ಬೆಂಗಳೂರು | ಪಾಕ್ ಪರ ಘೋಷಣೆ; ಛತ್ತೀಸ್ಗಢ ಮೂಲದ ಶುಭಾಂಶು ಶುಕ್ಲಾ ಬಂಧನ
ಶುಭಾಂಶು ಶುಕ್ಲಾ (26)
ಬೆಂಗಳೂರು: ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ವೈಟ್ಫೀಲ್ಡ್ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಛತ್ತೀಸ್ಗಢ ಮೂಲದ ಶುಭಾಂಶು ಶುಕ್ಲಾ(26) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೇ 9ರಂದು ನಗರದ ವೈಟ್ಫೀಲ್ಡ್ ನ ಪ್ರಶಾಂತ್ ಲೇಔಟ್ನಲ್ಲಿ ಆರೋಪಿಯು ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಆರೋಪ ಕೇಳಿಬಂದಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಮೇ 7ರಂದು ಭಾರತೀಯ ರಕ್ಷಣಾ ಪಡೆಗಳು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದಲ್ಲಿನ ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಿದ್ದವು.
ಭಾರತೀಯ ಕಾರ್ಯಾಚರಣೆಯ ಯಶಸ್ಸನ್ನು ಮೇ 9ರಂದು ಪ್ರಶಾಂತ್ ಲೇಔಟ್ನಲ್ಲಿ ಯುವಕರು ಸಂಭ್ರಮಿಸುತ್ತಿದ್ದರು. ಈ ವೇಳೆ ಪಿ.ಜಿ.ಯ ಬಾಲ್ಕನಿಯಲ್ಲಿ ನಿಂತಿದ್ದ ಶುಭಾಂಶು ಶುಕ್ಲಾ, ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ. ಈ ಘೋಷಣೆಯನ್ನು ಕೇಳಿ ಗಾಬರಿಗೊಂಡ ಯುವಕರು, ಗಮನಿಸಿದಾಗ ಇಬ್ಬರು ಯುವಕರು ಬಾಲ್ಕನಿಯಲ್ಲಿ ನಿಂತು ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಸಹಾಯವಾಣಿಗೆ ಸ್ಥಳೀಯ ಯುವಕರು ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಧಾವಿಸಿದ ವೈಟ್ಫೀಲ್ಡ್ ಠಾಣೆಯ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಿಸಿದಾಗ ಶುಭಾಂಶು ಶುಕ್ಲಾ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಖಚಿತವಾಗಿದೆ. ಆರೋಪಿ ಶುಭಾಂಶು ಶುಕ್ಲಾ ಬೆಂಗಳೂರಿನ ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದ, ಸದ್ಯ ಪ್ರಕರಣ ದಾಖಲಿಸಿಕೊಂಡು ಆತನನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.