ದಲಿತ ಕಾಲನಿಗಳತ್ತ ಒಂದು ನೋಟ

ಹಿಂದೊಮ್ಮೆ ಕೊಳಚೆ ಪ್ರದೇಶಗಳಲ್ಲಿ ಬಡ ಮಕ್ಕಳಿಗೆ ಉಚಿತ ರಾತ್ರಿಪಾಠಶಾಲೆ ತೆರೆದು ಅಕ್ಷರಾಭ್ಯಾಸ ಮಾಡಿಸುತ್ತಿದ್ದ, ಯುವಜನರಲ್ಲಿ ಆಟೋಟಗಳನ್ನು ಉದ್ದೀಪಿಸಿ ಕ್ರೀಡಾ ಮನೋಭಾವವನ್ನು ಬಿತ್ತುತ್ತಾ ವಿವಿಧ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಸ್ಪರ್ಧಾತ್ಮಕ ಜಗತ್ತನ್ನು ಪರಿಚಯಿಸುವ ಕಾಲ ಇದೀಗ ಹಿಂದೆ ಸರಿದು ಕೇವಲ ಉತ್ಸವಗಳ ಭರಾಟೆಯಲ್ಲಿ ಮುಳುಗಿರುವ ದಲಿತರ ಕಾಲನಿಗಳಲ್ಲಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಬದುಕು ಮತ್ತೆ ಜೀವಂತಿಕೆ ಪಡೆಯಬಹುದೇ?

Update: 2023-12-17 09:44 GMT

ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೊಳಚೆ ಪ್ರದೇಶಗಳೆಂಬ ಹಣೆಪಟ್ಟಿ ಹೊತ್ತು ಮೂಕವೇದನೆಯಿಂದ ನಲುಗುತ್ತಿರುವ ಅನೇಕ ಬಡಾವಣೆಗಳಲ್ಲಿ ಶ್ರಮಿಕ ದಲಿತ ಕುಟುಂಬಗಳು ದೈನಂದಿನ ಕೂಲಿ ನಾಲಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವುದು ಸತ್ಯವಷ್ಟೆ. ಹಳ್ಳಿಗಾಡಿನಲ್ಲಿ ಅಕ್ಷರದ ಅರಿವು ಮತ್ತು ಅವಕಾಶಗಳಿಂದ ವಂಚಿತರಾದ ಈ ಕುಟುಂಬಗಳು ನಗರ ಪ್ರದೇಶಗಳತ್ತ ವಲಸೆ ಬಂದು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಸಣ್ಣ ಪುಟ್ಟ ನೌಕರಿಗಳನ್ನು ಪಡೆದುಕೊಂಡಿರುವುದು ಒಂದೆಡೆಯಾದರೆ, ನಗರ ಪ್ರದೇಶವನ್ನೂ ಬಿಟ್ಟಿಲ್ಲದ ಜಾತಿಯ ಭೂತ ಕೆಲವು ಹಣವಂತರು ಅಥವಾ ಮೇಲ್ವರ್ಗದವರ ದುರ್ವರ್ತನೆಗಳಿಂದ ರೋಸಿ ಹೋಗಿರುವ ತಳಸಮುದಾಯದ ಕುಟುಂಬಗಳು ವಾಸ್ತವ್ಯಕ್ಕಾಗಿ ಅನಿವಾರ್ಯ ವೆಂಬಂತೆ ತಮ್ಮ ತಮ್ಮ ಸಮುದಾಯದವರೇ ಬಹುಸಂಖ್ಯಾತರಿರುವ ಕಾಲನಿ/ಬಡಾವಣೆಗಳನ್ನು ಹುಡುಕಿ ಅಲ್ಲಿ ತಮ್ಮ ನೆಲೆಗಳನ್ನು ಕಂಡುಕೊಂಡಿರುವುದನ್ನು ಕೂಡಾ ಕಾಣಬಹುದು.

