ರಾಯಚೂರು: ಶ್ರೀರಂಗಪಟ್ಟಣ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ ಖಂಡಿಸಿ SDPI ವತಿಯಿಂದ ಪ್ರತಿಭಟನೆ
ರಾಯಚೂರು: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡರವರು, ಮುಸ್ಲಿಮರಿಗೆ ಭೂಮಿ ಹಕ್ಕು ನೀಡಿದರೆ, ಅಂತಹ ಅಧಿಕಾರಿಯನ್ನು ನೇಣಿಗೇರಿಸುತ್ತೇನೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಎಸ್ ಡಿಪಿಐ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಶಾಸಕರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಘೋಷಣೆ ಕೂಗಿ ಒತ್ತಾಯಿಸಿದರು.
ಸರಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಮುಸ್ಲಿಮರು ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿ ತಮ್ಮ ಹೆಸರಿಗೆ ಜಮೀನು ನೋಂದಣಿ ಮಾಡುವಂತೆ ಕೋರಿದ್ದರು ಇದನ್ನು ಸರಕಾರಿ ಭೂಮಿಯನ್ನು ಸಾಬರ(ಮುಸ್ಲಿಮರ) ಹೆಸರಿಗೆ ಮಾಡಿದ್ರೆ, ಅಂತಹ ಅಧಿಕಾರಿಯನ್ನು ನೇಣಿಗೆ ಹಾಕುವುದು ಗ್ಯಾರೆಂಟಿ ಎಂದು ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಮುಸ್ಲಿಮರು ಮತ ಹಾಕುತ್ತಾ ಪಕ್ಷಕ್ಕಾಗಿ ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಆರೆಸ್ಸೆಸ್ ಮನಸ್ಥಿತಿಯ, ಶಾಸಕನ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು ಮತ್ತು ಕಾಂಗ್ರೆಸ್ ಪಕ್ಷದಿಂದ ಇವರನ್ನು ಉಚ್ಛಾಟಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ SDPI SWC ಸದಸ್ಯ ಅಕ್ಬರ್ ಹುಸೇನ್ ನಾಗುಂಡಿ, ಜಿಲ್ಲಾ ಉಪಾಧ್ಯಕ್ಷ ಮತೀನ್ ಅನ್ಸಾರಿ, ತೌಸೀಫ್ ಅಹ್ಮದ್, ಜಿಲ್ಲಾ ನಾಯಕರಾದ ಸೈಯದ್ ಇರ್ಫಾನ್, ಹಫೀಜ್ ಮೆಹಮೂದ್, ಅತೀಕ್ ಅಹ್ಮದ್, ಮುಷ್ತಾಕ್ ಅಹ್ಮದ್, ನಗರ ಅಧ್ಯಕ್ಷ ಮಿರ್ಜಾ ಹಸನ್ ಬೈಗ್ ಮತ್ತು ಅನೇಕರು ಉಪಸ್ಥಿತರಿದ್ದರು.