ಏದುಸಿರು ಬಿಡುತ್ತಿರುವ ಒಕ್ಕೂಟ ವ್ಯವಸ್ಥೆ

ಸಂಸತ್ತಿನ ಉಭಯ ಸದನಗಳಲ್ಲಿ ಉತ್ತರದ ರಾಜ್ಯಗಳ ಪ್ರಾಬಲ್ಯ ಇನ್ನಷ್ಟು ಹೆಚ್ಚಾಗುವ ಸಂಭವವಿದೆ. ಜನಗಣತಿಯ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡನೆಯಾದರೆ ಕರ್ನಾಟಕ ಈಗಿರುವ 28 ಬದಲಾಗಿ 41, ತಮಿಳುನಾಡು ಈಗಿರುವ 39ರ ಬದಲಾಗಿ 49, ಕೇರಳ 20, ಆಂಧ್ರಪ್ರದೇಶ ಮತ್ತು ತೆಲಂಗಾಣ 54 ಅಂದರೆ ಒಟ್ಟು 164 ಲೋಕಸಭಾ ಸ್ಥಾನಗಳು ದಕ್ಷಿಣ ಭಾರತಕ್ಕೆ ದೊರೆಯಲಿವೆ. ಉತ್ತರ ಭಾರತಕ್ಕೆ ಒಟ್ಟು 600 ಸ್ಥಾನಗಳು ಸಿಗಲಿವೆ. ಹೀಗಾಗಿ ದಕ್ಷಿಣ ಭಾರತದ ಭಾಷೆಗಳು ಕ್ಷೀಣಿಸಿದರೆ ಅಚ್ಚರಿ ಪಡಬೇಕಿಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರದಿಂದ ಬರಬಹುದಾದ ಪಾಲು ಕಡಿಮೆಯಾಗಬಹುದು. ಇದರ ಒಟ್ಟು ಪರಿಣಾಮ ನಾವು ಉಸಿರಾಡುತ್ತಿರುವ ಫೆಡರಲ್ ವ್ಯವಸ್ಥೆ ಅಂದರೆ ಒಕ್ಕೂಟ ವ್ಯವಸ್ಥೆ ಕ್ರಮೇಣ ನಶಿಸಿ ಹೋದರೆ ಅಚ್ಚರಿ ಪಡಬೇಕಾಗಿಲ್ಲ.

Update: 2023-12-25 04:28 GMT

ಭಾರತ ಎಂಬುದು ಒಂದೇ ಧರ್ಮ, ಸಂಸ್ಕೃತಿ, ಭಾಷೆ, ಜನಾಂಗ ಹಾಗೂ ರಾಷ್ಟ್ರೀಯತೆಗಳಿಗೆ ಸೇರಿದ ಪರಿಕಲ್ಪನೆ ಅಲ್ಲ. ಇದು ಬಹುತ್ವದ ಭೂಮಿ. ಸ್ವಾತಂತ್ರ್ಯಾ ನಂತರ ಹೊಸ ಭಾರತ ಕಟ್ಟಲು ಮುಂದಾದ ನಮ್ಮ ರಾಷ್ಟ್ರೀಯ ವಿಮೋಚನಾ ಚಳವಳಿಯ ನೇತಾರರಿಗೆ ಇದೆಲ್ಲ ಗೊತ್ತಿತ್ತು. ಅದಕ್ಕೆ ನಮ್ಮ ಸಂವಿಧಾನ ನಿರ್ಮಾಪಕರು ಇದನ್ನು ಒಂದು ರಾಷ್ಟ್ರ ಎಂದು ಕರೆಯಲಿಲ್ಲ. ಅದರ ಬದಲಾಗಿ ಒಕ್ಕೂಟ ಎಂದು ಕರೆದರು. ಇಂಗ್ಲಿಷ್‌ನಲ್ಲಿ ಫೆಡರಲ್ ಸ್ಟೇಟ್ ಎಂದು ಕರೆಯಲಾದ ಭಾರತದಂಥ ಇನ್ನೊಂದು ಮಾದರಿ ಜಗತ್ತಿನಲ್ಲಿ ಎಲ್ಲೂ ಇಲ್ಲ.

