×
Ad

ಜೂನ್ ಒಳಗಡೆ ಸ್ಥಳೀಯ ಸಂಸ್ಥೆಗಳ ಚುನಾವಣೆ : ಸಿಎಂ ಸಿದ್ದರಾಮಯ್ಯ

ಮಂಜಗುಣಿ - ಗಂಗಾವಳಿ ಸೇತುವೆ ಲೋಕಾರ್ಪಣೆ

Update: 2026-02-22 19:22 IST

ಅಂಕೋಲಾ : ಜೂನ್ ತಿಂಗಳ ಒಳಗಡೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲಾಗುವುದು, ಅದಕ್ಕಾಗಿ ಈಗ ವಿವಿಧ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ವಾರ್ಡ್‌ಗಳನ್ನು ವಿಂಗಡಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಸಿದ್ಧಗೊಂಡ ಮಂಜಗುಣಿ - ಗಂಗಾವಳಿ ಸೇತುವೆ ರವಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

2018ರಲ್ಲಿ ಈ ಸೇತುವೆಗೆ ಭೂಮಿ ಪೂಜೆ ಸಲ್ಲಿಸಲಾಗಿತ್ತು. ನಂತರ ಬಂದ ಸರಕಾರ ಐದು ವರ್ಷ ಸೇತುವೆ ಕಾಮಗಾರಿಯ ಬಗ್ಗೆ ನಿರ್ಲಕ್ಷಿಸಿತು. ಈಗ ಮತ್ತೆ ನಮ್ಮ ಸರಕಾರ ಬಂದ ನಂತರ ಕಾಮಗಾರಿಯನ್ನು ಮುಂದುವರಿಸಿ ಈಗ ಉದ್ಘಾಟಿಸುತಿದ್ದೇವೆ. ಆ ಸಮಯದಲ್ಲಿ 28 ಕೋಟಿ ರೂ. ಇದ್ದ ಅಂದಾಜು ಹೆಚ್ಚು, ಈಗ 35 ಕೋಟಿಗೆ ಏರಿಕೆಯಾಗಿದೆ. ಈ ಸೇತುವೆ ನಿರ್ಮಾಣದಿಂದ 18 ಕಿ.ಮಿ ಜನರಿಗೆ ಕಡಿಮೆಯಾಗಲಿದೆ. ಹೀಗಾಗಿ ಕಾಂಗ್ರೆಸ್ ಸರಕಾರ ಯಾವತ್ತಿಗೂ ಜನಪರವಾಗಿರುತ್ತದೆ. ಕುಮಟಾ ಶಾಸಕ ದಿನಕರ ಶೆಟ್ಟಿ ಹೇಳಿದಂತೆ ಗೋಕರ್ಣ ಗ್ರಾ. ಪಂ.ಅನ್ನು ಈಗ ಪಟ್ಟಣ ಪಂಚಾಯತಿಗೆ ಏರಿಸಲು ಸಾಧ್ಯವಿಲ್ಲ. ಚುನಾವಣೆ ಮುಗಿದ ನಂತರ ಗೋಕರ್ಣ ಗ್ರಾ.ಪಂ ಅನ್ನು ಪಟ್ಟಣ ಪಂಚಾಯತಿಗೆ ಏರಿಸಲಾಗುವುದು ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, 334 ಕಿ.ಮಿ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಕೆಲವು ನಿಯಮಗಳನ್ನು ಜಾರಿಗೊಳಿಸಲಾಗುವುದು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜತೆಗೆ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಲಾಗುವುದು. ಸ್ಥಳೀಯರು ಉದ್ಯೋಗವನ್ನು ಅರಿಸಿ ಹೊರಗಡೆ ಹೋಗುವುದರ ಬದಲು ಇಲ್ಲಿಯೇ ತಮ್ಮ ಉದ್ಯೋಗವನ್ನು ಕಂಡುಕೊಳ್ಳಬೇಕು. ಜತೆಗೆ ಗೋವಾಕ್ಕೆ ಹೊಗುವವರು ಕೂಡ ಇಲ್ಲಿಗೆ ಬರುವಂತಾಗಬೇಕು. ಹಾಗೆ ಶಾಸಕ ಸತೀಶ ಸೈಲ್ ತಮ್ಮ ಕ್ಷೇತ್ರಕ್ಕೆ ಅಗತ್ಯ ಇರುವುದನ್ನು ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ನಮ್ಮದು ನುಡಿದಂತೆ ನಡೆದ ಸರಕಾರವಾಗಿದೆ ಎಂದರು.

