ರಸ್ತೆ ಬದಿಯ ಸಾಲು ಮರಗಳನ್ನೇ ಸುಡುತ್ತಿದೆ ನಾಡ್ಗಿಚ್ಚು!
ಮಂಗಳೂರು: ಕಾಡಿನಲ್ಲಿ ನಿರಂತರವಾಗಿ ಕಂಡು ಬರುವ ಕಾಡ್ಗಿಚ್ಚಿನಿಂದ ಪ್ರತಿ ವರ್ಷ ಸಾವಿರಾರು ಸಂಖ್ಯೆಯ ಮರಗಳು, ವನ್ಯ ಜೀವ ಸಂಕುಲಗಳು ಬಲಿಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ ಬೇಸಿಗೆಯಲ್ಲಿ ಕಿಡಿಕೇಡಿಗಳಿಂದ ಸೃಷ್ಟಿಯಾಗುತ್ತಿರುವ ನಾಡ್ಗಿಚ್ಚುಗಳು ರಸ್ತೆಯ ಬದಿಯ ಸಾಲು ಮರಗಳನ್ನೇ ಆಹುತಿ ಪಡೆಯುತ್ತಿರುವ ಪ್ರಕರಣಗಳೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿವೆ.
ಏನಿದು ನಾಡ್ಗಿಚ್ಚು ಎಂದು ಅಚ್ಚರಿ ಪಡಬೇಡಿ. ನಗರ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ ಸೇರಿದಂತೆ ದ.ಕ. ಜಿಲ್ಲೆಯ ವಿವಿಧ ಭಾಗಗಳಲ್ಲಿ ರಸ್ತೆ ಬದಿಯಲ್ಲಿ ಬ್ಲಾಕ್ ಸ್ಪಾಟ್ಗಳಾಗಿ ಗುರುತಿಸಲ್ಪಟ್ಟಿರುವ ಪ್ರದೇಶಗಳಲ್ಲಿ, ಮುಖ್ಯವಾಗಿ ಹೈವೇ ಬದಿಗಳಲ್ಲಿ ಪ್ಲಾಸ್ಟಿಕ್ ಒಳಗೊಂಡಂತೆ ತ್ಯಾಜ್ಯ ಸುಡಲು ಬೆಂಕಿ ಹಚ್ಚುವ ಪ್ರಸಂಗಗಳು ಅಲ್ಲಲ್ಲಿ ಕಾಣಬಹುದು. ಇದರಿಂದ ತ್ಯಾಜ್ಯದ ಜೊತೆಗಿರುವ ಪ್ಲಾಸ್ಟಿಕ್ಗಳು ಸುಟ್ಟು ಅಪಾಯಕಾರಿ ಅನಿಲ ವಾತಾವರಣವನ್ನು ಸೇರುತ್ತಿರುವುದು ಮಾತ್ರವಲ್ಲ, ರಸ್ತೆ ಬದಿಗಳಲ್ಲಿ ಅರಣ್ಯ ಇಲಾಖೆ, ಪರಿಸರ ಪ್ರೇಮಿಗಳು, ಸರಕಾರೇತರ ಸಂಸ್ಥೆಗಳು ಸ್ವಯಂ ಆಸಕ್ತಿಯಿಂದ ನೆಟ್ಟು ಪೋಷಿಸುವ ಮರ ಗಿಡಗಳು ಬೆಂಕಿಗೆ ಆಹುತಿಯಾಗುತ್ತಿವೆ.
ಬಾಳೆಪುಣಿ ಗ್ರಾಮ ವ್ಯಾಪ್ತಿಯ ಸೇನವ ರಸ್ತೆ ಮೈದಾನ, ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಹೊರ ಆವರಣ ಹಾಗೂ ರಸ್ತೆ ಬದಿ, ಏರ್ಪೋರ್ಟ್ ರಸ್ತೆ, ಎಂಆರ್ಪಿಎಲ್ ರಸ್ತೆ, ನಗರದ ನಂದಿಗುಡ್ಡೆ ಮೊದಲಾದ ಪ್ರದೇಶಗಳಲ್ಲಿ ತ್ಯಾಜ್ಯವನ್ನು ಬೆಂಕಿಯ ಮೂಲಕವೇ ನಿರ್ವಹಣೆಯನ್ನು ನಿರಂತರವಾಗಿ ನಡೆಸುತ್ತಿರುವುದು ಕಂಡು ಬರುತ್ತದೆ. ಅಡ್ಯಾರ್ ಬಳಿ ಹೈ ವೇ ಉದ್ದಕ್ಕೂ ಹಲವೆಡೆ ಇಂತಹ ನಾಡ್ಗಿಚ್ಚಿನ ದೃಶ್ಯಗಳು ಕಂಡು ಬರುತ್ತವೆ. ಕಾಡ್ಗಿಚ್ಚನ್ನು ನಂದಿಸಲು ಅರಣ್ಯ ಇಲಾಖೆಯು ಮೇಲುಸ್ತುವಾರಿ ವಹಿಸುತ್ತದೆ. ಆದರೆ ಈ ರೀತಿ ತ್ಯಾಜ್ಯಕ್ಕೆ ಹಾಕಲಾಗುವ ಬೆಂಕಿ ಹಾಕಿ ಸುಡುತ್ತಿರುವುದನ್ನು ಸ್ಥಳೀಯಾಡಳಿತ ಗಮನಿಸುತ್ತಿಲ್ಲ ಎಂಬ ಆಕ್ಷೇಪ ಪರಿಸರ ಪ್ರೇಮಿ, ಪರಿಸರಾಸಕ್ತರಿಂದ ವ್ಯಕ್ತವಾಗುತ್ತಿವೆ.