ಭಾರತ ಎಂಬ ಈ ಒಕ್ಕೂಟ ರಾಷ್ಟ್ರದಲ್ಲಿ ಉತ್ತರದ ರಾಜ್ಯಗಳಿಗೂ ದಕ್ಷಿಣದ ರಾಜ್ಯಗಳಿಗೂ ಆಹಾರ, ಭಾಷೆ, ಸಂಸ್ಕೃತಿ, ಉಡುಪುಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ದಕ್ಷಿಣದಲ್ಲೇ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಇವುಗಳ ನಡುವಿನ ಭಾಷಾ ವೈವಿಧ್ಯತೆ ಇದೆ. ಅದಕ್ಕೆ ರಾಷ್ಟ್ರ ಕವಿ ಕುವೆಂಪು ಅವರು ಇದನ್ನು ’ಸರ್ವಜನಾಂಗದ ಶಾಂತಿಯ ತೋಟ’ ಎಂದು ಕರೆದರು. ಅವರು ಕರೆದದ್ದು ಕರ್ನಾಟಕಕ್ಕೆ ಹೇಗೆ ಅನ್ವಯವಾಗುತ್ತದೋ ಅದೇ ರೀತಿ ಇಡೀ ಭಾರತಕ್ಕೂ ಅನ್ವಯವಾಗುತ್ತದೆ. ಭಾರತ ಈವರೆಗೆ ಸುರಕ್ಷಿತವಾಗಿ ಉಳಿದಿರುವುದು ಯಾವುದೇ ದೇವರು, ಇಲ್ಲವೇ ಧರ್ಮದಿಂದ ಅಲ್ಲ. ಬದಲಾಗಿ ಇಲ್ಲಿ ವೈವಿಧ್ಯಮಯ ಎಂಬುದು ಪರಸ್ಪರ ಬೆಸೆದುಕೊಂಡಿರುವ ಬಹುತ್ವ ಸಂಸ್ಕೃತಿಯಿಂದ.

ಆದರೆ, ಈ ಬಹು ಸುಂದರವಾದ ಹೆಮ್ಮೆಯ ಬಹುತ್ವಕ್ಕೆ ಈಗ ಹಿಂದೆಂದೂ ಕಂಡರಿಯದ ಅಪಾಯ ಎದುರಾಗಿದೆ. ಇಲ್ಲಿನ ಅನೇಕತೆಯನ್ನು ಅಳಿಸಿ ಹಾಕಿ ದೇಶದ ಮೇಲೆ ಏಕ ಸಂಸ್ಕೃತಿ, ಏಕ ಧರ್ಮ ಮತ್ತು ಏಕ ಭಾಷೆಯನ್ನು ಹೇರಲು ಹೊರಟವರು ತಮಗಿರುವ ಅಧಿಕಾರದ ಬಲದಿಂದ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಧಕ್ಕೆ ತರುತ್ತಿದ್ದಾರೆ. ದಕ್ಷಿಣದ ರಾಜ್ಯಗಳ ಮೇಲೆ ರಾಷ್ಟ್ರ ಭಾಷೆಯ ಹೆಸರಿನಲ್ಲಿ ಹಿಂದಿಯನ್ನು ಬಲವಂತವಾಗಿ ಹೇರುವ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ನಾವು ಓಡಾಡುವ ರೈಲುಗಳಲ್ಲಿ ಹಿಂದಿ ನಿಧಾನವಾಗಿ ತಳವೂರುತ್ತಿದೆ. ಕೇಂದ್ರ ಸರಕಾರದ ಹಲವಾರು ದಾಖಲೆಗಳು, ಕಾಗದಪತ್ರಗಳ ಹಿಂದಿಮಯ ಆಗುತ್ತಿವೆ.

