×
Ad

ನನೆಗುದಿಗೆ ಬಿದ್ದ ಪಂಡಿತ್ ಪುಟ್ಟರಾಜ ಗವಾಯಿ ಸ್ಮಾರಕ ಭವನ

Update: 2025-06-19 14:36 IST

ಗದಗ: ನಾಡಿನ ನಡೆದಾಡುವ ದೇವರೆಂದು ಭಕ್ತರ ಮನದಲ್ಲಿ ಮನೆ ಮಾಡಿ, ಅಂಧ-ಅನಾಥರ ಬಾಳನ್ನು ಬೆಳಗಿ ಅಜರಾಮರರಾದ ಪಂಡಿತ್ ಪುಟ್ಟರಾಜ ಗವಾಯಿಯವರ ಜೀವನ ಲಕ್ಷಾಂತರ ಭಕ್ತರಿಗೆ ಪ್ರೇರಣೆ ನೀಡಿದೆ.

ಆದರೆ, ಕಳೆದ 11 ವರ್ಷಗಳಿಂದ ಆಶ್ರಮದ ಪಕ್ಕದಲ್ಲಿ ಅಪೂರ್ಣಗೊಂಡಿರುವ ಪುಟ್ಟರಾಜರ ಸ್ಮಾರಕ ಭವನವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿಸುವ ಮೂಲಕ ಕಲಾವಿದರಿಗೆ ಹಾಗೂ ಭಕ್ತಸಮೂಹಕ್ಕೆ ಕೈಲಾಸವಾಗಬೇಕಿದ್ದ ಸ್ಮಾರಕ ಭವನ ಈವರೆಗೂ ಪೂರ್ಣಗೊಳ್ಳದಿರುವುದು ಲಕ್ಷಾಂತರ ಭಕ್ತರಲ್ಲಿ ನಿರಾಸೆಯನ್ನುಂಟುಮಾಡಿದೆ.

ನಗರದ ಎಪಿಎಂಸಿಯಲ್ಲಿರುವ ವಿರೇಶ್ವರ ಪುಣ್ಯಾಶ್ರಮಕ್ಕೆ ಹೊಂದಿಕೊಂಡಿರುವ ಈ ಸ್ಮಾರಕಭವನ 27 ಗುಂಟೆ ಪ್ರದೇಶದಲ್ಲಿ ವಿಸ್ತೀರ್ಣಗೊಂಡಿದೆ. 2010ರಲ್ಲಿ ಸ್ಮಾರಕಭವನ ನಿರ್ಮಾಣಕ್ಕೆ ಸರಕಾರ ಆದೇಶ ನೀಡಿ, 2014ರಲ್ಲಿ ಕಾಮಗಾರಿ ಆರಂಭಿಸಿದರೂ ಇವರೆಗೂ ಪೂರ್ಣಗೊಂಡಿಲ್ಲ. ಮೊದಲನೇಯ ಹಂತದಲ್ಲಿ ಅಂದಾಜು 5 ಕೋಟಿ ರೂ.ಗಳ ಅನುದಾನದಲ್ಲಿ ಕಾಮಗಾರಿ ಮುಗಿದಿದ್ದು, ಹೆಚ್ಚುವರಿಯಾಗಿ 1.24 ಕೋಟಿ ರೂ.ಗಳ ಖರ್ಚಾಗಿದೆ. 2ನೇ ಹಂತದ ಕಾಮಗಾರಿಯಲ್ಲಿ ಪ್ಲೋರಿಂಗ್, ಡಿಸೈನ್ ಮತ್ತು ಫಿನಿಷಿಂಗ್ ಕಾರ್ಯ ಉಳಿದುಕೊಂಡಿದೆ.

