ದೇಶದ ಹೆಮ್ಮೆಯ ಕುಸ್ತಿ ಪಟುಗಳಿಗೆ ನ್ಯಾಯ ಸಿಕ್ಕೀತೇ?

Update: 2023-05-16 03:40 GMT

ಸಾವಿರಾರು ವರ್ಷಗಳಿಂದ ಹೆಣ್ಣು ಮಕ್ಕಳ ಮೇಲೆ ಪುರುಷ ಸಮಾಜ ತುಳಿಯುತ್ತಲೇ ಬಂದಿದೆ. ಹೆಣ್ಣು ಎಂದರೆ ಅವಳು ಪೂಜೆ ಮಾಡುವ ದೇವತೆ, ತ್ಯಾಗಮಯಿ, ಸಹನೆ ಹೀಗೆ ಒಂದಿಷ್ಟು ಹೇಳಿಕೆಗಳನ್ನು ಅವಳ ಮೇಲೆ ಹೊರಿಸಿ ಧ್ವನಿಯಿಲ್ಲದ ಹಾಗೆ ಮಾಡಿರುವ ಸಂಸ್ಕೃತಿ ನಮ್ಮದು. ಹೆಣ್ಣು ಶತಮಾನಗಳಿಂದ ಅಡುಗೆ ಮನೆಗೆ ಮಾತ್ರ ಸೀಮಿತವಾದವಳು. ಸತತವಾಗಿ 24ಗಂಟೆಗಳ ಕಾಲ ಹೆಣ್ಣು ಮನೆಯ ಒಳಗೆ ಇರಬೇಕು. ಅವಳು ತೊಡುವ ಬಟ್ಟೆಯಿಂದ ತಿನ್ನುವ ಆಹಾರದವರೆಗೂ ಒಬ್ಬ ಗಂಡಸು ನಿರ್ಧಾರಿಸುತ್ತಾನೆ ಎಂದರೆ ಹೆಣ್ಣು ಮಕ್ಕಳು ಎಷ್ಟು ತುಳಿತಕ್ಕೆ ಒಳಪಟ್ಟಿದ್ದಾರೆ ಎಂಬುದು ಯೋಚಿಸಬೇಕಾದ ಸಂಗತಿ.

ದಶಕಗಳಿಂದ ಹೆಣ್ಣು ಒಂದು ಗಂಡಿನ ಅಡಿಯಾಳಾಗಿ ಬದುಕುತ್ತಿದ್ದಾಳೆ. ಅವಳಿಗೆ ಅವಳದೇ ಆದ ಆಸೆ, ಆಕಾಂಕ್ಷೆಗಳಿದ್ದರೂ ಎಲ್ಲವು ಪಕ್ಕಕ್ಕೆ ಸರಿಸಿ ಪುರುಷರು ಹೇಳಿದ ಹಾಗೆ ಕೇಳುತ್ತಿದ್ದಾಳೆ. ನಗರಗಳಲ್ಲಿ ಸ್ವಲ್ಪ ಸುಧಾರಣೆಗೆ ಬಂದಿದೆ ಆದರೆ ಹಳ್ಳಿಗಳಲ್ಲಿ ಇನ್ನೂ ಗಂಡಿನ ಅಡಿಯಾಳೇ. ಮನು ತನ್ನ ಪುಸ್ತಕ ಮನುಸ್ಮತಿಯಲ್ಲಿ ಹೆಣ್ಣಿನ ಬಗ್ಗೆ ಹಲವು ನಿರ್ಬಂಧಗಳನ್ನು ಹೇರಿದ್ದ. ಅವುಗಳಲ್ಲಿ ಹಲವು ಆಚರಣೆಯಲ್ಲಿ ಇದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳನ್ನೆೆಲ್ಲ ಹೊಡೆದು ಹಾಕಿ ಗಂಡಿನಷ್ಟೇ ಹೆಣ್ಣಿಗೂ ಬದುಕುವ ಹಕ್ಕಿದೆ ಎಂದು ಹೋರಾಟ ಮಾಡಿದ ಹಲವು ಮಹಿಳೆಯರನ್ನು ಕಂಡಿದ್ದೇವೆ.