ಇತ್ತೀಚೆಗೆ ಪ್ರತಿಪಕ್ಷಗಳ ಇಂಡಿಯಾ ಮೈತ್ರಿ ಕೂಟದ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹಿಂದಿಯಲ್ಲಿ ಮಾತನಾಡಿದಾಗ ತಮಿಳುನಾಡಿನ ಡಿಎಂಕೆ ನಾಯಕ ಬಾಲು ಭಾಷಣದ ಇಂಗ್ಲಿಷ್ ಅನುವಾದಕ್ಕೆ ಆಗ್ರಹಿಸಿದರು. ಇದರಿಂದ ರೊಚ್ಚಿಗೆದ್ದ ನಿತೀಶ್ ಕುಮಾರ್ ‘ಹಿಂದಿ ರಾಷ್ಟ್ರ ಭಾಷೆ. ಅದನ್ನು ಎಲ್ಲರೂ ಕಲಿಯಬೇಕು ಅನುವಾದ ಏಕೆ’ ಎಂದು ಕೋಪಿಸಿಕೊಂಡರು.

ಇದು ಒಂದು ಸಣ್ಣ ಉದಾಹರಣೆ ಮಾತ್ರ. ಉತ್ತರ ಭಾರತದ ರಾಜಕಾರಣಿಗಳು ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಕರೆದು, ಹೇರಲು ಹೊರಟಿದ್ದಾರೆ. ಆದರೆ, ವಾಸ್ತವವಾಗಿ ಹಿಂದಿ ರಾಷ್ಟ್ರ ಭಾಷೆಯಲ್ಲ, ರಾಷ್ಟ್ರ ಭಾಷೆಗಳಲ್ಲಿ ಅದೂ ಒಂದು. ಕನ್ನಡ, ಮಲಯಾಳಂ, ತಮಿಳು, ತೆಲುಗು, ಮರಾಠಿ ಸೇರಿ ಎಲ್ಲಾ ಪ್ರಾದೇಶಿಕ ಭಾಷೆಗಳು ರಾಷ್ಟ್ರ ಭಾಷೆಗಳೇ ಎಂದು ಸಂವಿಧಾನ ಹೇಳುತ್ತದೆ.

ಇದು ಸಮಾಜವಾದಿ ನಾಯಕ ಡಾ.ರಾಮ್ ಮನೋಹರ್ ಲೋಹಿಯಾ ಅವರಿಗೆ ಗೊತ್ತಿತ್ತು. ಅಂತಲೇ ಕಟ್ಟಾ ಹಿಂದಿ ಪ್ರೇಮಿಯಾಗಿದ್ದ ಅವರು ದಕ್ಷಿಣದ ಭಾಷೆಗಳನ್ನು ರಾಷ್ಟ್ರ ಭಾಷೆಗಳು ಎಂದು ಮನ್ನಿಸುತ್ತಿದ್ದರು. ಕರ್ನಾಟಕದ ಶಿವಮೊಗ್ಗದಿಂದ ಸೋಷಲಿಸ್ಟ್ ಪಕ್ಷದ ಪರವಾಗಿ ಸ್ಪರ್ಧಿಸಿ ಲೋಕಸಭೆಗೆ ಚುನಾಯಿತರಾಗಿದ್ದ ಜೆ.ಎಚ್.ಪಟೇಲ್ ಅವರು ಸಂಸತ್ತಿನಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಲು ಹೊರಟಾಗ ಮಧ್ಯಪ್ರವೇಶ ಮಾಡಿದ ಡಾ.ಲೋಹಿಯಾ ‘ನಿಮ್ಮ ನಾಡಿನ ಭಾಷೆ ಕನ್ನಡದಲ್ಲಿ ಮಾತಾಡಿ ಪಟೇಲರೆ’ ಎಂದು ಸೂಚಿಸಿದ್ದರು. ಆದರೆ ಅದೇ ಲೋಹಿಯಾ ಶಿಷ್ಯ ನಿತೀಶ್ ಕುಮಾರ್ ಅವರಿಗೆ ಇದು ತಿಳಿದಿಲ್ಲವೆಂದು ಕಾಣುತ್ತದೆ.

