ಕುರ್ಆನ್ ಸುಟ್ಟ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಕಠಿಣ ಶಿಕ್ಷೆ ವಿಧಿಸಲು ಆಗ್ರಹ
ಬೆಳಗಾವಿ ತಾಲ್ಲೂಕಿನ ಸಂತಿ ಬಸ್ತವಾಡ ಗ್ರಾಮದ ಮಸೀದಿ ಪಕ್ಕದಲ್ಲಿ ಸುಟ್ಟುಹಾಕಿದ ಕುರ್ಆನ್ ಮತ್ತು ಹದೀಸ್ನ ಅವಶೇಷಗಳನ್ನು ಯುವಕರು ಸಂಗ್ರಹಿಸಿದರು
ಬೆಂಗಳೂರು : ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದ ಮಸೀದಿಯಲ್ಲಿದ್ದ ಇಸ್ಲಾಮ್ ಧರ್ಮಗ್ರಂಥ ಕುರ್ಆನ್ ಮತ್ತು ಹದೀಸ್ ಅನ್ನು ಸೋಮವಾರ ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ. ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಕಠಿಣ ಶಿಕ್ಷೆ ವಿಧಿಸಿ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಾಧ್ಯಕ್ಷ ಹಬೀಬುಲ್ಲಾ ಖಾನ್ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಎಲ್ಲಿಯೂ ಈ ರೀತಿಯ ಘಟನೆ ನಡೆದಿಲ್ಲ. ಆದರೆ, ಬೆಳಗಾವಿಯಲ್ಲಿ ಮಾತ್ರ ಇಂತಹ ಘಟನೆ ನಡೆದಿದೆ. ಈ ಘಟನೆ ಹಿಂದೆ ಕಾಣದ ಕೈಗಳ ಕೈವಾಡ ಅಡಗಿದೆ. ಈ ಘಟನೆ ಯಾರು ಮಾಡಿದ್ದಾರೆ? ಅವರಿಗೆ ಕುಮ್ಮಕ್ಕು ಕೊಟ್ಟವರು ಯಾರು? ಎಂಬುವುದನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ಕೆಲವೊಂದು ರಾಜಕಾರಣಿಗಳು ಹಾಗೂ ಬಿಜೆಪಿ ಸಂಘಪರಿವಾರವೂ ಕೋಮು ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇದರ ಪ್ರೇರಣೆಯಿಂದ ಇಂತಹ ಘಟನೆಗಳು ಸಾಕ್ಷಿಯಾಗುತ್ತದೆ. ಕೋಮುವಾದಕ್ಕೆ ಪ್ರಚೋದನೆ ನೀಡುತ್ತಿರುವ ವ್ಯಕ್ತಿಗಳ ವಿರುದ್ದ ರಾಜ್ಯ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಬೀಬುಲ್ಲಾ ಖಾನ್ ಹೇಳಿದ್ದಾರೆ.
ಪೊಲೀಸರು ತಪ್ಪಿತಸ್ಥ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಅವರ ವಿರುದ್ದ ಕೋಮು ಪ್ರಚೋದನೆ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