ಮಣಿಪುರದ ಬುಡಕಟ್ಟಿನವರ ಮುಗಿಯದ ಸಂಕಟ

Update: 2023-05-25 06:55 GMT

ರವಿವಾರ ಮತ್ತೆ ಮಣಿಪುರದಲ್ಲಿ ಹಿಂಸಾಚಾರ ಮರುಕಳಿಸಿದ ನಂತರ ರಾಜ್ಯದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ರಾಜ್ಯದಲ್ಲಿ ಹಿಂಸಾಚಾರ ಮೊದಲು ಮೇ 3ರಂದು ಉಲ್ಬಣಗೊಂಡಿತು. ಅದರ ನಂತರದ ಕೆಲವು ದಿನಗಳಲ್ಲಿ 70ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು.

ಈ ವಾರದ ಆರಂಭದಲ್ಲಿ ಮತ್ತೆ ಇಂಫಾಲ ಪೂರ್ವ ಜಿಲ್ಲೆಯಲ್ಲಿ ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಕುಕಿ ವಿದ್ಯಾರ್ಥಿ ಸಂಘಟನೆ ಹೇಳಿರುವ ಪ್ರಕಾರ, ನಾಲ್ಕು ಮನೆಗಳು ಬೆಂಕಿಗೆ ತುತ್ತಾಗಿವೆ ಮತ್ತು ಸುಮಾರು 40 ಜನರು ಸಂತ್ರಸ್ತರಾಗಿದ್ದಾರೆ. ಸುಟ್ಟ ಮನೆಗಳು ಮತ್ತು ಜನರನ್ನು ಸ್ಥಳಾಂತರಿಸುತ್ತಿರುವುದರ ವೀಡಿಯೊಗಳನ್ನು ವಿದ್ಯಾರ್ಥಿ ಸಂಘಟನೆ ಹಂಚಿಕೊಂಡಿದೆ.

ರವಿವಾರ ಕೂಡ ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಮಣಿಪುರ ಹಿಂಸಾಚಾರಕ್ಕೆ ಸಾಕ್ಷಿಯಾಯಿತು, ಅಲ್ಲಿ ಗುಂಡಿನ ದಾಳಿಯಿಂದ ಮೂವರು ಗಾಯಗೊಂಡಿದ್ದಾರೆ. ಈ ವೇಳೆ ಚರ್ಚ್ ಮೇಲೆ ಕೂಡ ದಾಳಿಯಾಗಿರುವ ವರದಿಗಳಿವೆ.

ಉದ್ವಿಗ್ನ ಸ್ಥಿತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆಗಾಗಿ ಕುಕಿ ಸಮುದಾಯ ರಾಜ್ಯ ರಾಜಧಾನಿಯಿಂದ ಪಲಾಯನ ಮಾಡುತ್ತಿದೆ. ಪ್ರಸಕ್ತ ಮಣಿಪುರದಲ್ಲಿ ಕೋಮು ಹಿಂಸಾಚಾರದಿಂದಾಗಿ ವಿಶೇಷವಾಗಿ ಇಂಫಾಲ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಾವಿರಾರು ನಿರಾಶ್ರಿತರು ಮಿಜೋರಾಮ್ನಲ್ಲಿ ಆಶ್ರಯ ಪಡೆದಿದ್ದಾರೆ. ವರದಿಯ ಪ್ರಕಾರ, ಹಿಂಸಾಚಾರದಿಂದಾಗಿ ಮಣಿಪುರದಿಂದ ಈವರೆಗೆ ಕುಕಿ ಸಮುದಾಯದ 7,500ಕ್ಕೂ ಹೆಚ್ಚು ಜನರು ನೆರೆಯ ಮಿಜೋರಾಮ್ಗೆ ಪಲಾಯನ ಮಾಡಿದ್ದಾರೆ.

ಸ್ಥಳಾಂತರಗೊಂಡ ಜನರಿಗೆ ಮಿಜೋರಾಮ್ನ ಪರಿಹಾರ ಶಿಬಿರಗಳಲ್ಲಿ ತಾತ್ಕಾಲಿಕ ಆಶ್ರಯ ನೀಡಲಾಗಿದೆ ಎಂದು ವರದಿಯಾಗಿದೆ. ಮಿಜೋರಾಮ್ ಗಡಿಯಲ್ಲಿರುವ ಮಣಿಪುರ ಹೆಚ್ಚಾಗಿ ಕುಕಿಗಳು ವಾಸಿಸುತ್ತಿದ್ದ ಪ್ರದೇಶವಾಗಿದೆ.

ಬಹುಪಾಲು ಮೈತೈ ಸಮುದಾಯ ನಿಗದಿತ ಬುಡಕಟ್ಟು ಸ್ಥಾನಮಾನಕ್ಕಾಗಿ ಬೇಡಿಕೆಯಿಟ್ಟಿದೆ. ಆದರೆ ಬುಡಕಟ್ಟು ಜನಾಂಗದವರಾದ ನಾಗಾಗಳು ಮತ್ತು ಕುಕಿಗಳು ಈ ಬೇಡಿಕೆಯನ್ನು ವಿರೋಧಿಸಿದ್ದಾರೆ. ರಾಜ್ಯ ಸರಕಾರ ಮೈತೈ ಸಮುದಾಯಕ್ಕೆ ಎಸ್ಟಿ ಸ್ಥಾನಮಾನ ನೀಡಬೇಕೆಂದು ಶಿಫಾರಸು ಮಾಡಿದೆ. ಅಖಿಲ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ ಮಣಿಪುರದ ಮೈತೈ ಸಮುದಾಯದ ಬೇಡಿಕೆಯ ವಿರುದ್ಧ ಮತ್ತು ಹೈಕೋರ್ಟ್ ಆದೇಶದ ವಿರುದ್ಧ ಮಣಿಪುರದಲ್ಲಿ ಆಯೋಜಿಸಿದ್ದ ಏಕತಾ ಮೆರವಣಿಗೆ ವೇಳೆ ಹಿಂಸಾಚಾರ ಶುರುವಾಯಿತು.

