ಕಲಬುರಗಿ | ಬೈಕ್ ಗೆ ಕಾರು ಡಿಕ್ಕಿ : ಗ್ರಾ.ಪಂ ಸದಸ್ಯೆ ಸ್ಥಳದಲ್ಲೇ ಮೃತ್ಯು
Update: 2025-01-02 21:40 IST
ಶರಣಮ್ಮ ಗುರುಶರಣ ನಾಯ್ಕೋಡಿ
ಕಲಬುರಗಿ : ಕಾರೊಂದು ಬೈಕ್ ಗೆ ಡಿಕ್ಕಿಯಾಗಿ ಗ್ರಾಮ ಪಂಚಾಯತ್ ಸದಸ್ಯೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಯುವಕನೋರ್ವನಿಗೆ ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ ಆಳಂದ ತಾಲ್ಲೂಕಿನ ಧುತ್ತರಗಾಂವ-ಭೂಸನೂರು ರಸ್ತೆ ಮಾರ್ಗದಲ್ಲಿ ನಡೆದಿರುವುದು ವರದಿಯಾಗಿದೆ.
ಧಂಗಾಪುರ ಗ್ರಾಮ ಪಂಚಾಯತ್ ಸದಸ್ಯೆ ಶರಣಮ್ಮ ಗುರುಶರಣ ನಾಯ್ಕೋಡಿ(44) ಮೃತಪಟ್ಟವರೆಂದು ಗುರುತಿಸಲಾಗಿದೆ. ಸದಸ್ಯೆಯ ಪುತ್ರ, ಬೈಕ್ ಸವಾರ ವಿರೇಶ ಗುರುಶರಣ ನಾಯ್ಕೋಡಿ(18) ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಯುವಕ ಕಲಬುರಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಲಬುರಗಿಯಿಂದ ಸ್ವಗ್ರಾಮ ಧಂಗಾಪುರಕ್ಕೆ ಬುಧವಾರ ಸಂಜೆ ವಾಪಸ್ ಆಗುವಾಗ ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಶರಣಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.