ದೊಡ್ಡ ಪ್ರಜಾಪ್ರಭುತ್ವ ಎನಿಸಿರುವ ಭಾರತಕ್ಕೆ ಭದ್ರ ಅಡಿಪಾಯವೇ ಸಂವಿಧಾನ: ವರ್ಷಾ ಜಾನೆ
ಕಲಬುರಗಿ: ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ, ಶಾಂತಿ ಸುಗಮವಾಗಿ ಭಾರತ ಮುನ್ನಡೆಯುತ್ತಿದೆ. ಇದಕ್ಕೆ ಭದ್ರ ತಳಪಾಯವೇ ನಮ್ಮ ಸಂವಿಧಾನದ ಶ್ರೇಷ್ಠತೆಯೇ ಮೂಲ ಕಾರಣವಾಗಿದೆ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ ಜಾನೆ ಹೇಳಿದರು.
ಇಲ್ಲಿನ ಶರಣಬಸವೇಶ್ವರ ನಗರ ವೆಲಫೇರ್ ಸೊಸೈಟಿಯ ವತಿಯಿಂದ ನಗರದ ನಾಗನಹಳ್ಳಿ ಕ್ರಾಸ್ ನಲ್ಲಿರುವ ಶರಣಬಸವೇಶ್ವರ ನಗರದ ಪರಿಸರದಲ್ಲಿ ಮಂಗಳವಾರ ಏರ್ಪಡಿಸಿದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬಾರಿಸು ಕನ್ನಡ ಡಿಂಡಿಮವ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಮೂಲ ಕರ್ತವ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಮಾಜ ಸೇವೆಯಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕ ಸೇವೆ ಸಲ್ಲಿಸಬೇಕೆಂದ ಅವರು, ಕನ್ನಡ ನಾಡು-ನುಡಿ, ನೆಲ-ಜಲದ ವಿಚಾರದಲ್ಲಿ ಜಾತಿ ಬೇಧ, ಪಕ್ಷ ಬೇಧ ಮರೆತು ಅವುಗಳ ಉಳಿವಿಗಾಗಿ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು. ಬಡಾವಣೆಯ ಮೂಲ ಸೌಕರ್ಯಗಳ ಒದಗಿಸುವ ನಿಟ್ಟಿನಲ್ಲಿ ನಮ್ಮ ಅಧಿಕಾರದ ಪರಿಮಿತಿಯಲ್ಲಿ ಕೆಲಸ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷ ಡಾ. ಶರಣಕುಮಾರ ಕಂಠಿ ಮಾತನಾಡಿ, ನಮ್ಮಗಳ ಉನ್ನತಿಗೆ ಕಾರಣವಾಗುವ ಸಮಾಜದ ಋಣ ತೀರಿಸಲು ಪ್ರತಿಯೊಬ್ಬರೂ ನಮ್ಮ ಬದುಕಿನ ಸ್ವಲ್ಪ ಸಮಯವನ್ನು ಸಮಾಜ ಸೇವೆಗಾಗಿ ಮೀಸಲಿಡಬೇಕು. ಆಗ ಮಾತ್ರ ಬದುಕು ಸಾರ್ಥಕಗೊಳ್ಳಲು ಸಾಧ್ಯ. ನಾವುಗಳು ಮತ್ತೊಬ್ಬರಿಗೆ ಏನೂ ತೊಮದರೆ ಕೊಡದೆ ಬದುಕು ನಡೆಸುವುದನ್ನು ರೂಢಿಸಿಕೊಂಡರೆ ಅದೇ ನಾವು ಸಮಾಜಕ್ಕೆ ಕೊಡುವ ಬಹು ದೊಡ್ಡ ಸೇವೆಯಾಗಿರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ದಿಕ್ಸೂಚಿ ನುಡಿಗಳನ್ನಾಡಿದ ಸೊಸೈಟಿಯ ಪ್ರಧಾನ ಕಾರ್ಯದರ್ಶಿಗಳೂ ಆದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಇಂದು ಅನ್ಯ ಭಾಷೆಗಳ ಆರ್ಭಟದಿಂದಾಗಿ ನಮ್ಮ ಮಾತೃಭಾಷೆ ಅಪಾಯದ ಅಂಚಿಗೆ ಹೋಗುತ್ತಿದೆ. ಆದುದರಿಂದ ನಾವೆಲ್ಲರೂ ಸ್ವಾಭಿಮಾನಿಗಳಾಗಿ ನೆಲ-ಜಲ, ಭಾಷೆಯನ್ನು ಉಳಿಸಿ ಬೆಳೆಸುವತ್ತ ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂದರು. ಇಂಥ ಕನ್ನಡ ಕಟ್ಟುವ ಕಾರ್ಯಕ್ರಮಗಳು ಪ್ರತಿ ಬಡಾವಣೆಗಳಲ್ಲೂ ಜರುಗಬೇಕಾಗಿದೆ ಎಂದು ಅಭಿಪ್ರಾಯಿಸಿದರು.
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಪಿಎಸೈ ರೇಣುಕಾದೇವಿ ಹೆಬ್ಬಾಳ, ಮಹೇಶ ಟೆಂಗಳಿ, ಶಿವಲೀಲಾ ಭಾಲ್ಕಿ ಮಾತನಾಡಿದರು. ಸೊಸೈಟಿಯ ರವೀಂದ್ರ ಬೋಗಶೆಟ್ಟಿ, ರಮೇಶ ಶಂಕರಶೆಟ್ಟಿ, ಸೋಮಶೇಖರ ಕಲಶೆಟ್ಟಿ ಸಿದ್ದು ನಾಸಿ, ಶಿವಾನಂದ ಸ್ವಾಮಿ, ಗುರುಲಿಂಗ ಧನ್ನೂರ, ಮಹಾಂತೇಶ ಕುಂಬಾರ, ಶರಣಬಸಪ್ಪ ಚಿಂಚನಸೂರ, ನಿಖಿಲ್ ಶಹಾ, ವಿಷ್ಣುಕಾಂತ ಕೊಡದೂರ, ಸಂಜಯಕುಮಾರ ಚಿಂದೆ, ನಾಗಣ್ಣ ಕಂಠಿ, ಶಿಲ್ಪಾ ಕೋರಿ, ತನುಜಾ, ಶಿವಲೀಲಾ, ಮಲ್ಲಮ್ಮಾ, ಸುರೇಖಾ, ಡಾ. ಪ್ರಭಾ ಕಂಠಿ, ಸುವರ್ಣಾ ಕೊಡದೂರ, ಶಿಲ್ಪಾರಾಣಿ ಟೆಂಗಳಿ, ಸುಜಾತಾ ಚಿಂದೆ, ಅಂಬಾರಾಯ ಧನ್ನೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಲಾವಿದರಾದ ಮಹೇಶ ಚಿಂತನಪಳ್ಳಿ, ಕಲ್ಪನಾ ಗೋಲ್ಡ್ಸ್ಮಿತ್, ದೀಪಕ್ ಠಾಕೂರ್, ಮಹೇಶ ಹಿರೇಮಠ, ಚಂದ್ರಕಲಾ, ನಯೀಮ್ ಚಾವೂಸ್ ಅವರುಗಳು ಕನ್ನಡ ಗೀತೆಗಳು ಪ್ರಸ್ತುತಪಡಿಸುವ ಮೂಲಕ ಕನ್ನಡ ಡಿಂಡಿಮಯ ಬಾರಿಸಿ ಪ್ರೇಕ್ಷಕರ ಗಮನ ಸೆಳೆದರು.