‘ಪ್ರತಿ ವರ್ಷ ನಾಡ್ಗಿಚ್ಚು ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. ಹೈವೇಯನ್ನು ಒಳಗೊಂಡಂತೆ ರಸ್ತೆ ಬದಿಯ ತ್ಯಾಜ್ಯ ಬೆಂಕಿಯಿಂದ ಸುಟ್ಟು ಪರಿಸರ ಮಾಲಿನ್ಯ ವಾಗುತ್ತಿರುವುದು ಮಾತ್ರವಲ್ಲ. ಪರಿಸರಾಸಕ್ತರು ನೆಟ್ಟು ಪೋಷಿಸುವ ಮರ ಗಿಡಗಳು ಸುಟ್ಟು ಕರಕಲಾಗುತ್ತಿವೆ. ಬಾಳೆಪುಣಿ ಗ್ರಾಮ ವ್ಯಾಪ್ತಿಯ ಸೇನವ ರಸ್ತೆ ಮೈದಾನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 75 ಹಣ್ಣಿನ ಕಸಿ ಗಿಡಗಳನ್ನು ನೆಟ್ಟಿದ್ದೆವು. ಪ್ರತಿ ವರ್ಷ ಈ ಭಾಗದಲ್ಲಿ ಬೆಂಕಿ ಹಚ್ಚಲಾಗುತ್ತದೆ. ಈ ವರ್ಷ ಇದರಿಂದ 21 ಗಿಡಗಳು ಸಟ್ಟು ಹೋಗಿವೆ. ಅವುಗಳಲ್ಲಿ ಹೂ ಬಿಡುವ ಹಂತಕ್ಕೆ ಬೆಳೆದ ಮರಗಳು. ಎರಡು ವರ್ಷಗಳ ಹಿಂದೆ ನೆಟ್ಟ ಮಾವು, ಹಲಸು, ನೆಲ್ಲಿ, ಪೇರಳೆ, ನೇರಳೆ ಮೊದಲಾದ ಮರಗಳು ಬೆಂಕಿಗೆ ಸುಟ್ಟು ಹೋಗಿವೆ’ ಎಂದು ಜನಶಿಕ್ಷಣ ಟ್ರಸ್ಟ್ನ ಸಂಚಾಲಕ ಶೀನಶೆಟ್ಟಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
‘ನಾವು ಬೇಸಿಗೆಯಲ್ಲಿ ನೆಟ್ಟ ಮರಗಳಿಗೆ ನೀರು ಹಾಕುವುದಕ್ಕಾಗಿಯೇ ಕಷ್ಟ ಪಡುತ್ತಿದ್ದೇವೆ. ಅಂತಹ ಸಂದರ್ಭದಲ್ಲಿ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ತ್ಯಾಜ್ಯವನ್ನು ಸುಡುವ ವೇಳೆ ಆರೈಕೆ ಮಾಡಿ ಫೋಷಿಸಿದ ದೊಡ್ಡ ಮರಗಳು ಸುಟ್ಟು ಹೋಗುವುದನ್ನು ಕಾಣುವಾಗ ನೋವಾಗುತ್ತದೆ. ಆಡಳಿತದ ಜೊತೆಗೆ ನಾಗರಿಕರು ಕೂಡಾ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಈ ರೀತಿ ತ್ಯಾಜ್ಯವನ್ನು ಸುಡುವುದು ಕಾನೂನುಬಾಹಿರ. ಇನ್ನು ಮರಗಳ ತರಗೆಲೆ ನೆಪದಲ್ಲಿ ಪ್ಲಾಸ್ಟಿಕ್ಗಳ ಜತೆ ತ್ಯಾಜ್ಯವನ್ನು ಬಯಲು ಪ್ರದೇಶ, ರಸ್ತೆ ಬದಿಗಳಲ್ಲಿ ಸುಡುವುದರಿಂದ ಜನರ ಆರೋಗ್ಯದ ಮೇಲೆಯೂ ಭಾರೀ ಪರಿಣಾಮ ಬೀರುತ್ತದೆ. ಈಗಾಗಲೇ ಮಂಗಳೂರು ನಗರದಲ್ಲಿ ವಾಯು ಮಾಲಿನ್ಯವಾಗಿರುವ ಬಗ್ಗೆ ವರದಿಗಳೂ ಬಂದಿವೆ. ಇಂತಹ ಪರಿಸ್ಥಿತಿಯಲ್ಲಿ ಈ ರೀತಿಯಾಗಿ ತ್ಯಾಜ್ಯ ಸುಟ್ಟ ವಿಷಗಾಳಿಯನ್ನು ಸೇವಿಸುವುದು ಅಪಾಯಕಾರಿ’ ಎಂದು ಪರಿಸರ ಪ್ರೇಮಿ ಜೀತ್ ಮಿಲನ್ ರೋಚ್ ಅಭಿಪ್ರಾಯಿಸಿದ್ದಾರೆ.
ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದು ಮಾತ್ರವಲ್ಲದೆ, ಬೆಂಕಿ ಹಚ್ಚಿ ಸುಡುವುದು ಗಮನಕ್ಕೆ ಬಂದಿದೆ. ಈ ರೀತಿ ಸುಡುವುದು ಕಾನೂನು ಬಾಹಿರವಾಗಿದ್ದು, ಈ ರೀತಿ ಬೆಂಕಿ ಹಚ್ಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಸ್ಥಳೀಯಾಡಳಿತಕ್ಕೆ ಸೂಚನೆ ನೀಡಲಾಗುವುದು.
-ಮುಲ್ಲೈ ಮುಗಿಲನ್, ದ.ಕ. ಜಿಲ್ಲಾಧಿಕಾರಿ