ಹಾಸನಾಂಬ ದೇವಾಲಯಕ್ಕೆ ಬಾನು ಮುಷ್ತಾಕ್ ಭೇಟಿ
ಹಾಸನ : ಹಾಸನಾಂಬ ಎಂದರೆ ನಮ್ಮೂರ ಹಬ್ಬ, ಭಾವೈಕ್ಯತೆಯ ಸಂಕೇತ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಹೇಳಿದ್ದಾರೆ.
ಹಾಸನದ ಹಾಸನಾಂಬ ದೇವಾಲಯಕ್ಕೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.
ಇದು ನನ್ನ ಮೊದಲ ದರ್ಶನವಲ್ಲ. ನಮ್ಮ ಮನೆ ದೇವಾಲಯದ ಬೀದಿಯ ಮುಂದೆಯೇ ಇದೆ. ಚಿಕ್ಕಂದಿನಿಂದಲೂ ತಾಯಿಯ ಕೈ ಹಿಡಿದು ಹಾಸನಾಂಬ ದೇವಾಲಯಕ್ಕೆ ಬರುತ್ತಿದ್ದೆ. ಹಾಸನಾಂಬ ಜಾತ್ರೆ ನಮ್ಮೂರ ಹಬ್ಬ. ಮುಸ್ಲಿಮ್, ಹಿಂದೂ ಎಲ್ಲರೂ ಸಮಾನ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಇದು ಸ್ನೇಹ, ಪ್ರೀತಿ, ಸಹಬಾಳ್ವೆ, ಸಾಮಾಜಿಕ ಸಾಮರಸ್ಯ ಬೆಸೆಯುವ ನೆಮ್ಮದಿಯ ತಾಣ ಎಂದು ಅವರು ನುಡಿದರು.
ಬಹಳ ಹಿಂದಿನಿಂದಲೇ ಮುಸ್ಲಿಮ್ ಸಮುದಾಯದವರು ಹಾಸನಾಂಬ ದೇವಿಯ ಪೂಜಾ ಉತ್ಸವದಲ್ಲಿ ಭಾಗವಹಿಸುತ್ತಿದ್ದರು. ಮುಸ್ಲಿಮ್ ಹೆಣ್ಣುಮಕ್ಕಳಿಗೂ ದೇವಿ ಕಥೆಗಳು ಹೇಳಿಕೊಡುತ್ತಿದ್ದರು ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಎಸ್.ಎಸ್. ಪಾಷಾ, ಶಬ್ಬೀರ್ ಅಹ್ಮದ್, ಅತೀಖುರ್ ರೆಹಮಾನ್, ಸಾಯಿರ ಬಾನು ಇತರರು ಉಪಸ್ಥಿತರಿದ್ದರು.