ಮಾನವೀಯ ಸಂಸ್ಕೃತಿ ಮರುಹುಟ್ಟಿಗೆ ತುಡಿವ ಕಥನ
ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುವ ‘ಎದೆಯ ಹಣತೆ’ ಕಥೆಯ ತರವೇ ವಾಸ್ತವಿಕ ಶೈಲಿಯಲ್ಲಿರುವ ‘ಕರಿನಾಗರಗಳು’, ‘ಹೃದಯದ ತೀರ್ಪು’, ‘ಬೆಂಕಿಮಳೆ’, ‘ಸರಿದ ಕಾರ್ಮೋಡ’, ‘ಜೀವ ಸೆಲೆ’, ‘ನಮ್ಮೊಳಗಿನ ಜರೀನ’, ‘ರಾಹಿಲ ಎಂಬ ಕನ್ಯೆಯ ಕಥೆ’, ‘ಸಫೀರಾ’, ‘ಬೊಗಸೆಯ ನೀರು’, ‘ಬಡವರ ಮಗಳು ಹೆಣ್ಣಲ್ಲ’, ‘ಒಮ್ಮೆ ಹೆಣ್ಣಾಗು ಪ್ರಭುವೆ!’, ‘ಹೃದಯದ ಹಕೀಕತ್ತು’, ‘ಬೇರಿಗೊಂದಿಷ್ಟು ಪ್ರೀತಿ’ ಮುಂತಾದವು ಬಾನು ಮುಷ್ತಾಕ್ರವರ ಅತ್ಯಂತ ಪರಿಣಾಮಿ ಕಥೆಗಳೆನ್ನಬಹುದು. ಮಹಿಳೆ ನನ್ನ ಮುಖ್ಯ ಕಾಳಜಿ ಎನ್ನುವ ಬಾನು ಮುಷ್ತಾಕ್ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ಪದೇಪದೇ ಒದಗುವ ನೋವು, ಅವಮಾನ ಸಂಕಟ ದುಃಖ ದುರಂತವನ್ನು ಇನ್ನಿಲ್ಲದಂತೆ ಚಿತ್ರಿಸುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಸ್ತ್ರೀಸಮುದಾಯ ಮೆಲ್ಲಗೆ ಸಂಘಟಿತವಾಗುತ್ತಿರುವುದನ್ನೂ, ಎಲ್ಲ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಪ್ರತಿಭಟಿಸಲು ಸನ್ನದ್ಧವಾಗುತ್ತಿರುವುದನ್ನೂ ಸೂಚಿಸುತ್ತಾರೆ. ಇದೇ ಇವರ ಕಥೆಗಾರಿಕೆಯ ಹೆಚ್ಚುಗಾರಿಕೆ ಕೂಡ. ‘ಕರಿ ನಾಗರಗಳು’ ಕಥೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ ‘ಹಸೀನಾ’ ಚಿತ್ರಕ್ಕೆ ಮೂರು ರಾಷ್ಟ್ರಪ್ರಶಸ್ತಿ ಲಭಿಸಿವೆ. ಕಥೆ ಎಂದರೆ ಮನೋಲೋಕದ ಮಾಯಾನಗರಿ ಎನ್ನುವ ಬಾನುರವರ ಕಥಾಲೋಕದ ವಸ್ತುವೈವಿಧ್ಯ ಬಾನಿನಷ್ಟೇ ವಿಸ್ತಾರವಾದದ್ದು. ನೆಲ-ಜಲ ಮನೆ-ಜೀವನ ಅನುಭವಗಳ ಸಮಗ್ರತೆಯುಳ್ಳದ್ದು. ಸರಳ ಸಹಜ ಸ್ವಾಭಾವಿಕ ಸೃಷ್ಟಿಯಾದ ಇಲ್ಲಿನ ಪಾತ್ರಗಳು ಪರಂಪರೆಯ ಕ್ರೌರ್ಯದಲ್ಲೋ ಆಧುನಿಕಥೆಯ ತಲ್ಲಣದಲ್ಲೋ ನಲುಗುತ್ತ, ಮೆಲ್ಲಗೆ ಮುನ್ನಡೆಯುತ್ತಲೇ ನಸುನಗುತ್ತ ನಮ್ಮ ಸುತ್ತಲ ಜೀವಂತ ವ್ಯಕ್ತಿಗಳಂತೆ ಕಂಗೊಳಿಸುತ್ತವೆ. ಅನುಭವದ ಅಕ್ಷಯಪಾತ್ರೆ ನನ್ನ ಪಾಲಿಗೆ ದಕ್ಕಿತು