ಈಗ ಆರೋಪಿಸಲಾಗುತ್ತಿರುವ ಪ್ರಕಾರ, ಅರಂಬೈ ಟೆಂಗ್ಗೋಲ್ ಎಂಬ ಮೈತೈ ಸ್ವಯಂಸೇವಕ ಗುಂಪು 20ಕ್ಕೂ ಹೆಚ್ಚು ಹಳ್ಳಿಯ ಮನೆಗಳನ್ನು ಸುಟ್ಟುಹಾಕಿದೆ. ಅರಂಬೈ ಟೆಂಗ್ಗೋಲ್ ಎಂಬ ಹೆಸರು ಐತಿಹಾಸಿಕವಾಗಿ ಮಣಿಪುರಿ ರಾಜರು ಬಳಸುವ ಆಯುಧದಿಂದ ಬಂದಿದ್ದಾಗಿದೆ. ಅರಂಬೈ ಟೆಂಗ್ಗೋಲ್ ಜೊತೆಗೇ ಮೈತೈ ಲೀಪನ್ ಎಂಬ ಇನ್ನೊಂದು ಗುಂಪು ಕೂಡ ಅಲ್ಲಿ ಕಳೆದ ಒಂದು ವರ್ಷದಲ್ಲಿ ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ ಎನ್ನಲಾಗುತ್ತಿದೆ.

ಅರಂಬೈ ಪಡೆಗಳಿಗೆ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಬೆಂಬಲವೂ ಇದೆ ಎಂಬುದು ಕುಕಿ ವಿದ್ಯಾರ್ಥಿ ಸಂಘಟನೆಯ ಆರೋಪ. ಅರಂಬೈ ಟೆಂಗ್ಗೋಲ್ ಮತ್ತು ಮೈತೈ ಲೀಪನ್ ಅಂಥ ಸಂಘಟನೆಗಳು ಅವರದೇ ಮೈತೈ ಸಮುದಾಯಕ್ಕೆ ಸೇರಿದ ಚರ್ಚುಗಳನ್ನು ಧ್ವಂಸಗೊಳಿಸಿ ಬೆಂಕಿಗೆ ತುಪ್ಪಸುರಿಯುತ್ತಿವೆ ಎಂದು ಕಾಂಗ್ರೆಸ್ ಪಕ್ಷದ ಮಣಿಪುರ ಉಸ್ತುವಾರಿ ಭಕ್ತ ಚರಣ್ ದಾಸ್ ಆರೋಪಿಸುತ್ತಾರೆ.

ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿರೇನ್ ಸಿಂಗ್, ಮಾಜಿ ಶಾಸಕ ಸೇರಿ ಮೂವರು ವ್ಯಕ್ತಿಗಳು ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಿದ್ದಾರೆಂಬ ಆರೋಪಗಳಿದ್ದು, ಡಬಲ್ ಬ್ಯಾರೆಲ್ ಬಂದೂಕುಗಳನ್ನು ಹೊಂದಿದ್ದವರು ವ್ಯಾಪಾರಿಗಳಿಗೆ ಬೆದರಿಕೆ ಹಾಕುತ್ತಿದ್ದರು, ಸುತ್ತಮುತ್ತಲಿನ ಪ್ರದೇಶ ಖಾಲಿ ಮಾಡುವಂತೆ ಬಲಾತ್ಕರಿಸುತ್ತಿದ್ದರು. ಈ ಪಿತೂರಿಯಲ್ಲಿ ಮಾಜಿ ಶಾಸಕ ಭಾಗಿಯಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.

ಅಂತೂ, ಅರಣ್ಯವಾಸಿಗಳ ತೆರವುಗೊಳಿಸುವಿಕೆ ವಿರುದ್ಧ ಶುರುವಾದ ಹೋರಾಟ ಕಡೆಗೆ ಕೋಮು ಸ್ವರೂಪ ಪಡೆದಿರುವುದು ಮತ್ತು ಅದು ರಾಜ್ಯದ ಶಾಂತಿಯನ್ನೇ ಕದಡಿರುವುದು ಮಾತ್ರ ವಿಚಿತ್ರ. ಕ್ರೈಸ್ತ ಮತೀಯರಾದ ಬುಡಕಟ್ಟು ಸಮುದಾಯದ ವಿರುದ್ಧ ವ್ಯವಸ್ಥಿತ ಷಡ್ಯಂತ್ರವೊಂದು ಹೀಗೆ ನಡೆದಿದೆ ಎಂಬುದು ಗೊತ್ತಾಗುತ್ತಲೇ ಇದೆ.

(ಕೃಪೆ: thewire.in)

Similar News