ಈ ಸ್ಮಾರಕ ಭವನದ ನೆಲಮಹಡಿಯಲ್ಲಿ ಕಚೇರಿ, ಪಾರ್ಕಿಂಗ್, ವಸತಿ. ಮೊದಲನೇಯ ಮಹಡಿಯಲ್ಲಿ ಆಡಿಟೋರಿಯಂ ಮತ್ತು ಬಾಲ್ಕನಿಯಲ್ಲಿ ಪಂ.ಪುಟ್ಟರಾಜ ಗವಾಯಿಗಳು ನುಡಿಸುತ್ತಿದ್ದ ತಂಬೂರಿ ಮಾದರಿಯನ್ನು ವಿನ್ಯಾಸಗೊಳಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಭಕ್ತರ ಆಸೆಯಂತೆ ಸ್ಮಾರಕಭವನ ನಿರ್ಮಾಣಗೊಂಡು ಜಿಲ್ಲೆಯಲ್ಲಿ ಪ್ರವಾಸಿಗರ ಆಕರ್ಷಣಿಯ ಕೇಂದ್ರ ಬಿಂದು ಆಗಲಿ ಎನ್ನುವುದು ಜಿಲ್ಲೆಯ ಜನರ ಮನದಾಸೆಯೂ ಆಗಿದೆ.

ಈ ಹಿಂದೆ ನಗರಕ್ಕೆ ಆಗಮಿಸಿದ್ದ ಸಚಿವ ಶಿವರಾಜ ತಂಗಡಗಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಅಪೂರ್ಣಗೊಂಡ ಪಂ.ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ಪೂರ್ಣಗೊಳಿಸಲು ಅನುದಾನ ನೀಡಿದರೆ ಶೀಘ್ರದಲ್ಲಿ ಲೋಕಾರ್ಪಣೆ ಗೊಳಿಸಲಾಗುವುದು ಎಂದು ಮನವಿ ಮಾಡಿದ್ದರು. ಇದಕ್ಕೆ ಸಚಿವ ತಂಗಡಗಿ ಅವರು, ಸಹ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾಧ್ಯವಾದಷ್ಟು ಅನುದಾನ ನೀಡಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಅಂತಿಮ ಹಂತದ ಕಾಮಗಾರಿಗೆ 5 ಕೋಟಿ ರೂ.ಗಳು ಅನುದಾನ ಬಿಡುಗಡೆಯಾದರೆ ಈ ಸ್ಮಾರಕ ಭವನ ಪೂರ್ಣಗೊಳ್ಳಲಿದೆ. ಆದಷ್ಟು ಬೇಗನೆ ಅನುದಾನ ಬಿಡುಗಡೆಗೊಂಡು ಭಕ್ತರ ಕನಸು ನನಸಾಗಬೇಕಿದೆ.

ಅಂತಿಮ ಹಂತದ ಕಾಮಗಾರಿಗಾಗಿ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಸ್ಮಾರಕ ಭವನ ನಿರ್ಮಾಣಗೊಳ್ಳಲು ಬಾಕಿ ಕಾಮಗಾರಿ ಮೊತ್ತ 1.24 ಕೋ.ರೂಗಳನ್ನು ಕಳೆದ ಮಾರ್ಚ್‌ನಲ್ಲಿ ನೀಡಲಾಗಿದ್ದು, ಅಂತಿಮ ಕಾಮಗಾರಿಗಾಗಿ 5 ಕೋ.ರೂ.ಗಳನ್ನು ಈ ಬಾರಿ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಅಂತಿಮ ಹಂತದ 5 ಕೋ.ರೂ.ಗಳ ಅನುದಾನ ಬಿಡುಗಡೆಯಾದರೆ ಪಿಡಬ್ಲ್ಯೂಡಿ ಅವರಿಗೆ ಗುತ್ತಿಗೆ ನೀಡಿ ಈ ವರ್ಷದಲ್ಲಿ ಸ್ಮಾರಕ ಭವನ ಕಾಮಗಾರಿ ಪೂರ್ಣಗೊಳಿಸಲಾಗುವುದು.

-ವೀರಯ್ಯಸ್ವಾಮಿ ಬಿ., ಗದಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಫಾರೂಕ್ ಮಕಾನದಾರ

contributor

Similar News