ನಕ್ಕಾಗಿ ಪಟ್ಟಣ ಸೇರಿದ ಎಷ್ಟೋ ಯುವಕರು ನನ್ನ ಅಧ್ಯಯನದಲ್ಲಿದ್ದರು. ಅನ್ನ ಭಾಗ್ಯ ಯೋಜನೆಯು ಎಷ್ಟೋ ಕೆಳವರ್ಗ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆಸರೆಯಾಗಿದೆ ಮತ್ತು ಸ್ವಾಭಿಮಾನದಿಂದ ಎಷ್ಟೋ ಬಡ ಕುಟುಂಬಗಳು ಎದೆಯುಬ್ಬಿಸಿ ನನ್ನ ಅನ್ನ ನನ್ನ ಹಕ್ಕು ಎಂದು ಹೇಳುವಂತೆ ಮಾಡಿದೆ. ಆದರೂ ಇತ್ತೀಚಿನ ದಿನಗಳಲ್ಲಿ ತಿನ್ನುವ ಅನ್ನದಲ್ಲಿ ರಾಜಕೀಯ ಮಾಡುವ ರಾಜಕೀಯ ನಾಯಕರು ಒಮ್ಮೆ ಕೆಳ ಹಂತಕ್ಕಿಳಿದು ಬಡವರ ಬವಣೆ ಮತ್ತು ಕೆಳವರ್ಗದವರ ನಾಡಿ ಮಿಡಿತವನ್ನು ಅರಿಯಬೇಕಾಗಿದೆ

Similar News