ರಾಜಕೀಯವಾಗಿಯೂ ಉತ್ತರ ಭಾರತವೇ ಬಹುತ್ವದ ಭಾರತವನ್ನು ನಿಯಂತ್ರಿಸುತ್ತ ಬಂದಿದೆ. ಈ ಯಜಮಾನಿಕೆಯ ವಿರುದ್ಧ ತಮಿಳುನಾಡಿನಲ್ಲಿ ದ್ರಾವಿಡ ಚಳವಳಿ ತಲೆ ಎತ್ತಿತು. ಪ್ರತ್ಯೇಕತೆಯ ಧ್ವನಿಗಳು ಕೇಳಿ ಬರತೊಡಗಿದವು. ಭಾಷಾವಾರು ಪ್ರಾಂತಗಳನ್ನು ವಿರೋಧಿಸುತ್ತ ಬಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಖಂಡ ಹಿಂದೂ ರಾಷ್ಟ್ರ ಸ್ಥಾಪನೆಯ ಗುರಿ ಹೊಂದಿದೆ. ಈಗ ಕೇಂದ್ರದ ಅಧಿಕಾರ ಸೂತ್ರ ಹಿಡಿದಿರುವ ಬಿಜೆಪಿ ಸಂಘಪರಿವಾರದ ರಾಜಕೀಯ ವೇದಿಕೆ ಸಹಜವಾಗಿ ಅದು ತನ್ನ ಪರಿಕಲ್ಪನೆಯ ರಾಷ್ಟ್ರ ನಿರ್ಮಾಣದ ಭಾಗವಾಗಿ ಸಂವಿಧಾನದಲ್ಲಿ ಇರುವ ಒಕ್ಕೂಟ ಪರಿಕಲ್ಪನೆಯನ್ನು ನಿಧಾನವಾಗಿ ಅಪ್ರಸ್ತುತಗೊಳಿಸಲು ಅತ್ಯಂತ ವ್ಯವಸ್ಥಿತವಾದ ಕಾರ್ಯತಂತ್ರ ರೂಪಿಸಿದೆ. ಒಂದೇ ರಾಷ್ಟ್ರ, ಒಂದೇ ಭಾಷೆ, ಒಂದೇ ಧರ್ಮ, ಒಂದೇ ರೇಷನ್ ಕಾರ್ಡ್ ಹೀಗೆ ಒಂದೇ ಎನ್ನುವುದೆಲ್ಲ ರಾಜ್ಯಗಳ ಅಸ್ತಿತ್ವವನ್ನು ಬುಡಮೇಲು ಮಾಡುವ ಗುರಿ ಹೊಂದಿದೆ ಎಂದರೆ ತಪ್ಪಿಲ್ಲ.

