ದುರಂತದಲ್ಲಿ ಅಂತ್ಯಕಂಡ ಹುಟ್ಟುಹಬ್ಬ ಆಚರಣೆ: ಸ್ನೇಹಿತರಿಂದಲೇ ಯುವಕನ ಇರಿದು ಹತ್ಯೆ

Update: 2023-06-06 12:40 GMT

ಮುಂಬೈ: 10,000 ರೂಪಾಯಿ ಮೌಲ್ಯದ ಆಹಾರದ ಬಿಲ್ ಅನ್ನು ಹಂಚಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿ  20 ವರ್ಷದ ಯುವಕನೊಬ್ಬನನ್ನು ಆತನ ನಾಲ್ವರು ಸ್ನೇಹಿತರೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದ್ದು, ಯುವಕನ ಹುಟ್ಟುಹಬ್ಬ ಆಚರಣೆ ದುರಂತದಲ್ಲಿ ಕೊನೆಗೊಂಡಿದೆ.

ಕಳೆದ ವಾರ ಮುಂಬೈನ ಗೋವಂಡಿಯ ಬೈಗನವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಅಹಮದಾಬಾದ್ನಿಂದ ಇಬ್ಬರು ಆರೋಪಿಗಳಾದ ಶಾರುಖ್ ಹಾಗೂ ನಿಸಾರ್ ಅವರನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಅಪ್ರಾಪ್ತ ಆರೋಪಿಗಳನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಿದ್ದಾರೆ.
ಮೃತ ಯುವಕ ಸಬೀರ್ ಅನ್ಸಾರಿ, ಮೇ 31 ರಂದು ರಸ್ತೆ ಬದಿಯ ಉಪಾಹಾರ ಗೃಹದಲ್ಲಿ (ಧಾಬಾ) ಹುಟ್ಟುಹಬ್ಬವನ್ನು ಆಯೋಜಿಸಿದ್ದ, ಅಲ್ಲಿ ಆಹಾರದ ಬಿಲ್ ಸುಮಾರು 10,000 ರೂ.ಆಗಿತ್ತು.
ನಾವು ಬಳಿಕ ಹಣ ನೀಡುವುದಾಗಿ ನಾಲ್ವರು ಆರೋಪಿಗಳು ಸಬೀರ್ ಗೆ ಹೇಳಿದ್ದು, ಬಳಿಕ ಸಬೀರ್ ಆಹಾರದ ಬಿಲ್ ಪಾವತಿಸಿ ಮನೆಗೆ ಮರಳಿದ್ದಾನೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರೋಪಿ ಶಾರುಖ್ ಹಾಗೂ  ಆತನ ಇತರ ಮೂವರು ಸ್ನೇಹಿತರ ಬಳಿ ಹಣ ಕೇಳಲು ಸಬೀರ್ ಹೋದಾಗ ಅವರು ಹಣ ನೀಡಲು ನಿರಾಕರಿಸಿ ಬೆದರಿಕೆ ಹಾಕಿದ್ದಾರೆ.
ನಂತರ ಸಬೀರ್ ಅಲ್ಲಿಂದ ಹೊರಟು ತನ್ನ ಇನ್ನೊಬ್ಬ ಸ್ನೇಹಿತನಿಗೆ ಘಟನೆಯ ಬಗ್ಗೆ ತಿಳಿಸಿದ್ದಾನೆ.

ನಂತರ ರಾತ್ರಿ 8 ಗಂಟೆ ಸುಮಾರಿಗೆ ಶಿವಾಜಿ ನಗರ ಪ್ರದೇಶದ ಶಾಲೆಯೊಂದರ ಬಳಿ ಸಬೀರ್ ತನ್ನ ಇತರ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾಗ ಆರೋಪಿಗಳು ಸ್ಥಳಕ್ಕೆ ಧಾವಿಸಿ ಆತನನ್ನು ನಿಂದಿಸಿ ಜಗಳವಾಡಿದ್ದಾರೆ. ಅವರು ಸಬೀರ್ ಮೇಲೆ ಹರಿತವಾದ ಆಯುಧದಿಂದ ಹಲವು ಬಾರಿ ಥಳಿಸಿ ತೀವ್ರವಾಗಿ ಗಾಯಗೊಳಿಸಿದ್ದರು. ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಸಬೀರ್ ರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಯುವಕನು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

Similar News