×
Ad

ಜನಿವಾರ ವಿವಾದ | ಕೇಂದ್ರದ ಪರೀಕ್ಷಾ ಪ್ರಾಧಿಕಾರಗಳ ನೀತಿ ಘಟನೆ ನಡೆಯಲು ಕಾರಣ: ರಾಮಲಿಂಗಾ ರೆಡ್ಡಿ

Update: 2025-04-21 23:53 IST

ಬೆಂಗಳೂರು : ‘ಜನಿವಾರ’ ಪ್ರಕರಣದಂತಹ ಘಟನೆ ನಡೆಯಲು ಕೇಂದ್ರ ಸರಕಾರದ ಪರೀಕ್ಷಾ ಪ್ರಾಧಿಕಾರಗಳ ನೀತಿಗಳು ಕಾರಣ. ಹೀಗಾಗಿ, ಇಂತಹ ನೀತಿಗಳ ಸಡಿಲಿಕೆಗೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸಲಹೆ ನೀಡಿದ್ದಾರೆ.

ಸೋಮವಾರ ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಪತ್ರ ಬರೆದಿರುವ ಅವರು, ‘ಸಿಇಟಿ ಪರೀಕ್ಷೆ ತಪಾಸಕರು, ವಿಧ್ಯಾರ್ಥಿಯ ಜನಿವಾರ ತೆಗೆಸಿರುವ ಪ್ರಕರಣ ತೀವ್ರ ಆಘಾತ ಉಂಟುಮಾಡಿದೆ. ಈ ಘಟನೆ ಆ ವಿದ್ಯಾರ್ಥಿಯ ಮನಸ್ಸನ್ನು ಎಷ್ಟು ಘಾಸಿಗೊಳಿಸಿರಬಹುದು ಎಂಬುದನ್ನು ಊಹಿಸಲಾಧ್ಯ. ಇದನ್ನು ನಾನು ಖಂಡಿಸುತ್ತೇನೆ’ ಎಂದು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಬಿಜೆಪಿಗರು ವಿನಾಕಾರಣ ರಾಜಕಾರಣಮಾಡುತ್ತಾ ಸಿದ್ದರಾಮಯ್ಯ ಸರಕಾರದ ಕುರಿತು ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡುತ್ತಿರುವುದು ಮತ್ತಷ್ಟು ಕಳವಳಕಾರಿ. ಜನಿವಾರ ತೆಗೆಸುವುದು, ಮಾಂಗಲ್ಯ ತೆಗೆಸುವುದು, (ಕಳೆದ ಬಾರಿಯ ಕೆಎಎಸ್ ಪರೀಕ್ಷೆಯಲ್ಲಿ ನಡೆದ ಘಟನೆ) ಹಿಜಾಬ್ ತೆಗೆಸುವುದು ಒಬ್ಬ ವ್ಯಕ್ತಿಯ ಧಾರ್ಮಿಕ ನಂಬಿಕೆಗೆ ಚ್ಯುತಿ ತರುವ ಕೆಲಸ, ಖಂಡಿತ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರಕಾರದ ಪರೀಕ್ಷಾ ಪ್ರಾಧಿಕಾರಗಳೇ ಮಾಡಿರುವ ಕಾನೂನು ಹಾಗೂ ವಸ್ತ್ರ ಸಂಹಿತೆ ನಿಯಮಗಳು ಭಾರತದಾದ್ಯಂತ ಅನ್ವಯವಾಗುತ್ತವೆ. ಈ ನಿಯಮಕ್ಕೂ ಸಿದ್ದರಾಮಯ್ಯ ಸರಕಾರಕ್ಕೂ ಅಥವಾ ನಿಯಮ ಪಾಲನೆ ಮಾಡಿದ ಪರೀಕ್ಷಾ ಕೇಂದ್ರದ ತಪಾಸಕರಿಗೂ ಯಾವ ರೀತಿಯ ಸಂಬಂಧ ಎಂದು ಅವರು