ಎನ್ನುವ ಇವರ ಮಾತಿನಲ್ಲಿ ಧಾರ್ಷ್ಟ್ಯದ ಸೋಂಕಿಲ್ಲ. ಯಾಕೆಂದರೆ ಕಥೆಗಾರಿಕೆ ತತ್ವ ಸಿದ್ಧಾಂತಗಳಿಗಿಂತ ಹೆಚ್ಚಾಗಿ ಪ್ರತ್ಯಕ್ಷ ಪರೋಕ್ಷ ಅನುಭವವನ್ನೇ ಪ್ರಮಾಣವನ್ನಾಗಿ ಸ್ವೀಕರಿಸುವ ಕಲೆ. ನಾನು ಸಿದ್ಧಾಂತ ಮತ್ತು ಸೂತ್ರಗಳಿಗೆ ಒಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಈ ಲೇಖಕಿ ಸಹಜ ಬದುಕಿಗೆ ಇಡಿಯಾಗಿ ಬದ್ಧರಾದವರು. ಜಗತ್ತಿನ ಆಗುಹೋಗುಗಳನ್ನು ತೆರೆದ ಕಣ್ಣಿಂದ ವೀಕ್ಷಿಸುವಂಥವರು. ಅಂತಿಮವಾಗಿ ಅರ್ಧಸತ್ಯಗಳಾಗಿಯೇ ಉಳಿದುಬಿಡುವ ಕೃತಕ ಸಿದ್ಧಾಂತಗಳಿಗೆ ತಮ್ಮಂಥವರು ಬದ್ಧರಾಗಬೇಕಿಲ್ಲೆಂಬ ಆಳವಾದ ಕಲಾತ್ಮಕ ಅರಿವಿರುವವರು. ಆರೋಗ್ಯಪೂರ್ಣ ಲೋಕದೃಷ್ಟಿ, ಸಾಂಸ್ಕೃತಿಕ ಸೂಕ್ಷ್ಮಗಳ ಇಂಗಿತ ಹೊಮ್ಮಿಸುವ ಭಾಷಾಶೈಲಿ ಮತ್ತು ಗಂಭೀರ ಸಾಮಾಜಿಕ ಕಾಳಜಿಯುಳ್ಳ ನಿರೂಪಣೆಯಿಂದಾಗಿ ಇವರ ಕಥೆಗಳು ಗಮನ ಸೆಳೆಯುತ್ತವೆ. ದಟ್ಟವಿವರಗಳಿಂದ ಕಣ್ಣಿಗೆ ಕಟ್ಟುವ ಪ್ರಸಂಗಗಳ ಮೂಲಕ ಬದುಕನ್ನು ಎಳೆಯೆಳೆಯಾಗಿ ವಿಶ್ಲೇಷಿಸುವ, ಅಗತ್ಯ ಬಿದ್ದಲ್ಲಿ ಹಾಳತವಾಗಿ ವಿಡಂಬಿಸುವ, ನೇರವಾಗಿ ನಾಳೆಗಳಿಗೆ ನೆಡುವ ದಿಟ್ಟ ನಿಲುವು ಪ್ರಕಟಿಸುವ ಕಥೆಗಳಿವು.
ನನ್ನ ಕಥೆ ನನ್ನ ಮಗುವಿನ ಹಾಗೆ ಎನ್ನುವ ತಾಯಿಭಾವದ ಅಪರೂಪದ ಕಥನ ಪ್ರತಿಭೆ ಶ್ರೀಮತಿ ಬಾನು ಮುಷ್ತಾಕ್ರವರಿಗೆ ಮೊತ್ತಮೊದಲ ಫಲ್ಗು ಕಥಾ ಪ್ರಶಸ್ತಿ (2017) ಸಂದದ್ದು ತುಂಬ ಔಚಿತ್ಯಪೂರ್ಣವೆಂಬುದು ನಮ್ಮೆಲ್ಲರ ಭಾವನೆ. ಹೇಳು-ಕೇಳು ಪರಂಪರೆಯ ಚಿನಕುರುಳಿ ಮಾತುಗಾತಿಯಾಗಿದ್ದ ನಮ್ಮಮ್ಮ ಫಲ್ಗುಬಾಯಿ ಕೆಲವೊಮ್ಮೆ ಸಂಪ್ರದಾಯದ ಚೌಕಟ್ಟನ್ನೇ ಹಿಗ್ಗಿಸಿಬಿಡುತ್ತಿದ್ದಳು. ಆಕೆಯ ನೆನಪಿನ ಈ ಪುಟ್ಟ ಪ್ರಶಸ್ತಿ ಕಥಾ ಸಿದ್ಧಿಗೆ ಮಣಿದು ತಾನಾಗಿಯೇ ಒಲಿದುಬರುವಂತಹದು. ಶುಲ್ಕ, ಅರ್ಜಿ, ವಶೀಲಿ, ಶಿಫಾರಸು ಅವಶ್ಯವಿಲ್ಲ. ಮೊತ್ತ ಮೊದಲ ಸದರಿ ಪ್ರಶಸ್ತಿ ಸ್ವೀಕರಿಸಿದ ಬಾನು ಮುಷ್ತಾಕ್ರವರಿಗೆ ನಮ್ಮ ಕುಟುಂಬದ ಕೃತಜ್ಞತೆಗಳು.
(‘ಹೆಣ್ಣು ಹದ್ದಿನ ಸ್ವಯಂವರ’ ಕವನ ಸಂಕಲನದ ಮುನ್ನುಡಿಯ ಆಯ್ದ ಭಾಗ)