ಓಮದ ನೀರಿನ ಸೇವನೆಯ ಅದ್ಭುತ ಆರೋಗ್ಯ ಲಾಭಗಳು

Update: 2023-08-01 15:51 GMT

ಕ್ಯಾರಮ್ ಸೀಡ್ಸ್ ಅಥವಾ ಬಿಷಪ್ಸ್ ವೀಡ್ ಎಂದೂ ಕರೆಯಲಾಗುವ ಓಮ (ಅಜವೈನ್) ಕಾಳುಗಳು ವೈಜ್ಞಾನಿಕವಾಗಿ ಟ್ರಾಕಿಸ್ಪರ್ಮಮ್ ಎಂದು ಕರೆಯಲಾಗುವ ಸಸ್ಯದ ಬೀಜಗಳಾಗಿದ್ದು, ಭಾರತೀಯ ಮತ್ತು ಮಧ್ಯಪ್ರಾಚ್ಯದ ಅಡಿಗೆ ಮನೆಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ.

ತೀಕ್ಷ್ಣ ಹಾಗೂ ವಿಶಿಷ್ಟ ಪರಿಮಳ, ಸ್ವಲ್ಪ ಕಹಿ ಮತ್ತು ಕಟು ರುಚಿಯನ್ನು ಹೊಂದಿರುವ ಓಮ ಕಾಳುಗಳು ಸಮೃದ್ಧ ಸಾರಭೂತ ತೈಲಗಳು, ಖನಿಜಗಳು ಮತ್ತು ವಿಟಾಮಿನ್ಗಳನ್ನು ಒಳಗೊಂಡಿರುವುದರಿಂದ ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿಯೂ ವ್ಯಾಪಕವಾಗಿ ಬಳಕೆಯಾಗುತ್ತವೆ.

ಈ ಎಲ್ಲ ಬಳಕೆಗಳ ಹೊರತಾಗಿ ಓಮ ಕಾಳು ತನ್ನ ಆರೋಗ್ಯವರ್ಧಕ ಗುಣಗಳಿಂದಾಗಿಯೂ ಹೆಸರಾಗಿದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ನೀರಿನಲ್ಲಿ ನೆನೆಸಿಟ್ಟ ಓಮ ಕಾಳುಗಳ ಸೇವನೆಯು ಜೀರ್ಣಕಾರಿ ಕಿಣ್ವಗಳ ಬಿಡುಗಡೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಅದು ಅಜೀರ್ಣ, ಹೊಟ್ಟೆಯುಬ್ಬರ ಮತ್ತು ಮಲಬದ್ಧತೆಯ ಲಕ್ಷಣಗಳನ್ನೂ ಕಡಿಮೆ ಮಾಡುತ್ತದೆ.

ಆಮ್ಲೀಯತೆಯನ್ನು ನಿವಾರಿಸುತ್ತದೆ

ಆ್ಯಸಿಡಿಟಿ ಅಥವಾ ಆಮ್ಲೀಯತೆ ಮತ್ತು ಎದೆಉರಿಯಿಂದ ಪಾರಾಗಲು ಸಾಂಪ್ರದಾಯಿಕವಾಗಿ ಓಮ ಕಾಳುಗಳನ್ನು ಬಳಸಲಾಗುತ್ತಿದೆ. ಓಮ ಕಾಳುಗಳ ನೀರಿನ ಸೇವನೆಯು ಹೊಟ್ಟೆಯಲ್ಲಿ ಆಮ್ಲೀಯ ಮಟ್ಟಗಳನ್ನು ತಗ್ಗಿಸಲು ನೆರವಾಗುತ್ತದೆ.

ಉಸಿರಾಟ ಆರೋಗ್ಯವನ್ನು ಹೆಚ್ಚಿಸುತ್ತದೆ

ಅಸ್ತಮಾ, ಬ್ರಾಂಕೈಟಿಸ್ ಮತ್ತು ಕೆಮ್ಮಿನಂತಹ ಉಸಿರಾಟದ ತೊಂದರೆಗಳಿಂದ ಬಳಲುತ್ತಿರುವ ಜನರಿಗೆ ಓಮ ಕಾಳುಗಳ ನೀರಿನ ಸೇವನೆ ಉಪಯುಕ್ತವಾಗಿದೆ. ಶ್ವಾಸನಾಳವನ್ನು ಸ್ವಚ್ಛಗೊಳಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಉಸಿರಾಟವನ್ನು ಸುಗಮಗೊಳಿಸಲು ನೆರವಾಗಬಲ್ಲದು.