ಕೆಲವು ರೆವಿನ್ಯೂ ಬಡಾವಣೆಗಳಾದರೆ ಮತ್ತೆ ಕೆಲವು ಕೊಳಚೆ ಪ್ರದೇಶಗಳು. ಅಲ್ಲಾದರೂ ತಮ್ಮ ಭದ್ರ ನೆಲೆಯ ಹಂಬಲದಿಂದ ಬಿಬಿಎಂಪಿ/ಕೊಳಚೆ ನಿರ್ಮೂಲನ (ಅಭಿವೃದ್ದಿ) ಮಂಡಳಿ, ನಗರಾಭಿವೃದ್ಧಿ ಪ್ರಾಧಿಕಾರ ಮುಂತಾದ ಸರಕಾರಿ ಸಂಸ್ಥೆಗಳಿಂದ ಹಕ್ಕುಪತ್ರ/ಸ್ವಾಧೀನ ಪತ್ರಗಳಿಗಾಗಿ ಆಸೆಗಣ್ಣಿನಿಂದ ನೋಡುತ್ತ ಪ್ರತೀ ಚುನಾವಣೆಯ ಸಂದರ್ಭಗಳಲ್ಲೂ ವಿವಿಧ ಪಕ್ಷಗಳ ಬಣ್ಣದ ಮಾತುಗಳಿಗೆ ಬೆರಗಾಗಿ ವೋಟು ಚಲಾಯಿಸುತ್ತಲೇ ಬಂದ ದಲಿತ ಕುಟುಂಬಗಳು ಅಮೃತ ಮಹೋತ್ಸವವನ್ನಾಚರಿಸಿಕೊಂಡು ಬೀಗುತ್ತಿರುವ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇಂದಿಗೂ ವಾಸಸ್ಥಳದ ಹಕ್ಕುಪತ್ರ ದೊರೆತಿಲ್ಲವೆಂದು, ರೇಷನ್ ಕಾರ್ಡ್ಗಾಗಿ, ಜಾತಿ ಪ್ರಮಾಣಪತ್ರ, ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ, ಆಧಾರ್ ಕಾರ್ಡಿನ ತಿದ್ದುಪಡಿಗಳಿಗಾಗಿ ಸಾಲ/ಸಬ್ಸಿಡಿಗಳಿಗಾಗಿ ಅರ್ಜಿ ಸಲ್ಲಿಸಲು ಸಾಲುಗಟ್ಟಿ ನಿಲ್ಲುತ್ತಿರುವ ಈ ಬಡಾವಣೆಗಳ ಬಡ ದಲಿತ ಕುಟುಂಬಗಳ ಬವಣೆಯನ್ನು ಇಂದಿಗೂ ಜೀವಂತವಾಗಿರಿಸಿರುವ ಈ ನಮ್ಮ ವ್ಯವಸ್ಥೆ ಸುಧಾರಣೆಗೊಳ್ಳಬಹುದೇ?

ಇಂತಹ ಬಡಾವಣೆಗಳಲ್ಲಿ ದಲಿತರು, ಹಿಂದುಳಿದವರು ಮತ್ತು ಕೆಲವು ಅಲ್ಪಸಂಖ್ಯಾತ ಸಮುದಾಯಗಳು ಪರಸ್ಪರ ಸಹಬಾಳ್ವೆ ಮತ್ತು ಸೌಹಾರ್ದದಿಂದ ಬದುಕು ನಡೆಸುತ್ತಿರುವ ನಡುವೆ ಅಲ್ಲಿ ಧಾರ್ಮಿಕ ಚಟುವಟಿಕೆಗಳು ಮೆಲ್ಲನೆ ಮೇಲೆದ್ದು ಬಡಾವಣೆಯೊಂದರಲ್ಲೇ ವಿವಿಧ ದೇವಸ್ಥಾನಗಳ ನಿರ್ಮಾಣ, ಊರಹಬ್ಬ, ಅಣ್ಣಮ್ಮದೇವಿ ಉತ್ಸವ ಇತ್ಯಾದಿ ಹೆಸರುಗಳಿಂದ ತಲೆಎತ್ತುವ ಚಟುವಟಿಕೆಗಳಲ್ಲಿ ಮುಖಂಡತ್ವದ ಮುಖವಾಡ ಹೊತ್ತವರು ರಾಜಕೀಯ ಪಕ್ಷಗಳ ಹಿಂಬಾಲಕರಾಗಿ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗುವಂತೆ, ಕನ್ನಡಪರ ಸಂಘಟನೆಗಳು, ದಲಿತ ಮತ್ತು ಅಂಬೇಡ್ಕರ್ ಹೆಸರಿನ ಸಂಘಗಳು ಒಂದೊಂದೇ ಮೇಲೆದ್ದು ಗುಂಪುಗಾರಿಕೆ/ ಪಕ್ಷ ರಾಜಕಾರಣ/ವ್ಯಕ್ತಿ ಪ್ರತಿಷ್ಠೆಗಳು ಮೇಳೈಸಿ ಒಂದೇ ಬಡಾವಣೆಯಲ್ಲಿ ಅಥವಾ ಒಂದೇ ರಸ್ತೆಯಲ್ಲಿ ಪರಸ್ಪರ ವಿರೋಧಿ ಗುಂಪುಗಳು ತಲೆ ಎತ್ತಿ ಇತಿಹಾಸ ಪುರುಷರ, ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರ, ಪ್ರತಿಮೆ, ಧ್ವಜಸ್ತಂಭಗಳ ನಿರ್ಮಾಣ, ಹುಟ್ಟುಹಬ್ಬಗಳ ನೆಪದಲ್ಲಿ ಧ್ವನಿವರ್ಧಕ ಹಾಗೂ ಆರ್ಕೆಸ್ಟ್ರಾಗಳ ಅಬ್ಬರ, ಸಂಚಾರಿ ಸಮಸ್ಯೆಗಳನ್ನು ಹುಟ್ಟು ಹಾಕಿ ಇನ್ನಿತರ ಜನತೆಯ ತಾಳ್ಮೆಯನ್ನು ಪರೀಕ್ಷಿಸುತ್ತಾ ವರ್ಷಪೂರ್ತಿ ಚಲಾವಣೆಯಲ್ಲಿರುವುದನ್ನು ಕಂಡಾಗ ಕೂಲಿ ಮಾಡಿ ಬದುಕು ಹೊರೆಯುವ ಶ್ರಮಜೀವಿ ಜನರ ದುಡಿಮೆಯ ಹಣ ಯಾವ ಯಾವ ಸದುದ್ದೇಶಗಳಿಗೆ ಬಳಕೆಯಾಗುತ್ತಿದೆ ಎಂದು ಅಂದಾಜಿಸಬಹುದು. ರಾಜಕೀಯ ಪಕ್ಷಗಳು ತಮ್ಮ ತಮ್ಮ ರಾಜಕೀಯ ನೆಲೆಗಳನ್ನು ಭದ್ರಪಡಿಸಿಕೊಳ್ಳಲು ಅಮಾಯಕ ಜನರಿಗೆ ಇನ್ನಿಲ್ಲದ ಆಮಿಷಗಳನ್ನು ನೀಡಿ ಮುಖಂಡತ್ವದ ಯುವ ಪುಢಾರಿಗಳ ಮೂಗಿಗೆ ತುಪ್ಪ ಸವರಿ ಅವರುಗಳ ಭವಿಷ್ಯಕ್ಕೆ ನೆರವಾಗದೆ ತತ್ಕಾಲದ ಅವಶ್ಯಕತೆಗಳಿಗೆ ಸೀಮಿತಗೊಳಿಸಿ ಬಳಸಿ ಬಿಸಾಡುವ ಅಥವಾ ಅವಶ್ಯಕತೆ ತೀರಿದ ಮೇಲೆ ಮೂಲೆಗುಂಪು ಮಾಡುವ ಪ್ರವೃತ್ತಿಗಳಿಗೆ ಅಂತ್ಯವಿದೆಯೇ?

