×
Ad

ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಮುಕ್ತಾಯ: ಫಲಿತಾಂಶ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಗೆ ರವಾನೆ

ಮರು ಎಣಿಕೆಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ ಎಂದ ಶಾಸಕ ಕೆ.ವೈ.ನಂಜೇಗೌಡ

Update: 2025-11-11 22:54 IST

ಕೋಲಾರ: ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಮರು ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸುಪ್ರೀಂಕೋರ್ಟ್ ಗೆ ರವಾನಿಸಿದ್ದಾರೆ.

ಸುಪ್ರೀಂಕೋರ್ಟ್ ಆದೇಶದಂತೆ ಕೋಲಾರ ನಗರದ ಹೊರವಲಯದಲ್ಲಿರುವ ತೋಟಗಾರಿಕಾ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಗೆ ಮರು ಎಣಿಕೆ ಕಾರ್ಯ ಪ್ರಾರಂಭವಾಗಿ, ರಾತ್ರಿ 9 ಗಂಟೆಗೆ ಮುಕ್ತಾಯಗೊಂಡಿದೆ.

ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಬಿಜೆಪಿ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ, ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ ಕುಮಾರ್ ಮತ್ತು ಅವರ ಚುನಾವಣಾ ಏಜೆಂಟರ ಸಮ್ಮುಖದಲ್ಲಿ ಮರು ಎಣಿಕೆ ನಡೆಯಿತು.

ಮರು ಎಣಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಲೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಂಜುನಾಥಗೌಡ, ನನಗೆ ಇನ್ನೂ ಸಮಾಧಾನ ಆಗಿಲ್ಲ, ಸಂಪೂರ್ಣ ವಿವಿ ಪ್ಯಾಟ್‌ಗಳನ್ನು ಎಣಿಸಬೇಕಿತ್ತು. ಆದರೆ ಕೇವಲ ಐದು ವಿವಿ ಪ್ಯಾಟ್ ಮಾತ್ರ ಎಣಿಕೆ ಮಾಡಿದ್ದಾರೆ. ನನ್ನ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.

ಎಣಿಕೆ ಕೇಂದ್ರದಿಂದ ಹೊರ ಬಂದ ಮಾಲೂರು ಶಾಸಕ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಮಾತನಾಡಿ, ಮಾಲೂರು ಜನರಿಗೆ ಮತ್ತು ಬಂಧುಗಳಿಗೆ ನನ್ನ ಧನ್ಯವಾದ. ಎರಡನೇ ಅವಧಿಗೆ ಶಾಸಕನಾಗಿ ಮಾಡಿದ ಮೇಲೆ ಶಾಸಕ ಎಂದು ಡಿಕ್ಲೇರ್ ಆದ ನಂತರ ಬಿಜೆಪಿಯವರು ಕೋರ್ಟ್‌ಗೆ ಹೋಗಿದ್ದರು. ತುಂಬಾ ನೋವನ್ನು ಅನುಭವಿಸಿದ್ದೇನೆ. ಬಿಜೆಪಿ ಅಭ್ಯರ್ಥಿ ನಾನೇ ಗೆದ್ದು ಬಿಡುತ್ತೇನೆ, ಮರು ಚುನಾವಣೆ ಆಗಿಬಿಡುತ್ತದೆ ಎಂದು ಗೊಂದಲ ಮಾಡಿದರು. ಆದರೆ ಸುಪ್ರಿಂ ನ್ಯಾಯಾಲಯದ ಆದೇಶದಂತೆ ಮರು ಎಣಿಕೆ ಮುಗಿದಿದೆ. ಮರು ಎಣಿಕೆಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ.ನ್ಯಾಯ ನಮ್ಮಪರವಾಗಿದೆ ಎಂದರು.

ಹಿನ್ನೆಲೆ:

ಮಾಲೂರು ವಿಧಾನಸಭಾ ಕ್ಷೇತ್ರದ 2023ರ ಚುನಾವಣೆ ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶಿಸಿತ್ತು. ನಾಲ್ಕು ವಾರಗಳಲ್ಲಿ ಮರುಎಣಿಕೆ ಕಾರ್ಯ ಮುಗಿಸುವಂತೆ ಆದೇಶ ನೀಡಿರುವ ಕೋರ್ಟ್, ಶಾಸಕ ಸ್ಥಾನದಿಂದ ಹಾಲಿ ಶಾಸಕ ಕೆ.ವೈ.ನಂಜೇಗೌಡ ಅವರನ್ನು ಅಸಿಂಧುಗೊಳಿಸಿತ್ತು. ಸದ್ಯ ಶಾಸಕ ನಂಜೇಗೌಡ ಪರ ವಕೀಲರ ಮನವಿ ಮೇರೆಗೆ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿ, 30 ದಿನಗಳ ಕಾಲವಕಾಶ ನೀಡಿ ಮೇಲ್ಮನವಿಗೆ ಅವಕಾಶ ನೀಡಿತ್ತು. ಇದರಿಂದಾಗಿ ಸದ್ಯ ಮರುಎಣಿಕೆ ಕೋರಿ ಕೋರ್ಟ್ ಮೊರೆ ಹೋಗಿದ್ದ ಮಾಜಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಸಂತೋಷಗೊಂಡಿದ್ದರು. ಹಿಂದಿನ ಜಿಲ್ಲಾ ಚುನಾವಣಾ ಅಧಿಕಾರಿ ವೆಂಕಟರಾಜು ಮತ ಎಣಿಕೆಯ ವೀಡಿಯೊ ಕೋರ್ಟ್‌ಗೆ ಸಲ್ಲಿಸಿಲ್ಲ. ಹೀಗಾಗಿ ಅಂದಿನ ಜಿಲ್ಲಾ ಚುನಾವಣಾಧಿಕಾರಿ ವಿರುದ್ಧವೂ ಕ್ರಮಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News