ಹಸಿರು ಗುಡ್ಡಗಳ ಮಧ್ಯ ಧುಮ್ಮಿಕುವ ಚಿಂತನಹಳ್ಳಿಯ ಜಲಪಾತ
ಗವಿ ಸಿದ್ಧಲಿಂಗೇಶ್ವರ ಜಲಧಾರೆ ತಾಲೂಕಿನ ಪ್ರಮುಖ ಪ್ರವಾಸಿ ಆಕರ್ಷಣೆ. ಆದರೆ ರಸ್ತೆ, ಕುಳಿತುಕೊಳ್ಳುವ ಸ್ಥಳ, ಶೌಚಾಲಯ ಮತ್ತು ಕಸದ ನಿರ್ವಹಣೆಯಂತಹ ಮೂಲಭೂತ ಸೌಕರ್ಯಗಳ ಕೊರತೆ ಇನ್ನೂ ಕಾಡುತ್ತಿದೆ. ಸರಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಿದರೆ, ಈ ತಾಣವು ಕಲ್ಯಾಣ ಕರ್ನಾಟಕದ ನೈಸರ್ಗಿಕ ನಕ್ಷೆಯಲ್ಲಿ ಪ್ರಭಾವಶಾಲಿ ಸ್ಥಾನ ಪಡೆಯಲಿದೆ.
- ಉಮೇಶ್ ಕೆ.ಮುದ್ನಾಳ, ಸಾಮಾಜಿಕ ಹೋರಾಟಗಾರ
ಯಾದಗಿರಿ: ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಗವಿ ಸಿದ್ಧಲಿಂಗೇಶ್ವರ ಜಲಧಾರೆ, ಕಲ್ಯಾಣ ಕರ್ನಾಟಕದ ನೈಸರ್ಗಿಕ ರತ್ನವಾಗಿ ಹೊರಹೊಮ್ಮಿದೆ. ಮಲೆನಾಡಿನ ಹಸಿರು ನೆಲದ ಸೊಬಗನ್ನೇ ಹೋಲುತ್ತದೆ ಈ ಜಲಪಾತ.
ಹಸಿರು ಗುಡ್ಡಗಳ ಮಧ್ಯೆ ಧುಮ್ಮಿಕ್ಕುವ ಈ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಕ್ಕಿಗಳ ಚಿಲಿಪಿಲಿ ಮನಸ್ಸಿಗೆ ಮುದ ನೀಡುತ್ತದೆ.
ಗವಿ ಸಿದ್ಧಲಿಂಗೇಶ್ವರರ ಈ ತಾಣವು ಕೇವಲ ಪ್ರವಾಸಿಗರ ಆಕರ್ಷಣೆ ಮಾತ್ರವಲ್ಲ, ಧಾರ್ಮಿಕ ಪಾವಿತ್ರ್ಯಕ್ಕೂ ಪ್ರಸಿದ್ಧ. ಪ್ರತಿವರ್ಷ ಸಾವಿರಾರು ಭಕ್ತರು ಇಲ್ಲಿಗೆ ಬಂದು ಜಲಪಾತದ ನೀರಿನಲ್ಲಿ ನೆನೆಯುತ್ತಲೇ ದೇವರ ದರ್ಶನ ಪಡೆಯುತ್ತಾರೆ.
ಈ ತಾಣವು ಯಾದಗಿರಿ ನಗರದಿಂದ ಸುಮಾರು 45 ಕಿ.ಮೀ. ದೂರದಲ್ಲಿದೆ. ಯಾದಗಿರಿಯ ಗುರುಮಠಕಲ್ ಮಾರ್ಗದ ಕಂದಕೂರ ಗ್ರಾಮದವರೆಗೆ ಬಸ್ ಸೌಲಭ್ಯವಿದೆ. ಅಲ್ಲಿಂದ ಖಾಸಗಿ ವಾಹನಗಳಲ್ಲಿ ಅಥವಾ ಬೈಕ್ ಮೂಲಕ ಜಲಧಾರೆ ತಲುಪಬಹುದು. ಕಲಬುರಗಿ, ಸೇಡಂ, ತಾಂಡೂರು ಹಾಗೂ ಹೈದರಾಬಾದ್ನಿಂದ ಗುರುಮಠಕಲ್ ಪಟ್ಟಣಕ್ಕೆ ನೇರ ಬಸ್ಗಳು ಲಭ್ಯ. ಜಲಧಾರೆ ಕಾಡಿನ ಮಧ್ಯದಲ್ಲಿರುವುದರಿಂದ ಆಹಾರ ಮತ್ತು ಕುಡಿಯುವ ನೀರಿನ ಸೌಲಭ್ಯ ಸೀಮಿತ. ಪ್ರವಾಸಿಗರು ತಮ್ಮ ಆಹಾರವನ್ನು ಜೊತೆ ಕೊಂಡೊಯ್ಯುವುದು ಉತ್ತಮ. ವಿಶೇಷ ದಿನಗಳಲ್ಲಿ ದೇವಸ್ಥಾನದಿಂದ ಅನ್ನಪ್ರಸಾದ ವ್ಯವಸ್ಥೆಯೂ ಇರಲಿದೆ. ಇತ್ತೀಚಿನ ದಿನಗಳಲ್ಲಿ ಈ ಜಲಪಾತ ಯುವಕರ ಪ್ರಿಯ ಸ್ಥಳವಾಗಿದೆ. ಪ್ರಕೃತಿಯ ಮಧ್ಯೆ ಹರಿಯುವ ನೀರಿನ ಹಿನ್ನೆಲೆಯಲ್ಲಿ ಸೆಲ್ಫಿ ಹಾಗೂ ಪ್ರಿ-ವೆಡ್ಡಿಂಗ್ ಫೋಟೊ ಶೂಟ್ ಮಾಡಲು ಹಲವರು ಇಲ್ಲಿಗೆ ಆಗಮಿಸುತ್ತಿದ್ದಾರೆ.
-ಶರಬು ಬಿ. ನಾಟೇಕಾರ್ ಯಾದಗಿರಿ