ನಿಷೇಧಿತ ಕೆಮ್ಮಿನ ಸಿರಪ್ ಸಾಗಾಟ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ಶಾಸಕ ಅಲ್ಲಂಪ್ರಭು ಪಾಟೀಲ್ ಪತ್ರ
ಶಾಸಕ ಅಲ್ಲಂಪ್ರಭು ಪಾಟೀಲ್
ಕಲಬುರಗಿ: ನಿಷೇಧಿತ ಕೆಮ್ಮಿನ ಸಿರಪ್ನ 120 ಬಾಟಲ್ (27 ಸಾ. ರು ಮೌಲ್ಯದ್ದು) ಸಾಗಾಟದ ಪ್ರಕರಣದಲ್ಲಿ ಮಹಾರಾಷ್ಟ್ರದ ಮುಂಬೈನ ಠಾಣೆ ಜಿಲ್ಲೆಯ ಕಲ್ಯಾಣ ಪ್ರದೇಶದ ಬಝಾರ್ ಪೇಟ್ ಪೊಲೀಸ್ ಠಾಣೆಯಲ್ಲಿ ಜೂ. 22 ರಂದು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸತ್ಯಾಸತ್ಯತೆ ಹೊರಬರುವಂತಾಗಲು ಸದರಿ ಪ್ರಕರಣದ ಸಿಬಿಐ ತನಿಖೆಗೆ ಆಗ್ರಹಿಸಿ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಂಪ್ರಭು ಪಾಟೀಲರು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕಳೆದ ಜೂ. 22 ರಂದು ಕಲ್ಯಾಣದಲ್ಲಿ ನಡೆದ ಬೆಳವಣಿಗೆಯಲ್ಲಿ 27 ಸಾವಿರ ರುಪಾಯಿ ಮೌಲ್ಯದ ನಿಷೇಧಿತ ಕೆಮ್ಮಿನ ಸಿರಪ್ ಸಾಗಾಟದ ಪ್ರಕರಣದಲ್ಲಿ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ ಇವರ ಮೇಲೆ ಆರೋಪ ಕೇಳಿ ಬಂದಿತ್ತಲ್ಲದೆ ಇವರ ಬಂಧನವಾಗಿತ್ತು. ಬಂಧನದ ನಂತರ ಕಣ್ಣಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಇದೇ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರಬರಲಿ, ಸಿಬಿಐ ತನಿಖೆಯೂ ಆಗಲಿ, ಸರ್ಕಾರಕ್ಕೆ ಪತ್ರ ಬರೆಯುವೆ ಎಂದು ನಾನು ಹೇಳಿದ್ದೆ. ನನ್ನ ಮಾತಿನಂತೆ ನಾನೀಗ ಮಹಾರಾಷ್ಟ್ರ ಸರ್ಕಾರಕ್ಕೆ, ಅಲ್ಲಿನ ಮುಖ್ಯಮಂತ್ರಿ ದೇವೀಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿರುವೆ. ನಮ್ಮ ರಾಜ್ಯ ಸರ್ಕಾರಕ್ಕೂ ಪತ್ರ ಬರೆದು ಸದರಿ ಪ್ರಕರಣ ಗಮನಕ್ಕೆ ತಂದಿರುವೆ ಎಂದು ಶಾಸಕರಾದ ಅಲ್ಲಂಪ್ರಭು ಪಾಟೀಲರು ಹೇಳಿದ್ದಾರೆ.