ಕಾರ್ಯತಂತ್ರದ ಭಾಗವಾಗಿ ಕೇಂದ್ರ ಸರಕಾರದ ಏಜೆಂಟರಂತಿರುವ ರಾಜ್ಯಪಾಲರ ಮೂಲಕ ರಾಜ್ಯಗಳ ಚುನಾಯಿತ ಸರಕಾರಗಳಿಗೆ ಕಿರುಕುಳ ಕೊಡುವುದು, ಶಾಸಕರನ್ನು ಖರೀದಿ ಮಾಡಿ ಬಿಜೆಪಿಯೇತರ ರಾಜ್ಯ ಸರಕಾರಗಳನ್ನು ಉರುಳಿಸುವುದು, ಭಾಷಾ ಸ್ವಾಯತ್ತತೆ ಮತ್ತು ಆಡಳಿತಾತ್ಮಕ ಸ್ವಾಯತ್ತತೆಗೆ ಧಕ್ಕೆ ತರುವುದು, ಸಂಪನ್ಮೂಲಗಳನ್ನು ಹಂಚಿಕೆ ಮಾಡುವಾಗ ಪಕ್ಷಪಾತ ಮಾಡುವುದು, ರಾಜ್ಯಗಳ ಅಭಿಪ್ರಾಯವನ್ನು ಕಡೆಗಣಿಸುವುದು ಇವೆಲ್ಲ ಸೇರಿವೆ. ಸಂಪನ್ಮೂಲಗಳ ಹಂಚಿಕೆಯನ್ನು ಉದಾಹರಣೆಯನ್ನಾಗಿ ತೆಗೆದುಕೊಂಡರೆ 2023-24ನೇ ಸಾಲಿನ ಮೋದಿ ಸರಕಾರದ ಮುಂಗಡ ಪತ್ರದಲ್ಲಿ ಉತ್ತರ ಭಾರತದ ಮೂರು ರಾಜ್ಯಗಳಿಗೆ ಕೇಂದ್ರದಿಂದ 2,31,207 ರೂ. ಕೋಟಿಯಷ್ಟು ನೇರ ತೆರಿಗೆಯ ಪಾಲನ್ನು ನೀಡಲಾಗಿದೆ. ದಕ್ಷಿಣ ಭಾರತದ ಮೂರು ರಾಜ್ಯಗಳಿಗೆ ಕೇವಲ 62,245 ಕೋಟಿ ರೂ. ಮಾತ್ರ ನೀಡಲಾಗಿದೆ. ಆದರೆ ಕೇಂದ್ರದ ಖಜಾನೆಗೆ ಉತ್ತರ ಭಾರತದ ರಾಜ್ಯಗಳಿಗಿಂತ ದಕ್ಷಿಣದ ರಾಜ್ಯಗಳು ಹೆಚ್ಚು ತೆರಿಗೆಯನ್ನು ಪಾವತಿ ಮಾಡುತ್ತವೆ. ಉದಾಹರಣೆಗೆ 2021-22ನೇ ಸಾಲಿನಲ್ಲಿ ದಕ್ಷಿಣದ ಮೂರು ರಾಜ್ಯಗಳು ಶೇಕಡಾ 20ರಷ್ಟು ನೇರ ತೆರಿಗೆಯನ್ನು ಪಾವತಿಸಿದರೆ, ಉತ್ತರದ ಮೂರು ರಾಜ್ಯಗಳು ಕೇವಲ ಶೇ.4ರಷ್ಟು ತೆರಿಗೆಯನ್ನು ಪಾವತಿಸಿವೆ. 2021-22 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯವೊಂದೇ 2.72 ಕೋಟಿ ರೂ. ತೆರಿಗೆಯನ್ನು ಕೇಂದ್ರಕ್ಕೆ ತುಂಬಿದೆ.

ಆದರೆ ಕರ್ನಾಟಕ ಕೇಂದ್ರದಿಂದ ಪಡೆದ ತೆರಿಗೆಯ ಪಾಲು ಕೇವಲ 50,257 ಕೋಟಿ ರೂ. ಇದೇ ಕಾಲಾವಧಿಯಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶ ಕೇವಲ 34,720 ಕೋಟಿ ರೂ. ತೆರಿಗೆಯನ್ನು ಪಾವತಿಸಿ ಕೇಂದ್ರದಿಂದ 1,15,705 ಕೋಟಿ ರೂ. ಪಡೆದಿದೆ. ಅಂದರೆ ಕೇಂದ್ರ ಸರಕಾರಕ್ಕೆ ಹೋಗುವ ಪ್ರತಿ 1 ರೂ. ತೆರಿಗೆಗೆ ಉತ್ತರ ಪ್ರದೇಶ ವಾಪಸ್ 1.78 ರೂ. ಪಡೆಯುತ್ತದೆ. ಆದರೆ ಕರ್ನಾಟಕ ಪಡೆಯುವುದು ಕೇವಲ 47 ಪೈಸೆ. ಇದು ಪಕ್ಷಪಾತದ ಪರಮಾವಧಿ. ಒಕ್ಕೂಟ ವ್ಯವಸ್ಥೆಗೆ ಅಪಚಾರ.