ಸತೀಶ ಸೈಲ್ ಮಾತನಾಡಿ, ಬಹು ದಶಕಗಳ ಬೇಡಿಕೆಯಾಗಿದ್ದ ಮಂಜಗುಣಿ - ಗಂಗಾವಳಿ ಸೇತುವೆಯು ನಮ್ಮ ಸರಕಾರದ ಅವದಿಯಲ್ಲಿ ನಿರ್ಮಿಸಲಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಹೆಚ್ಚಿನ ಅನುಕೂಲವಾಗಿದೆ. ಇನ್ನು 18 ಕಿ.ಮಿ. ಉಳಿಯುವುದರಿಂದ ಇಂದನ, ಪರಿಸರ ಮಾಲಿನ್ಯ ತಡೆಗಟ್ಟಲು ಸಾಧ್ಯವಾಗುತ್ತದೆ. ಅಲಗೇರಿಯಲ್ಲಿ ವಿಮಾನ ನಿಲ್ದಾಣಕ್ಕೆ ಬೇಲೆಕೇರಿ ಮತ್ತು ಭಾವಿಕೇರಿ ಗ್ರಾಮದ ಜಾಗವನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಆ ಭೂಮಿಗೆ ಮೂರು ರೀತಿಯಲ್ಲಿ ಪರಿಹಾರ ನಿಗದಿಪಡಿಸಿದ್ದರು. ಹೇಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಮಾತನಾಡಿ ಎಲ್ಲರಿಗೂ ಒಂದೇ ಸಮನಾದ ಪರಿಹಾರವನ್ನು ನೀಡಲು ಚರ್ಚಿಸಿ ಅದನ್ನು ಜಾರಿಗೊಳಿಸಿದ್ದಾರೆ. ಹಾಗೆ ಪರ್ಯಾಯವಾಗಿ ಮನೆ ನಿರ್ಮಿಸಿಕೊಳ್ಳುವವರಿಗೆ ಒಂದೂವರೆಗುಂಟಿ ಮಾತ್ರ ನೀಡಲಾಗಿತ್ತು. ಅದನ್ನು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ಗುಂಟೆಗೆ ಏರಿಸಿದ್ದಾರೆ. ಈ ಹಿಂದಿನ ಸರಕಾರ ಯಾವುದೇ ಕೆಲಸ ಕಾರ್ಯಗಳು ಮಾಡಿಲ್ಲ ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಹಳಿಯಾಳ ಶಾಸಕ ಆರ್. ವಿ. ದೇಶಪಾಂಡೆ, ಶಿರಸಿ- ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ, ಕುಮಟಾ ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ ಸೇರಿದಂತೆ ವಿವಿದ ಇಲಾಖೆಯ ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಬೊಮ್ಮಗೌಡ ನೇತೃತ್ವದಲ್ಲಿ ಸಮಾಜದ ಮುಖಂಡರು ಇದೇ ಸಂದರ್ಭ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 'ಇದು ಕೇಂದ್ರ ಸರಕಾರ ಮಾಡಬೇಕಾದ ಕೆಲಸ. ನಾವು ಕೇವಲ ಶಿಫಾರಸು ಮಾಡುವುದು ಮಾತ್ರ. ಬಿಜೆಪಿಯ ಕೇಂದ್ರ ಸರಕಾರವೇ ತಿರಸ್ಕರಿಸಿದೆ. ನಾವು ಈಗ ಮತ್ತೆ ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ. ನೀವು ಬಿಜೆಪಿ ಶಾಸಕ ದಿನಕರ ಶೆಟ್ಟಿ ಅವರನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ ಎಂದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News