ಕಲಬುರಗಿ | ರಮಾಬಾಯಿ ಅಂಬೇಡ್ಕರ್ ಅರಿವಿನ ರಥಯಾತ್ರೆ
ಕಲಬುರಗಿ : ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮದಲ್ಲಿ "ಮಾತೋಶ್ರೀ ರಮಾಬಾಯಿ ಅಂಬೇಡ್ಕರ್" ಅವರ ಜನ್ಮದಿನದ ಪ್ರಯುಕ್ತ "ರಮಾಬಾಯಿ ಅಂಬೇಡ್ಕರ್ ಅರಿವಿನ ರಥಯಾತ್ರೆ" ಕಾರ್ಯಕ್ರಮಕ್ಕೆ ಖ್ಯಾತ ಉದ್ಯಮಿ ಮಲ್ಲಿಕಾರ್ಜುನ್ ಗಾಯಕವಾಡ್ ಅವರು ಚಾಲನೆ ನೀಡಿದರು.
ಕಾರ್ಯಕ್ರಮದ ಸಂಚಾಲಕಿ ಹಾಗೂ ನಾರಿಶಕ್ತಿ ಕರ್ನಾಟಕ ಮಹಿಳಾ ಸಂಘಟನೆಯ ಸಂಸ್ಥಾಪಕರಾದ ಅಶ್ವಿನಿ ಮದನಕರ್ ಮಾತನಾಡಿ, ಈ ದೇಶಕ್ಕೆ ರಮಾಬಾಯಿ ಅಂಬೇಡ್ಕರ್ ಅವರು ಕೊಟ್ಟ ಕೊಡುಗೆ ಅಪಾರವಾದದ್ದು, ರಮಾಬಾಯಿ ಅಂಬೇಡ್ಕರ್ ಅವರು ತಮ್ಮ ಅನಾರೋಗ್ಯದ ನಿಮಿತ್ತ ಕರ್ನಾಟಕದ ಧಾರವಾಡದ ಹಾಸ್ಟೆಲ್ ನಲ್ಲಿ ನೆಲೆಸಿದ್ದರು. ಈ ವೇಳೆ ಹಸಿದ ಮಕ್ಕಳಿಗೆ ಯಾವುದೇ ಭೇದಭಾವ ಇಲ್ಲದೆ ತನ್ನ ಬಂಗಾರದ ಬಳೆಗಳನ್ನ ಮಾರಿ ಅನ್ನ ಹಾಕಿದ ಭಾರತದ ಮಹಾನ್ ತ್ಯಾಗ ಮೂರ್ತಿ ರಮಾಬಾಯಿ ಅಂಬೇಡ್ಕರ್ ಅವರ ತ್ಯಾಗವನ್ನು ಸ್ಮರಿಸಿದರು.
ರಮಾಬಾಯಿ ಅಂಬೇಡ್ಕರ್ ಅವರ ಸ್ಮರಣಾರ್ಥವಾಗಿ ಕರ್ನಾಟಕದಲ್ಲಿರುವ ಮಹಿಳಾ ಹಾಸ್ಟೆಲ್ ಗಳಿಗೆ ರಮಾಬಾಯಿ ಅಂಬೇಡ್ಕರ್ ಎಂದು ಹೆಸರಿಡಬೇಕೆಂದು ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.
ರಮಾಬಾಯಿ ಅಂಬೇಡ್ಕರ್ ರಥಯಾತ್ರೆಯಲ್ಲಿ ಅತಿಥಿಗಳಾಗಿ ಎಸ್ಸಿ, ಎಸ್ಟಿ ವಕೀಲರ ಸಂಘದ ಅಧ್ಯಕ್ಷರಾದ ಮಸ್ತಾನ್ ದಂಡೆ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ರಾಗಿ, ಗ್ರಾಮ ಪಂಚಾಯಿತಿ ಸದಸ್ಯ ಶರಣು ಅಂಬರಾಯ ಚಿಂಚೋಳಿ, ಈಶ್ವರ್, ಪ್ರಹ್ಲಾದ ಡಾಂಗೆ, ಸೈಯದ್ ಪಟೇಲ್, ಅಭಿಷೇಕ್ ಪೂಜಾರಿ ಹಾಗೂ ಸಮಸ್ತ ಗ್ರಾಮದ ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಾಹುಲ್ ಡಾಂಗೆ ಕಾರ್ಯಕ್ರಮ ನಿರ್ವಹಿಸಿದ್ದರು.