ಇದು ಒಂದು ಉದಾಹರಣೆ ಮಾತ್ರ. ನಮ್ಮ ಸಂವಿಧಾನ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡರೂ ಕೇಂದ್ರಕ್ಕೆ ಮೂರನೇ ಎರಡರಷ್ಟು ತೆರಿಗೆಯನ್ನು ರಾಜ್ಯಗಳಿಂದ ವಸೂಲಿ ಮಾಡುವ ಅಧಿಕಾರವನ್ನು ಸಂವಿಧಾನ ನೀಡಿದೆ. ಈ ಕೆಲವು ಗೊಂದಲಗಳಿಂದ ಒಂದು ದೇಶ, ಒಂದು ಭಾಷೆ, ಒಂದು ಮಾರುಕಟ್ಟೆ, ಒಂದು ತೆರಿಗೆಯನ್ನು ಪ್ರತಿಪಾದಿಸುವ ಪಕ್ಷ ಸಹಜವಾಗಿ ತನ್ನ ಇಷ್ಟದಂತೆ ಭಾರತವನ್ನು ನಡೆಸುತ್ತದೆ. ಇದಕ್ಕೆ ಸಂಸತ್ತಿನಲ್ಲಿ ಉತ್ತರದ ರಾಜ್ಯಗಳ ಪ್ರಾಬಲ್ಯವೂ ಕಾರಣ. ದಕ್ಷಿಣದ ರಾಜ್ಯಗಳಿಗಿಂತ ಹೆಚ್ಚು ಲೋಕಸಭಾ ಸ್ಥಾನಗಳನ್ನು ಉತ್ತರದ ರಾಜ್ಯಗಳು ಹೊಂದಿವೆ.

ಸಂಸತ್ತಿನಲ್ಲಿರುವ ಬಹುಮತ ಬಳಸಿಕೊಂಡು ಪ್ರತಿಪಕ್ಷ ಸದಸ್ಯರನ್ನು ಹೊರಗೆ ಹಾಕಿ ಈಗಾಗಲೇ ಅತ್ಯಂತ ಮಹತ್ವದ ವಿಧೇಯಕಗಳಿಗೆ ಅಂಗೀಕಾರ ಪಡೆಯಲಾಗಿದೆ. ಪ್ರತಿಪಕ್ಷಗಳನ್ನು ಮಾತ್ರವಲ್ಲ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಮುಖ್ಯ ಚುನಾವಣಾ ಆಯುಕ್ತರ ನೇಮಕ ಕುರಿತ ವಿಧೇಯಕವನ್ನೂ ಪಾಸು ಮಾಡಿಕೊಳ್ಳಲಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಆಯುಕ್ತರ ಆಯ್ಕೆ ಪ್ರಕ್ರಿಯೆಯಿಂದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡುವ ವಿಧೇಯಕವನ್ನು ಪ್ರತಿಪಕ್ಷ ಸದಸ್ಯರನ್ನು ಅಮಾನತು ಮಾಡಿ ಅವರ ಅನುಪಸ್ಥಿತಿಯಲ್ಲಿ ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗಿದೆ. ಈಗ ರಾಷ್ಟ್ರಪತಿಗಳ ಅಂಕಿತ ಹಾಕುವುದೊಂದೇ ಬಾಕಿ ಉಳಿದಿದೆ. ಈ ವಿಧೇಯಕ ಕಾನೂನಾಗಿ ಜಾರಿಯಾದರೆ ಚುನಾವಣಾ ಆಯೋಗದ ಆಯುಕ್ತರ ನೇಮಕ ಸಂಪೂರ್ಣ ವಾಗಿ ಕೇಂದ್ರ ಸರಕಾರದ ನಿಯಂತ್ರಣಕ್ಕೆ ಬರಲಿದೆ. ವಾಸ್ತವವಾಗಿ ಪ್ರಧಾನಮಂತ್ರಿ, ಸಂಸತ್ತಿನ ಪ್ರತಿಪಕ್ಷ ನಾಯಕ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರನ್ನು ಒಳಗೊಂಡ ಸಮಿತಿಯ ಶಿಫಾರಸಿನ ಮೇರೆಗೆ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಆಯುಕ್ತರ ನೇಮಕಾತಿ ನಡೆಯಬೇಕೆಂದು ಸುಪ್ರೀಂಕೋರ್ಟ್ ಮಾರ್ಚ್ 2ರಂದು ನೀಡಿದ ತೀರ್ಪಿಗೆ ವಿರುದ್ಧವಾಗಿ ಹೊಸ ಕಾನೂನನ್ನು ಸರಕಾರ ತಂದಿದೆ. ಇದನ್ನು ಉಲ್ಲೇಖಿಸಲು ಕಾರಣವಿಷ್ಟೇ ಸಂಸತ್ತನ್ನು ಉಪಯೋಗಿಸಿಕೊಂಡೇ ಸಂಸದೀಯ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕುವ ಮಸಲತ್ತು. ಈ ದಿನಗಳಲ್ಲಿ ಒಕ್ಕೂಟ ವ್ಯವಸ್ಥೆ ಹೇಗೆ ಸುರಕ್ಷಿತವಾಗಿ ಇರಲು ಸಾಧ್ಯ.ಜನತೆ ಪ್ರಜ್ಞಾವಂತರಾಗಿ ಸಂಕಲ್ಪ ಮಾಡಿದರೆ ಮಾತ್ರ ತಮ್ಮ ರಕ್ಷಾ ಕವಚವಾದ ಸಂಸದೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನಗಳನ್ನು ಉಳಿಸಿಕೊಳ್ಳಲು ಸಾಧ್ಯ.ಇಲ್ಲದಿದ್ದರೆ ಕಳೆದ ಶತಮಾನದ ನಲವತ್ತರ ದಶಕದ ಹಿಟ್ಲರ್ ಕಾಲದ ಜರ್ಮನಿಯ ದಿನಗಳು ಮರುಕಳಿಸಿದರೆ ಅಚ್ಚರಿ ಪಡಬೇಕಾಗಿಲ್ಲ.

