×
Ad

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವಿರುದ್ದ ದೂರು: ಹಿಂಪಡೆಯುವಂತೆ ದೂರುದಾರರ ಮೇಲೆಯೇ ಪೊಲೀಸರ ಒತ್ತಡ?

Update: 2025-02-03 08:30 IST

ಬೆಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ನೀಡಿರುವ ದೂರರ್ಜಿಗಳನ್ನು ಹಿಂಪಡೆಯುವಂತೆ ದೂರುದಾರರ ಮೇಲೆಯೇ ಪೊಲೀಸರು ಒತ್ತಡ ಹೇರುತ್ತಿದ್ದಾರೆ!

ಅಲ್ಲದೇ ಕಳೆದ ಒಂದು ವರ್ಷದಿಂದಲೂ ಸಲ್ಲಿಸಿರುವ ದೂರರ್ಜಿಗಳನ್ನಾಧರಿಸಿ ಪೊಲೀಸರು ಎಫ್‌ಐಆರ್ ಕೂಡ ದಾಖಲಿಸುತ್ತಿಲ್ಲ. ಬದಲಿಗೆ ವಿಪರೀತ ಬಡ್ಡಿಯಿಂದ ರೋಸಿ ದೂರಿರುವ ದೂರುದಾರರನ್ನೇ ಪೊಲೀಸರು ಠಾಣೆಗೆ ಕರೆಸುತ್ತಿದ್ದಾರೆ ಮತ್ತು ಸಾಲ ಮರು ಪಾವತಿಸಲು ಮಧ್ಯಸ್ಥಿಕೆ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ.

ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾಲಗಾರರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸುವ ಸಲುವಾಗಿ ಸುಗ್ರೀವಾಜ್ಞೆ ಹೊರಡಿಸಲು ಸರಕಾರವು ಅನುಸರಿಸುತ್ತಿರುವ ವಿಳಂಬದ ಬೆನ್ನಲ್ಲೇ ದೂರರ್ಜಿಗಳನ್ನು ಹಿಂಪಡೆಯಬೇಕು ಎಂದು ದೂರುದಾರರ ಮೇಲೆ ಒತ್ತಡ ಹೇರುತ್ತಿರುವುದು ಮತ್ತು ದೂರುದಾರರ ಆತಂಕದ ಮಾತುಗಳು ಮುನ್ನೆಲೆಗೆ ಬಂದಿವೆ.

ಹಾಗೆಯೇ ಸಾಲ ಮರು ಪಾವತಿಸುವ ಸಂಬಂಧ ದೂರರ್ಜಿ ಮೇಲೆಯೇ ದೂರರ್ಜಿದಾರರಿಂದ ಮುಚ್ಚಳಿಕೆ ರೀತಿ ಬರೆಸಿಕೊ ಳ್ಳಲಾಗುತ್ತಿದೆ. ಮತ್ತು ಬಲವಂತವಾಗಿ ಪೊಲೀಸರು ಸಹಿ ಮಾಡಿಸುತ್ತಿದ್ದಾರೆ ಎಂಬ ಆಪಾದನೆಗಳು ಸಹ ಕೇಳಿ ಬಂದಿವೆ.

ಸಾಲ ಮರು ಪಾವತಿಸುವ ಸಂಬಂಧ ಸಂಘದ ಪ್ರತಿನಿಧಿಗಳು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿರುವ ದೂರುದಾರರು, ರಾತ್ರಿ ಹೊತ್ತಲ್ಲಿಯೂ ಠಾಣೆಗೆ ತೆರಳಿ ದೂರರ್ಜಿ ಸಲ್ಲಿಸಿರುವುದು ಸಹ ಗೊತ್ತಾಗಿದೆ.

