ಪುತ್ರನಿಂದಲೇ ಹತ್ಯೆಗೀಡಾದ 'ಕಡೈಸಿ ವಿವಸಾಯಿ' ಚಿತ್ರದ ನಟಿ
ಚೆನ್ನೈ: 2021ರಲ್ಲಿ ಬಿಡುಗಡೆಯಾಗಿದ್ದ ತಮಿಳಿನ ಭಾರಿ ಯಶಸ್ವಿ, ರಾಷ್ಟ್ರಪ್ರಶಸ್ತಿ ವಿಜೇತ ಸಿನೆಮಾ ‘ಕಡೈಸಿ ವಿವಸಾಯಿ’ ಚಿತ್ರದಲ್ಲಿನ ತಮ್ಮ ಪಾತ್ರದಿಂದ ಮನೆಮಾತಾಗಿದ್ದ ನಟಿ ಕಾಸಿಅಮ್ಮಾಳ್ (74) ಅವರನ್ನು ಪುತ್ರನೇ ಹತ್ಯೆಗೈದ ಘಟನೆ ನಡೆದಿದೆ.
ಪುತ್ರನಿಗೆ ಮದ್ಯ ಖರೀದಿಸಲು ದುಡ್ಡು ನಿರಾಕರಿಸಿದ ಕಾರಣಕ್ಕೆ ಅಮ್ಮಾಳ್ ಅವರನ್ನು ಪುತ್ರನೇ ಹತ್ಯೆಗೈದಿದ್ದಾನೆ ಎಂದು ವರದಿಯಾಗಿದೆ.
ಈ ಸಂಬಂಧ ಕಾಸಿ ಅಮ್ಮಾಳ್ ಅವರ ಪುತ್ರ ಆರೋಪಿ ನಮಕ್ಕೋಡಿ (54) ಯನ್ನು ಬಂಧಿಸಲಾಗಿದೆ ಎಂದು ಉಸಿಲಾಂಪಟ್ಟಿ ತಾಲ್ಲೂಕು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಮದ್ಯ ಖರೀದಿಸಲು ಹಣಕ್ಕಾಗಿ ತನ್ನ ತಾಯಿಯೊಂದಿಗೆ ವಾಗ್ವಾದ ನಡೆಸಿದ ನಮಕ್ಕೋಡ, . ಆಕೆ ಹಣ ನೀಡಲು ನಿರಾಕರಿಸಿದಾಗ, ಮರದ ದೊಣ್ಣೆಯಿಂದ ದಾಳಿ ನಡೆಸಿ, ಆಕೆಯನ್ನು ಹತ್ಯೆಗೈದಿದ್ದಾನೆ ಎಂದು ಎಂದು ಸಬ್ ಇನ್ಸ್ ಪೆಕ್ಟರ್ ಬಾಲಸುಬ್ರಮಣಿ ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಹತ್ಯೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆಗೆ ಬಳಸಲಾಗಿದ್ದ ಆಯುಧವನ್ನೂ ವಶಪಡಿಸಿಕೊಂಡಿದ್ದಾರೆ.
ತನ್ನ ಪತ್ನಿಯಿಂದ ಬೇರ್ಪಟ್ಟಿದ್ದ ನಮಕ್ಕೋಡಿಗೆ ಕಾಸಿಅಮ್ಮಾಳ್ ಆಸರೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯ್ ಸೇತುಪತಿ ನಟಿಸಿದ್ದ, ವಿಮರ್ಶಕರಿಂದ ಭಾರಿ ಪ್ರಶಂಸೆಗೊಳಗಾಗಿದ್ದ ಚಿತ್ರ ‘ಕಡೈಸಿ ವಿವಸಾಯಿ’ಯಲ್ಲಿ ಕಾಸಿಅಮ್ಮಾಳ್ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಆ ಚಿತ್ರವು ಅವರಿಗೆ ಭಾರಿ ಜನಮನ್ನಣೆ ತಂದುಕೊಟ್ಟಿತ್ತು.