ಚಯಾಪಚಯವನ್ನು ಹೆಚ್ಚಿಸುತ್ತದೆ

ಓಮ ಕಾಳು ಜೀರ್ಣ ವ್ಯವಸ್ಥೆಯನ್ನು ಉತ್ತಮಗಳಿಸುವ ಮೂಲಕ ಮೆಟಾಬಲಿಸಂ ಅಥವಾ ಚಯಾಪಚಯವನ್ನು ಹೆಚ್ಚಿಸುತ್ತದೆ. ಪೋಷಕಾಂಶಗಳ ಉತ್ತಮ ಹೀರುವಿಕೆಗೆ ನೆರವಾಗುತ್ತದೆ ಮತ್ತು ಚಯಾಪಚಯ ದರ ಹಾಗೂ ಶಕ್ತಿ ಮಟ್ಟಗಳನ್ನು ಹೆಚ್ಚಿಸುತ್ತದೆ.

ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ

ಮುಟ್ಟಿನ ಸಮಯದಲ್ಲಿ ನೀರಿನಲ್ಲಿ ನೆನಸಿಟ್ಟ ಓಮ ಕಾಳುಗಳನ್ನು ಸೇವಿಸುವ ಮೂಲಕ ನೋವು ಕಡಿಮೆ ಮಾಡಲು ಸಹಕರಿಸುತ್ತದೆ. ಓಮ ಕಾಳುಗಳು ಸೆಳೆತ ಪ್ರತಿರೋಧಕ ಗುಣಗಳನ್ನು ಹೊಂದಿದ್ದು, ಇವು ಸ್ನಾಯುಗಳು ವಿಶ್ರಮಿಸಲು ಮತ್ತು ನೋವನ್ನು ಕಡಿಮೆ ಮಾಡಲು ನೆರವಾಗುತ್ತವೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಓಮ ಕಾಳುಗಳು ಅಗತ್ಯ ವಿಟಾಮಿನ್ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದ್ದು,ಇವು ಶರೀರದ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತವೆ. ನಿಯಮಿತವಾಗಿ ಓಮ ಕಾಳುಗಳ ನೀರಿನ ಸೇವನೆಯು ಕಾಯಿಲೆಗಳು ಮತ್ತು ಸೋಂಕುಗಳ ವಿರುದ್ಧ ಶರೀರದ ಕಾರ್ಯವಿಧಾನವನ್ನು ಹೆಚ್ಚಿಸುತ್ತದೆ.

ಕೀಲು ನೋವನ್ನು ನಿವಾರಿಸುತ್ತದೆ

ಓಮ ಕಾಳುಗಳ ನೀರು ನೋವು ನಿವಾರಕ ಗುಣಗಳನ್ನು ಹೊಂದಿದ್ದು,ಸಂಧಿವಾತಕ್ಕೆ ಸಂಬಂಧಿಸಿದ ಕೀಲು ನೋವನ್ನು ಕಡಿಮೆ ಮಾಡುತ್ತದೆ. ಕೀಲುಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡಲೂ ಅದು ನೆರವಾಗುತ್ತದೆ.

ನಿರ್ವಿಷೀಕರಣ

ನೀರಿನಲ್ಲಿ ನೆನೆಸಿಟ್ಟ ಓಮ ಕಾಳುಗಳು ನೈಸರ್ಗಿಕ ನಂಜು ನಿವಾರಕವಾಗಿ ಕಾರ್ಯ ನಿರ್ವಹಿಸುತ್ತವೆ. ಶರೀರದಿಂದ ವಿಷವಸ್ತುಗಳನ್ನು ಹೊರಕ್ಕೆ ಹಾಕಲು ನೆರವಾಗುವ ಅದು ಯಕೃತ್ತು,ಮೂತ್ರಪಿಂಡಗಳು ಮತ್ತು ಕರುಳುಗಳನ್ನು ಸ್ವಚ್ಛಗೊಳಿಸುತ್ತದೆ.

ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ

ಓಮ ಕಾಳುಗಳಲ್ಲಿರುವ ಉರಿಯೂತ ನಿರೋಧಕ ಮತ್ತು ಸೂಕ್ಷ್ಮಜೀವಿ ಪ್ರತಿರೋಧಕ ಗುಣಗಳು ಚರ್ಮದ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ. ಓಮ ಕಾಳಿನ ನೀರಿನ ಸೇವನೆಯು ಮೊಡವೆ,ಇಸುಬು ಮತ್ತು ಚರ್ಮದ ಇತರ ತೊಂದರೆಗಳನ್ನು ತಗ್ಗಿಸುವ ಮೂಲಕ ಸ್ವಚ್ಛ ಮತ್ತು ಹೊಳೆಯುವ ಚರ್ಮಕ್ಕೆ ಪೂರಕವಾಗುತ್ತದೆ.

ಓಮ ಕಾಳುಗಳು ಹಲವಾರು ಆರೋಗ್ಯ ವರ್ಧಕ ಗುಣಗಳನ್ನು ಹೊಂದಿವೆಯಾದರೂ ವೈದ್ಯಕೀಯ ಉದ್ದೇಶಗಳಿಗೆ ಬಳಕೆಯ ಮುನ್ನ ವೈದ್ಯಕೀಯ ವೃತ್ತಿಪರರ ಸಲಹೆ ಪಡೆದುಕೊಳ್ಳುವುದು ಅಗತ್ಯ.

ಕೃಪೆ: NDTV 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News