×
Ad

ನಿತ್ಯವೂ ಗಾಂಧಿ ತತ್ವ, ಸಿದ್ಧಾಂತದ ಹತ್ಯೆ: ವಿಲ್ಪ್ರೆಡ್ ಡಿಸೋಜ

ಗಾಂಧೀಜಿಯವರ ಗ್ರಾಮೀಣ ಭಾರತ ವಿಚಾರಗೋಷ್ಠಿ

Update: 2026-01-29 22:12 IST

ಉಡುಪಿ, ಜ.29: ಪಂಚಾಯತ್‌ರಾಜ್ ಕಾನೂನುಗಳೆಲ್ಲವೂ ಪುಸ್ತಕಗಳಿಗೆ ಸೀಮಿತವಾಗಿದ್ದು, ಗಾಂಧೀಜಿ ಅವರ ತತ್ವ, ಸಿದ್ಧಾಂತಗಳೆಲ್ಲವನ್ನು ನಿತ್ಯವೂ ಕೊಲ್ಲಲಾಗುತ್ತಿದೆ ಎಂದು ಪ್ರಗತಿಪರ ಚಿಂತಕ ವಿಲ್ಛೆಡ್ ಡಿಸೋಜ ಉಪ್ಪಿನಂಗಡಿ ಹೇಳಿದ್ದಾರೆ.

ಉಡುಪಿಯ ರಥಬೀದಿ ಗೆಳೆಯರು ಸಂಘಟನೆ, ಸಹಬಾಳ್ವೆ ಉಡುಪಿ, ಸೌಹಾರ್ದ ಕರ್ನಾಟಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಇವುಗಳ ಸಹಯೋಗದಲ್ಲಿ ಅಜ್ಜರಕಾಡು ವಿಮಾ ನೌಕರರ ಸಭಾಭವನದಲ್ಲಿ ಗುರುವಾರ ಆಯೋಜಿಸಿದ ‘ಗಾಂಧೀಜಿಯವರ ಗ್ರಾಮೀಣ ಭಾರತ: ಪ್ರಸ್ತುತ ಸವಾಲುಗಳು’ ವಿಷಯದ ಮೇಲಿನ ವಿಚಾರಗೋಷ್ಠಿ ಹಾಗೂ ಸಂವಾದದಲ್ಲಿ ಅವರು ಮಾತನಾಡುತಿದ್ದರು.

ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಯಾವ ಸರಕಾರವೂ ಜೀವ ತುಂಬುವ ಕೆಲಸ ಮಾಡಿಲ್ಲ. ಹೊಸ ಘೋಷಣೆಗಳ ಬದಲು ಇರುವುದನ್ನು ಚೆನ್ನಾಗಿ ನಿರ್ವಹಣೆ ಮಾಡಬೇಕು. ಶಿಕ್ಷಣ, ಆರೋಗ್ಯ ಕ್ಷೇತ್ರದ ಕಡೆಗೆ ಸ್ಥಳೀಯವಾಗಿ ಗಮನ ಕೊಡುತ್ತಿಲ್ಲ. ಕೃಷಿ ಆಕರ್ಷಣೆ ಕಳೆದುಕೊಂಡಿದೆ, ಯುವಜನತೆ ನಗರ ಸೇರುವುದು ಅನಿವಾರ್ಯವಾಗಿದೆ ಎಂದವರು ಹೇಳಿದರು.

ಜಿಪಂ, ತಾಪಂ ಚುನಾವಣೆ ನಡೆಸದ ಕಾರಣಕ್ಕೆ ರಾಜ್ಯಕ್ಕೆ ಬರಬೇಕಾದ 15ನೇ ಹಣಕಾಸು ಅನುದಾನದ ವಾರ್ಷಿಕ 4,000 ಕೋಟಿ ರೂ. ಕಳೆದು ಕೊಂಡಿದ್ದೇವೆ. ಎಂ ನರೇಗಾ 100 ದಿನಗಳ ಉದ್ಯೋಗ ನೀಡುವಲ್ಲಿ ರಾಜ್ಯ ಸರಕಾರ ಶೇ.50ರಷ್ಟು ಸಾಧನೆಗೂ ವಿಫಲವಾಗಿದೆ ಎಂದು ವಿಲ್ಛೆಡ್ ನುಡಿದರು.

ಸ್ವಯಂ ಆಡಳಿತ ಸಂಸ್ಥೆಗಳು ಸಬಲೀಕರಣವಾಗಲು ‘ಎಫ್’ಗಳನ್ನು ಅವುಗಳಿಗೆ ನೀಡಬೇಕು. ಗ್ರಾಮ ಸರಕಾರ ಮಾಡಬೇಕಾದ ಕಾರ್ಯಕ್ರಮಗಳನ್ನು ಅವರಿಗೆ ವರ್ಗಾವಣೆ ಮಾಡಬೇಕು. ಅದರೊಂದಿಗೆ ಬೇಕಷ್ಟು ಸಿಬ್ಬಂದಿಗಳನ್ನು ನೀಡಬೇಕು. ಅದರೊಂದಿಗೆ ಅನುದಾನವನ್ನೂ ನೀಡಬೇಕು. ಇವೆಲ್ಲಾ ಆದ ಮೇಲೆ ಸ್ವಾತಂತ್ರ್ಯ ನೀಡದಿದ್ದರೆ ಗಾಂಧೀಜಿ ಕಂಡ ಗ್ರಾಮ ರಾಜ್ಯ, ಸ್ವರಾಜ್ಯದ ಕನಸು ನನಸಾಗದು. ಈಗಂತೂ ಮತದಾನದ ಹೊರತು ಗ್ರಾಮ ಸಭೆಗಳ ಮೂಲಕ ಜನರಿಗಿರುವ ಸ್ಥಳೀಯಾಡಳಿತದ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಅವರು ವಿಷಾಧಿಸಿದರು.

ನಮ್ಮ ಪ್ರಜಾಪ್ರಭುತ್ವದ ದೊಡ್ಡ ವೈಫಲ್ಯವೆಂದರೆ ಪ್ರಜೆಗಳು ದುರ್ಬಲರಾಗಿದ್ದಾರೆ. ಇವರಲ್ಲಿ ಸರಿ-ತಪ್ಪುಗಳ, ವಿವೇಕದ ಕೊರತೆ ಇದೆ. ವಿವೇಚನೆಯ ಕೊರತೆತುಂಬಾ ಇದೆ. ಹೊರಗಿನ ಪ್ರಭಾವಗಳಿಗೆ ಬೇಗ ಬಲಿಯಾಗು ತಿದ್ದಾರೆ. ಅವರಿಗೆ ಅರಿವು ಮೂಡಿಸುವ ಕೆಲಸವನ್ನು ನಾವು ಮಾಡಬೇಕು ಎಂದು ವಿಲ್ಪ್ರೆಡ್ ನುಡಿದರು.

ರಥಬೀದಿ ಗೆಳೆಯರು ಉಡುಪಿ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ಸಹಬಾಳ್ವೆ ಸಂಸ್ಥೆಯ ಇದ್ರಿಸ್ ಹೂಡೆ, ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಸಂತೋಷ್ ನಾಯಕ ಪಟ್ಲ ಸ್ವಾಗತಿಸಿದರೆ, ಸೌಹಾರ್ದ ಕರ್ನಾಟಕ ಜಿಲ್ಲಾ ಸಂಚಾಲಕ ಚಂದ್ರಶೇಥಕ ವಿ. ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News