ಸೂಕ್ಷ್ಮಾಣುಜೀವಿ ನಿರೋಧಕತೆಯನ್ನು ತಡೆಗಟ್ಟುವಲ್ಲಿ ಸಂಘಟಿತ ಪ್ರಯತ್ನ ಅಗತ್ಯ : ಸಚಿವ ಭೋಸರಾಜು
ಬೆಂಗಳೂರು : ಸೂಕ್ಷ್ಮಾಣುಜೀವಿ ನಿರೋಧಕತೆ ವಿಶ್ವದಲ್ಲಿ ನಿಶ್ಯಬ್ದ ಸಾಂಕ್ರಾಮಿಕ ರೋಗವಾಗಿ ಹರಡುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳವ್ಯಕ್ತಪಡಿಸಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ಅಗತ್ಯವಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.
ಬುಧವಾರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮೆ ಆಯೋಜಿಸಿರುವ ‘ಸೂಕ್ಷ್ಮಾಣುಜೀವಿ ನಿರೋಧಕತೆ: ತಡೆಗಟ್ಟುವ ಕಾರ್ಯತಂತ್ರಗಳು ಮತ್ತು ಪರ್ಯಾಯಗಳು’ ಎನ್ನುವ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದಲ್ಲಿ, India AMR Innovation Hub ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಸಂಶೋಧಕರು, ವೈದ್ಯರು ಮತ್ತು ನೀತಿ ರೂಪಿಸುವ ತಜ್ಞರು ತಾವು ಅನುಭವಿಸುತ್ತಿರುವ ಸನ್ನಿವೇಶಗಳಿಗೆ ತಕ್ಕ ಪರಿಹಾರಗಳನ್ನು ಹುಡುಕಲು ಒಟ್ಟಾಗಿ ಕೆಲಸ ಮಾಡುವಂತೆ ಪ್ರೋತ್ಸಾಹಿಸುತ್ತಿದೆ. ಎಎಂಆರ್ ವಿರುದ್ಧ ಹೋರಾಟದಲ್ಲಿ ಕೇಂದ್ರ-ರಾಜ್ಯ ಸರಕಾರಗಳು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕಾರ್ಯಯೋಜನೆಗಳ ಮೂಲಕ ಜನಜಾಗೃತಿ ಮೂಡಿಸುತ್ತಿದೆ ಎಂದರು.
ಔಷಧ ಬಳಕೆಯ ಮೇಲ್ವಿಚಾರಣೆ, ಮಾರಾಟದ ನಿಯಂತ್ರಣ ಮತ್ತು ಮಾನವರು ಹಾಗೂ ಪ್ರಾಣಿಗಳಲ್ಲಿ ಆಂಟಿಬಯೋಟಿಕ್ಗಳ ಸಮರ್ಪಕ ಬಳಕೆಗಾಗಿ ಕಾರ್ಯನಿರ್ವಹಿಸುತ್ತಿವೆ. ನಮ್ಮ ಕರ್ನಾಟಕವು ಈ ಸಂಬಂಧ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದು, ಬೆಂಗಳೂರು ಸೇರಿದಂತೆ ಅನೇಕ ಪ್ರಸಿದ್ಧ ಸಂಶೋಧನಾ ಸಂಸ್ಥೆಗಳು ಎಎಂಆರ್ಗೆ ಪ್ರತಿಕ್ರಿಯಿಸಲು ಹೊಸಪದ್ಧತಿಗಳನ್ನು ಅಭಿವೃದ್ಧಿಪಡಿಸುತ್ತಿವೆ ಎಂದರು.
ಎಎಂಆರ್ ವಿರುದ್ಧ ಹೋರಾಟವು ಕೇವಲ ವೈಜ್ಞಾನಿಕ ಸವಾಲು ಮಾತ್ರವಲ್ಲ, ಅದು ನೈತಿಕ ಬದ್ಧತೆಯೂ ಹೌದು. ನಾವು ನಮ್ಮ ಸಂಘಟಿತ ಜ್ಞಾನ ಹಾಗೂ ಬದ್ಧತೆಯಿಂದ ಈ ಸವಾಲನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಈ ಮೂಲಕ ನಾವು ಸಾರ್ವಜನಿಕ ಆರೋಗ್ಯ ರಕ್ಷಣೆ, ಆಹಾರ ಭದ್ರತೆ ಹಾಗೂ ಶಾಶ್ವತ ಅಭಿವೃದ್ಧಿಗೆ ನಮ್ಮ ಬದ್ದತೆಯನ್ನು ತೋರಿಸಬಹುದಾಗಿದೆ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಉಪ ಮಹಾನಿರ್ದೇಶಕ ಡಾ. ರಾಘವೇಂದ್ರ ಭಟ್ಟ, ನಿಟ್ಟೆ ವಿವಿ ಸಲಹೆಗಾರ ಡಾ.ಕರುಣಾ ಸಾಗರ್, ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಫಿಷರೀಸ್ ಎಜುಕೇಷನ್ ಸಂಸ್ಥೆಯ ವಿಶ್ರಾಂತ ಕುಲಪತಿ ಡಾ.ಸಿ.ಎನ್.ರವಿಶಂಕರ್, ನಿಟ್ಟೆ ವಿವಿ ನಿರ್ದೇಶಕಿ ಪ್ರೊ.ಇಂದ್ರಾಣಿ ಕರುಣಾ ಸಾಗರ್, ಅಕಾಡೆಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ. ಎಂ.ರಮೇಶ್ ಮತ್ತು ಹಿರಿಯ ವೈಜ್ಞಾನಿಕಾಧಿಕಾರಿ ಡಾ.ಆರ್.ಆನಂದ್ ಉಪಸ್ಥಿತರಿದ್ದರು.