ಪ್ರಶ್ನಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಸ್ತ್ರ ಸಂಹಿತೆ ನೀಟ್, ಸಿಇಟಿ ಪರೀಕ್ಷೆಗಳಲ್ಲಿ ನಿಷ್ಪಕ್ಷಪಾತತೆ ಮತ್ತು ಶುದ್ಧತೆಯನ್ನು ಕಾಪಾಡುವ ಉದ್ದೇಶ ಒಳಿತೆ. ಆದರೆ ಕೇಂದ್ರ ಸರಕಾರದ ಪರೀಕ್ಷಾ ಮಾರ್ಗಸೂಚಿಗಳಲ್ಲಿ ಕೆಲವೊಂದನ್ನು ಮಾರ್ಪಾಡು ಮಾಡಿ ಧಾರ್ಮಿಕ ಸ್ವಾತಂತ್ರ್ಯ ಕಾಪಾಡಲು, ರಕ್ಷಿಸಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕೇಂದ್ರದ ನೀಟ್ ಪರೀಕ್ಷೆ National Testing Agency (NTA) ಮೂಲಕ ನಡೆಯುವ ಪರೀಕ್ಷೆ. ಸಿಇಟಿ ಪರೀಕ್ಷೆಯು ರಾಜ್ಯ ಮಟ್ಟದಿದ್ದರೂ, ತಂತ್ರಜ್ಞಾನ ಮೂಲಕದ ನಕಲು ತಡೆಗೆ ಕೇಂದ್ರದ ಮಾರ್ಗಸೂಚಿಗಳನ್ನು ರಾಜ್ಯದ ಎಲ್ಲ ಶಿಕ್ಷಣ ಇಲಾಖೆಯೂ ಅನುಸರಿಸುತ್ತದೆ. ಪರೀಕ್ಷೆಗೆ ಉದ್ದ ಅಂಗಿ, ಜಾಕೆಟ್, ಕೋಟ್, ಕೈದಾರ, ಜನಿವಾರ, ಬೂಟ್, ಕೈಗೆ ಯಾವುದೇ ದಾರ, ವಾಚು, ದಪ್ಪ/ ಅತಿಯಾದ ಮೇಕಪ್, ಗಟ್ಟಿ ಅಲಂಕಾರ, ದುಪ್ಪಟ, ಚೈನ್, ಕಿವಿಗೆಜ್ಜೆ, ಸರ, ಉಂಗುರ ಎಲ್ಲ್ಲ ಆಭರಣಗಳ ಧಾರಣೆ, ಮುಚ್ಚಿದ ಪಾದರಕ್ಷೆ ನಿಷಿದ್ಧ ಎಂದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಸುಪ್ರೀಂ ಕೋರ್ಟ್ ಅನ್ವಯ, ಧಾರ್ಮಿಕ ಆಚರಣೆಗೆ ಹಕ್ಕಿದೆ ಆದರೆ ಪರೀಕ್ಷಾ ಕೇಂದ್ರದ ಭದ್ರತೆ ತಪಾಸಣೆಯ ನಂತರ ಮಾತ್ರ ಧರಿಸಲು ಅನುಮತಿ ಇದೆ. ‘ಪರೀಕ್ಷೆಯಲ್ಲಿ ಶುದ್ಧತೆಯನ್ನು ಕಾಪಾಡುವುದು ಪ್ರಧಾನ, ಆದರೆ ಧಾರ್ಮಿಕ ಸ್ವಾತಂತ್ರ್ಯವನ್ನು ನಿರ್ಲಕ್ಷಿಸಬಾರದು’ ಎಂಬ ಸಮತೋಲನದ ತೀರ್ಪನ್ನು ನ್ಯಾಯಾಲಯಗಳು ನೀಡಿವೆ. ಆದ್ದರಿಂದ ತಮ್ಮ ಇಲಾಖೆ ವತಿಯಿಂದ ಕೇಂದ್ರ ಸರಕಾರಕ್ಕೆ ಪತ್ರ ಬರೆದು, ಪರೀಕ್ಷಾ ಮಾರ್ಗಸೂಚಿಯ ವಸ್ತ್ರಸಂಹಿತೆ ನೀತಿಯಲ್ಲಿ ಅವಶ್ಯಕ ಬದಲಾವಣೆ ಮಾಡುವಂತೆ ಕೋರುವ ಸಂಬಂಧ ಮುಂದಿನ ಕ್ರಮವಹಿಸಬೇಕು ಎಂದು ರಾಮಲಿಂಗಾರೆಡ್ಡಿ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News