ಇತ್ತೀಚೆಗೆ ಮಹಿಳೆಯರು ಸುಧಾರಿಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಗಂಡಿನಷ್ಟೇ ಸಮವಾಗಿ ಬದುಕುವ ಬಲವಿದೆ ಎಂದು ತೋರಿಸಿಕೊಡುತ್ತಿದ್ದಾರೆ. ಆದರೆ ಪುರುಷ ಸಮಾಜ ಮತ್ತೆ ಮತ್ತೆ ಹೆಣ್ಣುಮಕ್ಕಳಿಗೆ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ಕೊಡುತ್ತಾ ಬಂದಿದೆ.

ಇತ್ತೀಚೆಗೆ ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರು ಭಾರತಕ್ಕೆ ಪದಕಗಳನ್ನ್ನು ತಂದು ಕೊಟ್ಟವರು. ಇವರ ಮೇಲೆಯೇ ಲೈಂಗಿಕ ದೌರ್ಜನ್ಯವಾಗಿದೆ. ದೇಶ ಹೆಮ್ಮೆ ಪಡುವಂತಹ ವಿಚಾರವೆಂದರೆ ಒಲಿಂಪಿಕ್‌ನಲ್ಲಿ ಭಾರತಕ್ಕೆ ಹಾಕಿ ಕ್ರೀಡೆ ಬಿಟ್ಟರೆ, ಅತಿ ಹೆಚ್ಚು ಪದಕಗಳನ್ನು ತಂದು ಕೊಟ್ಟ ಶ್ರೇಯ ಕುಸ್ತಿಪಟುಗಳಿಗೆ ಸೇರಬೇಕು.

ಪದಕಗಳನ್ನು ತಂದು ಭಾರತದ ಕೀರ್ತಿಯನ್ನು ಹೆಚ್ಚಿಸಿದ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯವಾಗಿದೆ. ಇದರ ವಿರುದ್ಧ ಧ್ವನಿಯೆತ್ತಿದ ಪಟುಗಳು ದಿಲ್ಲಿಯ ಜಂತರ್ ಮಂತರ್‌ನಲ್ಲಿ ಧರಣಿಗೆ ಕುಳಿತಿದ್ದಾರೆ.

ದಿಲ್ಲಿಯಲ್ಲಿ ಹಗಲು ರಾತ್ರಿಯೆನ್ನದೆ ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಕುಸ್ತಿಪಟುಗಳು ಬೀದಿಗಿಳಿದು ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಇದುವರೆಗೂ ಯಾವುದೇ ನ್ಯಾಯ ಸಿಕ್ಕಿಲ್ಲವೆನ್ನುವುದು ಬೇಸರದ ಸಂಗತಿ.

ಭಾರತದ ಗೌರವವನ್ನು ಹೆಚ್ಚಿಸಿದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಹಾಗೂ ಬಜರಂಗ್ ಪುನಿಯಾ ಅವರು ಕುಸ್ತಿ ಅಖಾಡದಲ್ಲಿ ಪದಕ ಗೆದ್ದು ಆನಂದಬಾಷ್ಪ ಸುರಿಸಿದ್ದರು. ಭಾರತದ ಕುಸ್ತಿ ಪ್ರಿಯರಷ್ಟೇ ಅಲ್ಲದೆ ನೆರೆದೇಶಗಳ ಕುಸ್ತಿ ಪ್ರಿಯರು ಕೂಡಾ ಭಾರತದ ಕುಸ್ತಿಪಟುಗಳತ್ತ ನೋಡುತ್ತಿರುವ ಘಳಿಗೆಯೊಂದು ಉದ್ಭವವಾಗಿತ್ತು. ಭಾರತದ ಕೀರ್ತಿ ಹೆಚ್ಚಿಸಿದ ಮಹಿಳೆಯರಿಗೆ ಭಾರತ ನೀಡಿದ ಗೌರವವೇನು? ಲೈಂಗಿಕ ದೌರ್ಜನ್ಯ ಮತ್ತು ಬೀದಿಯಲ್ಲಿ ಧರಣಿಯೇ?

