ಅರಕಲಗೂಡು | ʼಜಮೀನು ವಿವಾದʼ ಅಣ್ಣನಿಂದ ತಮ್ಮನ ಹತ್ಯೆ: ಆರೋಪಿ ಪರಾರಿ
ದಯಾಕಾರ್ (48)
ಅರಕಲಗೂಡು : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಅಣ್ಣನೇ ಸ್ವಂತ ತಮ್ಮನನ್ನು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆಮಾಡಿರುವ ಘಟನೆ ತಾಲೂಕಿನ ಮಲ್ಲಿ ಪಟ್ಟಣ ಹೋಬಳಿ ಸೊಂಪೂರ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ಸಹೋದರನಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ರವಿವಾರ ವರದಿಯಾಗಿದೆ.
ಹತ್ಯೆಯಾದ ವ್ಯಕ್ತಿಯನ್ನು ಸೊಂಪೂರ ಗ್ರಾಮದ ನಿವಾಸಿ ದಯಾಕಾರ್ (48). ಕೊಲೆ ಆರೋಪಿಯನ್ನು ಮೃತನ ಅಣ್ಣ ರಾಜಶೇಖರ್ (55) ಎಂದು ಗುರುತಿಸಲಾಗಿದೆ. ಘಟನೆಯ ಬಳಿಕ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯ ಗೊಂಡ ಮತ್ತೋರ್ವ ಸಹೋದರ ಸೋಮಶೇಖರನ್ನು ಚಿಕಿತ್ಸೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಅರಕಲ ಗೂಡು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಹತ್ಯೆ ಪ್ರಕರಣ ದಾಖಲಿಸಿ, ಆರೋಪಿ ಬಂಧನಕ್ಕೆ ಪೊಲೀಸರು ಶೋಧ ಕಾರ್ಯವನ್ನು ಕೈಗೊಂಡಿದ್ದಾರೆ.
ವಿವರ: ಕುಟುಂಬಕ್ಕೆ ಸೇರಿದ ಸುಮಾರು 20 ಎಕರೆ ಜಮೀನಿಗೆ ಸಂಬಂಧಿಸಿದ ವಿಚಾರ ನಾಲ್ಕು ವರ್ಷಗಳಿಂದ ಅರಕಲಗೂಡು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಪ್ರಕರಣ ವಿಚಾರಣೆ ನಡುವೆಯೇ ವಿವಾದಿತ ಭೂಮಿಯಲ್ಲಿ ಸಿಲ್ವರ್ ಮರ ಕಡಿತ ಕಾರ್ಯ ನಡೆಯುತ್ತಿರುವುದು ಹೊಸ ಗಲಾಟೆಗೆ ಕಾರಣ ಎಂದು ತಿಳಿದುಬಂದಿದೆ.
ಮರ ಕಡಿತದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ದಯಾಕಾರ್, ಪ್ರಕರಣ ನ್ಯಾಯಾಲಯದಲ್ಲಿರುವಾಗ ಮರವನ್ನು ಏಕೆ ಕಡಿಯುತ್ತಿದ್ದೀರಿ ಎಂದು ರಾಜಶೇ ಖರ್ ಅವರನ್ನು ಪ್ರಶ್ನಿಸಿದ ಸಂದರ್ಭದಲ್ಲಿ, ವಾಗ್ವಾದ ತೀವ್ರಗೊಂಡು, ರಾಜಶೇಖರ್ ಕೈಯಲ್ಲಿದ್ದ ಮಚ್ಚಿನಿಂದ ತಮ್ಮನ ಮೇಲೆ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯದಿಂದ ದಯಾಕಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಈ ವೇಳೆ ಮತ್ತೋರ್ವ ಸಹೋದರನು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.