ಸಾಗರ ಜಿಲ್ಲೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಚಾಲನೆ
ಸಾಗರ : ಸಾಗರವನ್ನು ಜಿಲ್ಲೆಯಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಸಾಗರ ಜಿಲ್ಲಾ ಹೋರಾಟ ಸಮಿತಿ ಆಶ್ರಯದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಟಾಕಪ್ಪ ಕಣ್ಣೂರು ಅವರಿಗೆ ಸನ್ಮಾನಿಸುವ ಮೂಲಕ ಗುರುವಾರ ಚಾಲನೆ ನೀಡಿದರು.
ಧರಣಿ ಉದ್ದೇಶಿಸಿ ಮಾತನಾಡಿದ ಜಾನಪದ ಕಲಾವಿದ ಬಿ.ಟಾಕಪ್ಪ, ಮಲೆನಾಡು ಜಿಲ್ಲೆಗಳಲ್ಲಿ ಸಾಗರ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದ ಉಪಕೇಂದ್ರವಾಗಿದೆ. ಸಾಗರ ಜಿಲ್ಲೆ ಮಾಡಿ ಎಂದು ಕೇಳುವುದು ನಮ್ಮ ಹಕ್ಕು, ಸಾಗರ ಉಪವಿಭಾಗೀಯ ಕೇಂದ್ರಕ್ಕೆ ತನ್ನದೇ ಆದ ಇತಿಹಾಸವಿದ್ದು, ಕಲೆ, ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯವಾಗಿ ಶ್ರೇಷ್ಠತೆಯನ್ನು ಹೊಂದಿದೆ ಎಂದರು.
ಹೋರಾಟ ಸಮಿತಿಯ ತೀ.ನ.ಶ್ರೀನಿವಾಸ್ ಮಾತನಾಡಿ, ಹತ್ತು ವರ್ಷಗಳ ಹಿಂದೆ ನಾ.ಡಿಸೋಜ ನೇತೃತ್ವದಲ್ಲಿ ಮೊದಲ ಬಾರಿಗೆ ಸಾಗರ ಜಿಲ್ಲೆ ಮಾಡಿ ಎನ್ನುವ ಹೋರಾಟ ನಡೆದಿತ್ತು. ಇದೀಗ ಕೇಂದ್ರ ಹೊಸ ಜಿಲ್ಲೆ ಮಾಡಲು ರಾಜ್ಯಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಪ್ರತಿಭಟನೆ ಮಾಡಿ ಸಾಗರ ಜಿಲ್ಲೆ ಮಾಡಿ ಎಂದು ಮನವಿ ನೀಡಿದ್ದೇವೆ. ಶಾಸಕರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಜಿಲ್ಲೆ ಮಾಡಲು ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆ ಸೂಕ್ತ ಎಂದು ತಿಳಿಸಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವ ಭರವಸೆ ನೀಡಿದ್ದರು ಎಂದರು .
ಧರಣಿ ಉದ್ದೇಶಿಸಿ ಹೋರಾಟ ಸಮಿತಿಯ ಎಸ್.ವಿ.ಹಿತಕರ ಜೈನ್ ಮಾತನಾಡಿದರು.ರು̤
ಈ ಸಂದರ್ಭದಲ್ಲಿ ಮುಹಮ್ಮದ್ ಖಾಸಿಂ, ಟಿ.ಡಿ.ಮೇಘರಾಜ್, ದಿನೇಶ್ ಶಿರವಾಳ, ಎಂ.ಬಿ.ಮಂಜಪ್ಪ, ಮಂಜುನಾಥ್ ಆಚಾರ್, ಸುಂದರ ಸಿಂಗ್, ಕನ್ನಪ್ಪ ಬೆಳಲಮಕ್ಕಿ, ನಾಗರಾಜ ಗುಡ್ಡೆಮನೆ, ಯು.ಪಿ.ಜೋಸೆಫ್, ಅಕ್ಬರ್ ಖಾನ್, ದೇವೇಂದ್ರಪ್ಪ, ಪ್ರಕಾಶ್ ಲ್ಯಾವಿಗೆರೆ, ರೇವಪ್ಪ ಹೊಸಕೊಪ್ಪ, ಕುಂಟಗೋಡು ಸೀತಾರಾಮ್ ಸೇರಿದಂತೆ ಇತರರು ಹಾಜರಿದ್ದರು.
ಹೋರಾಟದ ನೆಲೆಯಾಗಿರುವ ಸಾಗರವನ್ನು ಜಿಲ್ಲೆ ಮಾಡಿ ಎಂದು ಕೇಳುವುದು ಸೂಕ್ತವಾಗಿದೆ. ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ವಾಣಿಜ್ಯ ವಿಭಾಗದಲ್ಲಿಯೂ ಸೂಕ್ತ ಸ್ಥಳವಾಗಿರುವ ಸಾಗರ ಜಿಲ್ಲೆ ಮಾಡಿದರೆ ರಾಜ್ಯ ಹಾಗೂ ಕೇಂದ್ರಕ್ಕೆ ಕೀರ್ತಿ ತರುತ್ತದೆ.
-ಬಿ.ಟಾಕಪ್ಪ ಕಣ್ಣೂರು,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ಮಲೆನಾಡು ಪ್ರದೇಶ ಭೌಗೋಳಿಕವಾಗಿ ವಿಸ್ತೀರ್ಣವಾಗಿದ್ದು, ಸುಮಾರು 130 ಕಿ.ಮೀ. ವ್ಯಾಪ್ತಿಯನ್ನು ಸಾಗರ ತಾಲೂಕು ಹೊಂದಿದೆ. ಕೊಡುಗು ಐದು ತಾಲೂಕು ಸೇರಿ ಒಂದು ಜಿಲ್ಲೆಯಾದರೆ, ರಾಮನಗರ ನಾಲ್ಕು ತಾಲೂಕು ಸೇರಿ ಒಂದು ಜಿಲ್ಲೆ ಮಾಡಲಾಗಿದೆ. ಭೌಗೋಳಿಕ ವಿಸ್ತೀರ್ಣವನ್ನು ಮನಗಂಡು ಸಾಗರವನ್ನು ಜಿಲ್ಲೆಯಾಗಿ ಘೋಷಣೆ ಮಾಡಲಿ.
-ಬಿ.ಆರ್. ಜಯಂತ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