ಕೆಲ ತಿಂಗಳಿಂದ ಭಾರತದ ಕುಸ್ತಿ ಪಟುಗಳು, ತರಬೇತುದಾರರು ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ವಿನೇಶ್ ಮತ್ತು ಕೆಲ ಮಹಿಳೆಯರು ಆರೋಪಿಸಿದ್ದಾರೆ. ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ಕೇವಲ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಅಷ್ಟೇ ಅಲ್ಲದೆ ಬಜರಂಗ್ ಪುನಿಯ ಜೊತೆಯಲ್ಲಿ ಹಲವರು ದೂರಿದ್ದಾರೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಬೇಜವಾಬ್ದಾರಿ ತೋರಿಸಿರುವುದು ಖಂಡನೀಯ. ಬ್ರಿಜ್ ಭೂಷಣ್ ಸಿಂಗ್ ಉತ್ತರ ಪ್ರದೇಶದವರು ಹಾಗೂ ಭಾರತೀಯ ಜನತಾ ಪಕ್ಷದ ಸಂಸದರು. ಇವರು ಒಬ್ಬ ಪ್ರಭಾವಿ ಹಾಗೂ ಈ ಪ್ರಕರಣದಿಂದ ಸರಕಾರಕ್ಕೆ ಹಾಗೂ ಪಕ್ಷಕ್ಕೆ ಅವಮಾನವಾಗುವುದೆಂಬ ಕಾರಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳಲು ಬಿಜೆಪಿ ಮುಂದಾಗುತ್ತಿಲ್ಲ ಎಂಬ ಆರೋಪ ದೇಶದಾದ್ಯಂತ ಕೇಳಿಬರುತ್ತಿದೆ.

ಇಂತಹ ಪ್ರಕರಣಗಳ ಬಗ್ಗೆ ತಲೆಕೆಡಿಸಿಕೊಳ್ಳುವ  ಬದಲು ಪ್ರಧಾನಿಯವರು ಕರ್ನಾಟಕದ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಮಹಿಳೆಯರ ಸುರಕ್ಷತೆಗಿಂತಲೂ ಇವರಿಗೆ ಪ್ರಚಾರದ ಅವಶ್ಯಕತೆ ಇತ್ತೇ. ‘ಬೇಟಿ ಬಚಾವೋ ಬೇಟಿ ಪಢಾವೋ’ ಕೇವಲ ಘೋಷಣೆಗಷ್ಟೇ ಅಲ್ಲ.  ನುಡಿದಂತೆ ಸರಕಾರ ನಡೆಯಬೇಕಾಗಿದೆ ಎಂದು ನೆನಪಿಸುವ ದುಸ್ಥಿತಿ ದೇಶದ ಜನತೆಗೆ ಬಂದಿದೆ.