ಅದೇ ರೀತಿ ಸಂಘದ ಪ್ರತಿನಿಧಿ, ಸಿಬ್ಬಂದಿಯ ವಿರುದ್ಧ ಕಿರುಕುಳ, ದೌರ್ಜನ್ಯ, ಬೆದರಿಕೆಯಂತಹ ಆರೋಪಗಳಿದ್ದರೂ ಸಹ ‘ಮಿಸಲೇನಿಯಸ್’, ‘ನಾನ್ ಕಾಗ್ನಿಜಬಲ್’ ಇತರ ಅರ್ಜಿಗಳ ನಮೂನೆಯಡಿಯಲ್ಲಿ ಪೊಲೀಸರು ದೂರನ್ನು ದಾಖಲಿಸಿಕೊಂಡಿರುವುದು ತಿಳಿದು ಬಂದಿದೆ.

ರಾಜ್ಯದ ವಿವಿಧ ಠಾಣೆಗಳಲ್ಲಿ ದೂರರ್ಜಿ ಸಲ್ಲಿಸಿರುವ ದೂರುದಾರರನ್ನು ‘‘‘the-file.in’’ ಸಂಪರ್ಕಿಸಿತು. ಕೊಡಗು, ಉಡುಪಿ, ಕಾರ್ಕಳ, ಶುಂಟಿಕೊಪ್ಪ ಸೇರಿದಂತೆ ಹಲವು ದೂರುದಾರರು ದುಗುಡವನ್ನು ವ್ಯಕ್ತಪಡಿಸಿದ್ದಾರೆ.

‘ಸಾಲ ಕಟ್ಟಬೇಕು ಎಂದು ಹೇಳಿದ್ದರು. ಇದರಿಂದ ರಾತ್ರಿಯೇ ಹೋಗಿ ದೂರು ಕೊಟ್ಟೆವು. ಪೊಲೀಸರು ಸಂಘದವರನ್ನು ಕರೆಸಿದ್ದರು. ಸೂಪರ್‌ವೈಸರ್ ಬಂದಿದ್ದರು. ದುಡ್ಡ ಕಟ್ಟಬೇಕಲ್ಲಮ್ಮ ಎಂದು ಪೊಲೀಸರು ಹೇಳಿದ್ದು, ಕಷ್ಟ ಆಗುತ್ತೆ ಎಂದು ನಾವು ಹೇಳಿದೆವು. ಈ ವೇಳೆ ಅವರು ಒಂದ್ ಅರ್ಜಿಯನ್ನು ಬರೆಸಿಕೊಂಡು ಸಹಿ ಮಾಡಲು ಹೇಳಿದ್ದು, ನಾನು ಸಹಿ ಮಾಡಿದೆ. ಒತ್ತಡದಲ್ಲಿ ಆ ಅರ್ಜಿಯಲ್ಲಿ ಏನಿತ್ತು ಎಂದು ನಾನು ಓದಲಿಲ್ಲ’ ಎಂದು ಕೊಡಗಿನ ಜಯಂತಿ ಅವರು ‘‘the-file.in’’ ಪ್ರತಿನಿಧಿಯೊಂದಿಗೆ ಆತಂಕದಿಂದಲೇ ಪ್ರತಿಕ್ರಿಯಿಸಿದರು.

ದೂರರ್ಜಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ಜಯಂತಿ ಅವರು ಎಸ್‌ಕೆಡಿಆರ್‌ಡಿಪಿ ಅಧ್ಯಕ್ಷರು, ಸೇವಾ ಪ್ರತಿನಿಧಿಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ಹಾಗೂ ಇತರ ಸಂಘದಿಂದ ಸಾಲ ಪಡೆದಿದ್ದಾರೆ. ಸಂಘದ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ಹಣ ಕಟ್ಟುವಂತೆ ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ. ತೊಂದರೆ ಕೊಟ್ಟವರನ್ನು ವಿಚಾರಣೆ ಮಾಡಿ ರಕ್ಷಣೆ ನೀಡಬೇಕು ಎಂದು ದೂರರ್ಜಿಯಲ್ಲಿ ಕೋರಿರುವುದು ಗೊತ್ತಾಗಿದೆ.

