×
Ad

ಹಿರಿಯ ನಾಗರಿಕರ ಜೀವನದ ಅನುಭವ ಯುವಜನತೆಗೆ ಪ್ರೇರಣೆ : ಶಾಸಕ ಹೆಚ್.ಆರ್.ಗವಿಯಪ್ಪ

Update: 2025-10-09 20:28 IST

ವಿಜಯನಗರ (ಹೊಸಪೇಟೆ): ಹಿರಿಯರ ಜೀವನ ಶೈಲಿ, ಶಿಸ್ತುಬದ್ಧ ನಡವಳಿಕೆ, ಆಹಾರ ಪದ್ದತಿ, ಆರೋಗ್ಯ ಕಾಳಜಿ, ಕಾಯಕ ನಿಷ್ಠೆ ಮತ್ತು ವೃತ್ತಿ ಧರ್ಮ ಪಾಲನೆ ಸೇರಿದಂತೆ ಅವರ ಜೀವನದ ಅನುಭವಗಳು ಯುವಜನತೆಯಲ್ಲಿ ಪ್ರೇರಣೆ ಮೂಡಿಸುತ್ತಿವೆ ಎಂದು ಶಾಸಕ ಹೆಚ್.ಆರ್. ಗವಿಯಪ್ಪ ಹೇಳಿದರು.

ನಗರದ ಶ್ರೀಸಾಯಿಲೀಲಾ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಶೇಷಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ತಮ್ಮ ಕುಟುಂಬದ ಹಿರಿಯರನ್ನು ಗೌರವಿಸಬೇಕು. ಅವರೊಂದಿಗೆ ಉತ್ತಮ ಸಂಬಂಧ ಹೊಂದಬೇಕು. ಹಿರಿಯರ ಜೀವನದಲ್ಲಿ ನಡೆದ ಅನೇಕ ಘಟನೆಗಳು ಯುವಜನತೆಗೆ ಭವಿಷ್ಯಕ್ಕೆ ಸ್ಪೂರ್ತಿದಾಯಕವಾಗಿರುತ್ತವೆ. ಈಗಾಗಲೇ ಹೊಸಪೇಟೆ ನಗರದ ಅಭಿವೃದ್ಧಿಗಾಗಿ ಪ್ರತಿ ವಾರ್ಡ್‌ನಲ್ಲಿ ಸಿಸಿ ರಸ್ತೆ, ಒಳಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳಿಗೆ ಸುಮಾರು 70 ಕೋಟಿ ರೂ. ಅನುದಾನಕ್ಕೆ ಕ್ರೀಯಾಯೋಜನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಅನುದಾನ ಬಿಡುಗಡೆ ಆಗಲಿದೆ. ನಗರ ಸೌಂದರ್ಯಕರಣಕ್ಕಾಗಿ ಗುಣಮಟ್ಟದ ಕಾಮಗಾರಿ ಅಗತ್ಯ, ಮತ್ತು ಅದಕ್ಕೆ ಹಿರಿಯ ನಾಗರಿಕರ ಸಲಹೆ ಸಹಕಾರ ಅತ್ಯಗತ್ಯ ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ಹಿರಿಯ ನಾಗರಿಕರಿಗಾಗಿ ವಿಶೇಷ ಕಾಯ್ದೆಗಳಿವೆ. ಅವರ ಆಸ್ತಿಯನ್ನು ಮಕ್ಕಳಿಗೆ ವರ್ಗಾವಣೆ ಮಾಡುವಾಗ ಒತ್ತಾಯ ಮಾಡುವುದು, ಮನೆಯಲ್ಲಿ ಅನಗತ್ಯ ಸಮಸ್ಯೆ ಸೃಷ್ಟಿಸುವುದು, ವೃದ್ಧಾಶ್ರಮಕ್ಕೆ ತೆರಳಲು ಒತ್ತಾಯ ಮಾಡುವಂತಹುದಾದರೆ ಸ್ಥಳೀಯ ಸಹಾಯಕ ಆಯುಕ್ತರಿಗೆ ದೂರು ದಾಖಲಿಸಬಹುದಾಗಿದೆ. ಹಿರಿಯ ನಾಗರಿಕರನ್ನು ಗೌರವಿಸುವುದು, ಸಧೃಡ ಸಮಾಜ ನಿರ್ಮಾಣಕ್ಕೆ ಅವರ ಪಾತ್ರ ಮುಖ್ಯ. ಸರ್ಕಾರ ನೀಡುವ ಸೌಲಭ್ಯಗಳನ್ನು ಸದ್ವ್ಯವಸ್ಥೆಯಿಂದ ಬಳಸಬೇಕು. ಹಿರಿಯ ನಾಗರಿಕರ ಸಂಕಷ್ಟಗಳಿಗೆ ಜಿಲ್ಲಾಡಳಿತ ಸದಾ ಸ್ಪಂದಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಈಶ್ವರಿ ಮಹಾವಿದ್ಯಾಲಯದ ಸಂಚಾಲಕರಾದ ಮಾನಸ ಅವರು ಹಿರಿಯ ನಾಗರಿಕರಿಗೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ, ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರಿಗೆ ಗೌರವ ನೀಡಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಹೂವಿನಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಹೆಚ್ಚುವರಿ ಪೊಲೀಸ್ ಅಧಿಕಾರಿ ಜಿ. ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಸ್. ಶ್ವೇತಾ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಮೌನೇಶ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆಲಂಪಾಷ್, ತಾಲೂಕು ಕಾನೂನು ಸೇವಾ ಸಮಿತಿ ವಕೀಲರಾದ ಶ್ವೇತಾಂಬರಿ ಮತ್ತು ಸುಮಂಗಳಮ್ಮ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಿಂಧು ಅಂಗಡಿ, ಹಿರಿಯ ನಾಗರಿಕರ ಜಿಲ್ಲಾ ಕಲ್ಯಾಣಾಧಿಕಾರಿ ರಾಮಾಂಜನೇಯ ಸೇರಿದಂತೆ ತಾಲೂಕುಗಳ ಎಲ್ಲಾ ಅಂಗನವಾಡಿ ಶಿಕ್ಷಕರು, ಹಿರಿಯ ನಾಗರಿಕರು ಮತ್ತು ವಿಕಲಚೇತನರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News