×
Ad

ರಾಯಚೂರು| ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯರನ್ನು ಮುಂದುವರಿಸುವಂತೆ ಕುರುಬ ಸಮಾಜ ಒತ್ತಾಯ

Update: 2025-11-29 18:52 IST

ರಾಯಚೂರು: ಹಿಂದುಳಿದ ವರ್ಗಗಳ ನಾಯಕ ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನಗಳು ಖಂಡನೀಯವಾಗಿದೆ. ಪಾರದರ್ಶಕ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದರೆ ಜಿಲ್ಲೆಯಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಕೆ.ಬಸವಂತಪ್ಪ ಹೇಳಿದರು.

ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಕೆ.ಬಸವಂತಪ್ಪ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯನವರೇ ಕಾರಣವಾಗಿದ್ದಾರೆ. ಯಾವುದೇ ಆರೋಪಗಳಿಲ್ಲದೆ ಇದ್ದರೂ ಮುಖ್ಯಮಂತ್ರಿ ಬದಲಾವಣೆಗೆ ಒತ್ತಾಯಗಳು, ಚಟುವಟಿಕೆಗಳು ಪ್ರಾರಂಭವಾಗಿವೆ. ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರನ್ನು ಕೆಳಗಿಳಿಸಿದರೆ ಬಿಹಾರದಲ್ಲಿ ಕಾಂಗ್ರೆಸ್‌ಗೆ ಆಗಿರುವ ಸ್ಥಿತಿಯೇ ರಾಜ್ಯದಲ್ಲಿ ಎದುರಿಸಬೇಕಾಗುತ್ತದೆ. ಒಂದು ಸಮುದಾಯದವರ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಪಕ್ಷ ಬದಲಾವಣೆಗೆ ಮುಂದಾದರೆ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ. ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರನ್ನೇ ಐದು ವರ್ಷ ಆಡಳಿತದಲ್ಲಿ ಮುಂದುವರಸಬೇಕೆಂದು ಆಗ್ರಹಿಸಿದರು.

ಜಿಲ್ಲಾ ಕಾರ್ಯದರ್ಶಿ ಬಿ.ಬಸವರಾಜ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಾರದರ್ಶಕ ಆಡಳಿತದ ಮೂಲಕ ರಾಜ್ಯದ ಜನತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಜನಪರವಾದ ಆಡಳಿತ ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಐದು ವರ್ಷ ಆಡಳಿತ ಮಾಡಲು ಅವಕಾಶ ನೀಡಬೇಕು ಎಂದರು.  

ಈ ಸಂದರ್ಭದಲ್ಲಿ ರಾಜ್ಯ ನಿರ್ದೇಶಕ ಭೀಮಪ್ಪ ಕಡದರದಿನ್ನಿ, ಹನುಮಂತಪ್ಪ ಜಾಲಿಬೆಂಚಿ ,ನಾಗೇಂದ್ರಪ್ಪ ಮಟಮಾರಿ, ಶೇಖರ ವಾರದ, ನಾಗರಾಜಮಡ್ಡಿಪೇಟೆ, ಹನುಮಂತಪ್ಪ ವಕೀಲ, ರಾಮನಗೌಡ ವಕೀಲ ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News