×
Ad

ಲಿಂಗಸುಗೂರು: ಭಿನ್ನ ಜಾತಿಯ ಯುವಕನೊಂದಿಗೆ ಪ್ರೇಮ; ತಂದೆಯಿಂದಲೇ ಮಗಳ ಮರ್ಯಾದಾ ಹತ್ಯೆ

Update: 2025-04-28 10:00 IST

ಆರೋಪಿ ಲಕ್ಕಪ್ಪ ಕಂಬಳಿ

ಲಿಂಗಸುಗೂರು : ಭಿನ್ನ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ಕಾರಣಕ್ಕೆ ತಂದೆಯೊಬ್ಬ ಮಗಳನ್ನೇ ಕೊಂದು ಶವವನ್ನು ಕೃಷ್ಣಾ ನದಿಗೆ ಎಸೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಲಿಂಗಸುಗೂರು ತಾಲೂಕಿನ ಹಂಚಿನಾಳ ಗ್ರಾಮದ ರೇಣುಕಾ (17) ಕೊಲೆಯಾದ ಅಪ್ರಾಪ್ತೆ. ಲಕ್ಕಪ್ಪ ಕಂಬಳಿ ಕೊಲೆ ಮಾಡಿದ ತಂದೆ.

ಹಂಚಿನಾಳ ಗ್ರಾಮದ ಕುರುಬ ಜಾತಿಗೆ ಸೇರಿದ ಲಕ್ಕಪ್ಪ ತನ್ನ ಮಗಳು ರೇಣುಕಾ, ವಾಲ್ಮೀಕಿ ನಾಯಕ ಜನಾಂಗದ ಹನುಮಂತ ಎನ್ನುವ ಯುವಕನನ್ನು ಪ್ರೀತಿಸಿದ್ದಳು ಎನ್ನಲಾಗಿದೆ. ಅನೇಕ ಬಾರಿ ಬುದ್ದಿ ಹೇಳಿದರೂ ಕೇಳಲಿಲ್ಲ ಎಂದು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದ ಪೊಲೀಸರು ಪಿಐ ಪುಂಡಲೀಕ ಪಟಾತಾರ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದಾರೆ.

ಘಟನೆ ವಿವರ

ಲಿಂಗಸುಗೂರು ತಾಲೂಕಿನ ಹಂಚಿನಾಳ ಗ್ರಾಮದ ರೇಣುಕಾ ವಾಲ್ಮೀಕಿ ನಾಯಕ ಜನಾಂಗದ ಹನುಮಂತನನ್ನು ಪ್ರೀತಿಸುತ್ತಿದ್ದು, ಇದು ತಂದೆ ಲಕ್ಕಪ್ಪ ಕಂಬಳಿಗೆ ಸಹಿಸದಾಯಿತು. ಮಗಳಿಗೆ ಬುದ್ಧಿಮಾತು ಹೇಳಿದರೂ ಕೇಳಲಿಲ್ಲ. ಪ್ರೀತಿಗಾಗಿ ಮನೆಬಿಟ್ಟು ಹೋಗಿದ್ದ ಮಗಳು ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರನ್ನೂ ಸಲ್ಲಿಸಿದ್ದ. ಕೆಲ ದಿನಗಳ ಬಳಿಕ ಮಗಳನ್ನು ಹುಡುಕಿ ಪೊಲೀಸರು ಒಪ್ಪಿಸಿದ್ದರು. ಬಳಿಕ ಬುದ್ದಿ ಮಾತು ಹೇಳಿದ ತಂದೆ ಲಕ್ಕಪ್ಪ, ನಮ್ಮ ಮರ್ಯಾದೆ ಕಳೀಬೇಡ ಅವ ನಮ್ಮ ಜಾತಿಯವನಲ್ಲ. ಅವನೊಂದಿಗೆ ಮಾತನಾಡುವುದನ್ನು ಬಿಡು ನಿನಗೆ ಬೇರೆ ಮದುವೆ ಮಾಡಿಕೊಡುವೆ ಎಂದು ಮಗಳಿಗೆ ತಾಕೀತು ಮಾಡಿದ್ದರು.  ಆಕೆ ಮಾತ್ರ ಪ್ರೀತಿಯ ಗುಂಗಿನಿಂದ ಹೊರ ಬಂದಿರಲಿಲ್ಲ

18 ವರ್ಷ ತುಂಬಿದ‌ ಮರು ದಿನವೇ ಹನುಂತನ ಜೊತೆ ಹೋಗುವುದಾಗಿ ಮನೆಯವರಿಗೆ ರೇಣುಕಾ ಹೇಳುತ್ತಿದ್ದಳು. ಕಂಡ ಕಂಡಲ್ಲಿ ಹನುಂಮತನ ಜೊತೆ ಸಲುಗೆಯಿಂದಿದ್ದ ರೇಣುಕಾಳ ವರ್ತನೆ ತಂದೆಯನ್ನು ಕೆರಳಿಸಿದ್ದೇ ಘಟನೆಗೆ ಕಾರಣವೆಂದು ಹೇಳಲಾಗುತ್ತಿದೆ.

ಈ ಬಗ್ಗೆ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News