ಬೆಂಗಳೂರು | ಎಂಎನ್ಸಿ ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ ಆರೋಪ: ಖಾಸಗಿ ಕಂಪೆನಿಯ ಎಚ್.ಆರ್. ಬಂಧನ
ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ಪ್ರಕರಣದಡಿ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ವಂಚನೆಗೊಳಗಾದ ಯುವತಿಯು ನೀಡಿದ ದೂರು ಆಧರಿಸಿ ಮೆಕ್ರೋಸಾಫ್ಟ್, ಬಾಷ್ ಸೇರಿ ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 8 ಮಂದಿ ಉದ್ಯೋಗಾಕಾಂಕ್ಷಿಗಳಿಂದ 14.23 ಲಕ್ಷ ರೂ. ಹಣ ಪಡೆದಿದ್ದ ಆರೋಪದಡಿ ಖಾಸಗಿ ಕಂಪೆನಿಯ ಮಾನವ ಸಂಪನ್ಮೂಲ ಅಧಿಕಾರಿ(ಎಚ್.ಆರ್.) ಪತ್ನೂಲ್ ಕಲಂದರ್ ಖಾನ್ (43) ಎಂಬಾತನನ್ನು ಬಂಧಿಸಿ, ಆತನಿಂದ 1.50 ಲಕ್ಷ ರೂ.ಹಣ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ವಿವರಿಸಿದ್ದಾರೆ.
ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ. ಪ್ರಮುಖ ಆರೋಪಿ ಕಲಂದರ್ ಜೆ.ಪಿ.ನಗರದ ಸಾರಕ್ಕಿ ನಿವಾಸಿಯಾಗಿದ್ದು, ಖಾಸಗಿ ಕಂಪೆನಿಯಲ್ಲಿ ಎಚ್ಆರ್ ಆಗಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ವಂಚನೆಗೊಳಗಾದ ಯುವತಿಯು ಆರೋಪಿ ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಕೆಲಸ ಖಾಲಿಯಿರುವುದಾಗಿ ಆನ್ಲೈನ್ನಲ್ಲಿ ತಿಳಿದುಕೊಂಡು ಸಂದರ್ಶನಕ್ಕೆ ಹೋಗಿದ್ದಳು.
ಸಂದರ್ಶನ ನಡೆಸಿದ ಆರೋಪಿಯು ವಿದ್ಯಾರ್ಹತೆ ಹೆಚ್ಚಿದ್ದು, ಪ್ರತಿಷ್ಠಿತ ಕಂಪೆನಿಯಲ್ಲಿ ನನ್ನ ಸ್ನೇಹಿತರಿದ್ದಾರೆ. ಅಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಆಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಮೆಕ್ರೋಸಾಫ್ಟ್ ಕಂಪೆನಿಯಲ್ಲಿ ಕೆಲಸ ಖಾಲಿಯಿದ್ದು, ಹುದ್ದೆ ಕೊಡಿಸಬೇಕಾದರೆ 2.70 ಲಕ್ಷ ರೂ. ಖರ್ಚಾಗಲಿದೆ ಎಂದು ಸುಳ್ಳು ಹೇಳಿ ಯುವತಿಯಿಂದ ಹಣ ವರ್ಗಾಯಿಸಿಕೊಂಡಿದ್ದ. ಇದೇ ರೀತಿ ಇನ್ನಿತರ ಏಳು ಮಂದಿಗೂ ಕೆಲಸ ಕೊಡಿಸುವುದಾಗಿ ಹೇಳಿ ಒಟ್ಟು 14.23 ಲಕ್ಷ ರೂಪಾಯಿ ಯುಪಿಎ ಮೂಲಕ ಹಣ ವರ್ಗಾಯಿಸಿ ಮೋಸ ಮಾಡಿದ್ದ. ಸದ್ಯ ಆರೋಪಿಯನ್ನು ಬಂಧಿಸಿದ್ದು, ಕೃತ್ಯಕ್ಕೆ ಸಹಕರಿಸಿದ್ದ ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.