‘ಸಂಘದ ವಿರುದ್ಧ ದೂರು ಕೊಟ್ಟಿದ್ದೇವೆ. ಆದರೆ ಎಫ್‌ಐಆರ್ ಆಗಿಲ್ಲ. ದೂರನ್ನು ಹಿಂಪಡೆಯಲು ಪೊಲೀಸರು ಸ್ಟೇಷನ್‌ಗೆ ಬರಲು ಹೇಳುತ್ತಿದಾರೆ.’ ಎನ್ನುತ್ತಾರೆ ಕಾರ್ಕಳದ ಶಶಿಕಲಾ.

ಶಶಿಕಲಾ ಅವರು 2024ರ ಡಿಸೆಂಬರ್ 27ರಂಂದೇ ಈ ಬಗ್ಗೆ ಕಾರ್ಕಳ ಟೌನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ‘ಎಸ್‌ಕೆಡಿಆರ್‌ಡಿಪಿ ಟ್ರಸ್ಟ್‌ನಿಂದ 1 ಲಕ್ಷ ರೂ.ಸಾಲ ಪಡೆದಿದ್ದು, ಪ್ರತೀ ವಾರ 1,520 ರೂ. ಪಾವತಿ ಮಾಡುತ್ತಿದ್ದರು. ಪ್ರಸ್ತುತ 1 ವರ್ಷದಿಂದ ಸಾಲದ ಹಣ ಪಾವತಿಸದೇ ಇದ್ದು ನಿಯಮ ಮೀರಿ ಬಡ್ಡಿ ವಿಧಿಸಿ ಪ್ರತಿವಾರ ಪ್ರಜ್ಞಾ ಹಾಗೂ ಎಂಟು ಹತ್ತು ಜನ ಮನೆ ಬಳಿಗೆ ಬಂದು ಹಣ ಪಾವತಿಸುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

ದೂರರ್ಜಿಗಳ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ಈವರೆಗೂ ಎಫ್‌ಐಆರ್ ದಾಖಲಾಗಿಲ್ಲ

ಉಡುಪಿಯ ವಿಮಲಾ ಎಂಬವರು 2025ರ ಜನವರಿ 12ರಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಎಸ್‌ಕೆಡಿಆರ್‌ಡಿಪಿ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಸಾಲದ ಬಗ್ಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದರು. ಆಪಾದಿತರ ವಿರುದ್ಧ ಇದುವರೆಗೂ ಎಫ್‌ಐಆರ್ ದಾಖಲಾಗಿಲ್ಲ ಎಂದು ವಿಮಲಾ ಅವರು ‘‘the-file.in’’ ಪ್ರತಿನಿಧಿಗೆ ಮಾಹಿತಿ ನೀಡಿದರು.

ಕೃಷ್ಣ ರೈ ಎಂಬವರು ಕಡಬ ಪೊಲೀಸ್ ಠಾಣೆಗೆ 2024ರ ಡಿಸೆಂಬರ್ 24ರಂದು ದೂರರ್ಜಿ ಸಲ್ಲಿಸಿದ್ದರು. ಎಸ್‌ಕೆಡಿಆರ್‌ಡಿಪಿ ಅಧ್ಯಕ್ಷ ಅನಿಲ್ ಕುಮಾರ್, ಸಂಘದ ಇತರ ಸದಸ್ಯರು ಮತ್ತು ಸಿಬ್ಬಂದಿ ಆರ್‌ಬಿಐ ನಿಯಮಾವಳಿಗಳನ್ನು ಪಾಲಿಸದೇ ವ್ಯವಹಾರ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಆದರೆ 2 ತಿಂಗಳಾದರೂ ಈ ಸಂಬಂಧ ಯಾವುದೇ ಎಫ್‌ಐಆರ್ ಕೂಡ ದಾಖಲಿಸಿಲ್ಲ ಎಂದ ಕೃಷ್ಣ ರೈ ಅವರು ‘‘the-file.in’’ ಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ.ಮಹಾಂತೇಶ್

contributor

Similar News