ಹುಟ್ಟಿ ಬಂದ ಹಳ್ಳಿಗಳ ಮೂಲನೆರಳುಗಳನ್ನು ಒಳಗೊಂಡು ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಅಭಿರುಚಿ ಹೊಂದಿರುವವರು ಪೌರಾಣಿಕ ನಾಟಕಗಳನ್ನು, ಹರಿಕಥೆ, ಭಜನೆ ಕಲಾಕ್ಷೇಪಗಳನ್ನು ನಡೆಸಿಕೊಂಡು ಮನರಂಜನೆ ಮತ್ತು ಸಂತೋಷ ಪಡುವುದು ಒಂದೆಡೆಯಾದರೆ, ಮಕರ ಸಂಕ್ರಾತಿಗಾಗಿ ಪೊಂಗಲ್ ಆಚರಣೆ, ಮಹಾಶಿವರಾತ್ರಿ ನೆಪದಲ್ಲಿ ಜಾಗರಣೆ, ಅಯ್ಯಪ್ಪ ಮಾಲೆ ಧಾರಣೆ, ದೇವಸ್ಥಾನಗಳಿಗೆ ಪಾದಯಾತ್ರೆ, ವರ್ಷಪೂರ್ತಿ ಗಣೇಶೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಸಿನೆಮಾ ನಟ-ನಟಿಯರ, ರಾಜಕಾರಣಿಗಳ ಜನ್ಮ ದಿನೋತ್ಸವ, ಅದಕ್ಕಾಗಿ ಅದ್ದೂರಿ ದೀಪಾಲಂಕಾರ, ಕಟೌಟ್ಗಳ, ಫ್ಲೆಕ್ಸ್ಗಳ ಹಾವಳಿ..... ಹೀಗೆ, ಪಟ್ಟಿ

ಉದ್ದುದ್ದ ಬೆಳೆಯುತ್ತಾ ಹೋಗುತ್ತದೆ ಎಂದರೆ ತಪ್ಪಲ್ಲ. ಹಿಂದೊಮ್ಮೆ ಕೊಳಚೆ ಪ್ರದೇಶಗಳಲ್ಲಿ ಬಡ ಮಕ್ಕಳಿಗೆ ಉಚಿತ ರಾತ್ರಿಪಾಠಶಾಲೆ ತೆರೆದು ಅಕ್ಷರಾಭ್ಯಾಸ ಮಾಡಿಸುತ್ತಿದ್ದ, ಯುವಜನರಲ್ಲಿ ಆಟೋಟಗಳನ್ನು ಉದ್ದೀಪಿಸಿ ಕ್ರೀಡಾ ಮನೋಭಾವವನ್ನು ಬಿತ್ತುತ್ತಾ ವಿವಿಧ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಸ್ಪರ್ಧಾತ್ಮಕ ಜಗತ್ತನ್ನು ಪರಿಚಯಿಸುವ ಕಾಲ ಇದೀಗ ಹಿಂದೆ ಸರಿದು ಕೇವಲ ಉತ್ಸವಗಳ ಭರಾಟೆಯಲ್ಲಿ ಮುಳುಗಿರುವ ದಲಿತರ ಕಾಲನಿಗಳಲ್ಲಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಬದುಕು ಮತ್ತೆ ಜೀವಂತಿಕೆ ಪಡೆಯಬಹುದೇ?

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಗೌಡಗೆರೆ ಮಾಯುಶ್ರೀ

contributor

Similar News