ಸಂಸತ್ತಿನ ಉಭಯ ಸದನಗಳಲ್ಲಿ ಉತ್ತರದ ರಾಜ್ಯಗಳ ಪ್ರಾಬಲ್ಯ ಇನ್ನಷ್ಟು ಹೆಚ್ಚಾಗುವ ಸಂಭವವಿದೆ. ಜನಗಣತಿಯ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡನೆಯಾದರೆ ಕರ್ನಾಟಕ ಈಗಿರುವ 28 ಬದಲಾಗಿ 41, ತಮಿಳುನಾಡು ಈಗಿರುವ 39ರ ಬದಲಾಗಿ 49, ಕೇರಳ 20, ಆಂಧ್ರಪ್ರದೇಶ ಮತ್ತು ತೆಲಂಗಾಣ 54 ಅಂದರೆ ಒಟ್ಟು 164 ಲೋಕಸಭಾ ಸ್ಥಾನಗಳು ದಕ್ಷಿಣ ಭಾರತಕ್ಕೆ ದೊರೆಯಲಿವೆ. ಉತ್ತರ ಭಾರತಕ್ಕೆ ಒಟ್ಟು 600 ಸ್ಥಾನಗಳು ಸಿಗಲಿವೆ. ಹೀಗಾಗಿ ದಕ್ಷಿಣ ಭಾರತದ ಭಾಷೆಗಳು ಕ್ಷೀಣಿಸಿದರೆ ಅಚ್ಚರಿ ಪಡಬೇಕಿಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರದಿಂದ ಬರಬಹುದಾದ ಪಾಲು ಕಡಿಮೆಯಾಗಬಹುದು. ಇದರ ಒಟ್ಟು ಪರಿಣಾಮ ನಾವು ಉಸಿರಾಡುತ್ತಿರುವ ಫೆಡರಲ್ ವ್ಯವಸ್ಥೆ ಅಂದರೆ ಒಕ್ಕೂಟ ವ್ಯವಸ್ಥೆ ಕ್ರಮೇಣ ನಶಿಸಿ ಹೋದರೆ ಅಚ್ಚರಿ ಪಡಬೇಕಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸನತ್ ಕುಮಾರ್ ಬೆಳಗಲಿ

contributor

Similar News