ಪಿ.ಟಿ. ಉಷಾ ನೇತೃತ್ವದಲ್ಲಿ ಭಾರತ ಒಲಿಂಪಿಕ್ ಸಂಸ್ಥೆಯು ಏಳು ಜನರ ತನಿಖಾ ಸಮಿತಿಯನ್ನು ರಚಿಸಿದ್ದು, ಮತ್ತೊಂದು ಸಮಿತಿ ರಚನೆಗೆ ಕ್ರೀಡಾ ಇಲಾಖೆ ಮುಂದಾಗಿದೆ. ಕುಸ್ತಿ ಪಟುಗಳು ಈಗಾಗಲೇ ನಮ್ಮಲ್ಲಿ ಎಲ್ಲಾ ಸಾಕ್ಷ್ಯಧಾರಗಳು ಇವೆ ಎಂದು ಹೇಳಿದ್ದಾರೆ. ಆದರೂ ಕ್ರಮ ಜರುಗಿಸದೆ ಪ್ರತಿಭಟನೆಯನ್ನು ವಾಪಸ್ ಪಡೆಯುವಂತೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕುಸ್ತಿಪಟುಗಳ ಮನವೊಲಿಸಲು ಮುಂದಾಗಿದ್ದಾರೆ ಎಂದರೆ ಇದರ ಹಿಂದೆ ಹಲವು ಗಣ್ಯರು ಎನಿಸಿಕೊಳ್ಳುವವರ ಕೈವಾಡವಿದೆ ಎಂದು ಸಂಶಯ ಬರುವುದು ಸತ್ಯ.

ಇದು ಕೇವಲ ಕುಸ್ತಿ ಪಟುಗಳ ಮೇಲೆ ಆಗುತ್ತಿರುವ ದೌರ್ಜನ್ಯವಷ್ಟೇ ಅಲ್ಲ. ಹಲವು ಕ್ಷೇತ್ರಗಳಲ್ಲಿ ತೊಡಗಿರುವ ಮಹಿಳೆಯರ ಮೇಲೂ ಆಗುತ್ತಿವೆ. ಸಿನೆಮಾ ರಂಗ ಮತ್ತು ಖಾಸಗಿ ಕಂಪೆನಿಗಳು, ಸರಕಾರಿ ಕಚೇರಿಗಳು, ಹೀಗೆ ಹಲವು ಕ್ಷೇತ್ರಗಳಲ್ಲಿ ಲೈಂಗಿಕ ಕಿರುಕುಳ ಸಹಿಸಿಕೊಂಡು ಬದುಕುತ್ತಿದ್ದಾರೆ. ಪ್ರಭಾವಿಗಳ ವಿರುದ್ಧ ಧ್ವನಿಯೆತ್ತಲು ಆಗದೆ ಅಸಹಾಯಕರಾಗಿ ಸಹಿಸಿಕೊಳ್ಳುತ್ತಿದ್ದಾರೆ. ಇದಕ್ಕೆೆಲ್ಲ ಕೊನೆ ಯಾವಾಗ ಎಂಬುದು ಪ್ರತೀ ಹೆಣ್ಣು ಮಕ್ಕಳ ಒಳಧ್ವನಿಯಾಗಿದೆ. ಇತ್ತೀಚೆಗೆ ಮಠಾಧೀಶರೊಬ್ಬರು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿರುವ ಕೃತ್ಯ ಕಂಡಿದ್ದೇವೆ. ಹೀಗೆ ಆದರೆ ಮಹಿಳೆಯರು ಸಮಾಜದಲ್ಲಿ ಬದುಕುವುದಾದರೂ ಹೇಗೆ?. ಭಾರತವು ಹೆಣ್ಣು ಮಕ್ಕಳನ್ನು ಪೂಜನೀಯವೆಂದು ಕರೆಯಲ್ಪಡುವ ದೇಶ. ಆದರೆ ಅವರ ಮೇಲೆ ಇಂತಹ ಕೃತ್ಯವೆಸಗುವ ನೀಚರು ದೇಶದಲ್ಲಿ ತುಂಬಿಹೋಗಿದ್ದಾರೆ. ಆದಷ್ಟು ಬೇಗ ಇಂತಹ ನೀಚರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಹೆಣ್ಣು ಮಕ್ಕಳಿಗೆ ನಮ್ಮೊಂದಿಗೆ ಕಾನೂನು, ಸಂವಿಧಾನ ಮತ್ತು ಸರಕಾರವಿದೆ ಎಂದು ಧೈರ್ಯಬರುವಂತೆ ಮಾಡಬೇಕು.

Similar News