ನೈಜ ಪತ್ರಕರ್ತರ ಹುಡುಕಾಟದಲ್ಲಿ ಇಂದಿನ ಪ್ರಜಾಪ್ರಭುತ್ವ

ಕರ್ನಾಟಕದಲ್ಲಿ ಪ್ರತೀ ಜುಲೈ ಒಂದರಂದು ಕ್ರೈಸ್ತ ಮಿಷನರಿ ಹರ್ಮನ್ ಮೊಗ್ಲಿಂಗ್ ೧೮೪೩ರಲ್ಲಿ ಆರಂಭಿಸಿದ ‘ಮಂಗಳೂರು ಸಮಾಚಾರ’ ಪತ್ರಿಕೆಯ ಹಿನ್ನೆಲೆಯ ಆಧಾರದಲ್ಲಿ ಪತ್ರಿಕಾ ದಿನಾಚರಣೆ. ಕಾಲವೊಂದಿತ್ತು, ಪತ್ರಿಕೆಗಳು ಧಾರ್ಮಿಕತೆಯಿಂದ ಆರಂಭವಾಗಿ ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಬದಲಾವಣೆ, ರಾಜಕೀಯ ಮತ್ತು ಆಡಳಿತ ಮಾಹಿತಿ ಹೀಗೆ ಆಯಾ ಸಂದರ್ಭದ ಅಗತ್ಯಗಳನ್ನು ಕ್ಲಪ್ತವಾಗಿ ಪೊರೈಸಿಕೊಂಡು ದೊಡ್ಡ ಮಟ್ಟದ ಬಂಡವಾಳಶಾಹಿ ಎಂದು ಸಹ ಅನ್ನಿಸಿಕೊಳ್ಳದೆ ಬಹಳಷ್ಟು ಮಟ್ಟಿಗೆ ನಿಜಾರ್ಥದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ತನ್ನೊಳಗಿನ ಮೌಲ್ಯಗಳನ್ನು ಸಾಕಷ್ಟು ಉಳಿಸಿಕೊಂಡೇ ಬೆಳೆಯುತ್ತಿದ್ದ ದಿನಗಳವು. ಆದರೆ ಆನಂತರದ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಖಾಸಗೀಕರಣದ ದಿನಗಳು ಪ್ರತಿಕೆಯ ಆಂತರಿಕ ಮತ್ತು ಬಾಹ್ಯ ರೂಪಕ್ಕೆ ಹೊಸತನವನ್ನು ಕೊಡುವುದರ ಜೊತೆಗೆ ವೇಗದ ಬ್ರೇಕಿಂಗ್ ನ್ಯೂಸ್ ಮಾದರಿಯ ಟಿ.ವಿ. ರೂಪದ ಪ್ರತಿಸ್ಪರ್ಧಿಯನ್ನು ತನ್ನೆದುರು ತಂದು ನಿಲ್ಲಿಸಿದವು, ಇಡೀ ಮಾಧ್ಯಮ ಕ್ಷೇತ್ರವನ್ನು ಲಾಭ ನಷ್ಟದ ಉದ್ಯಮಕ್ಕೆ ಎಳೆದುತಂದು. ಇಪ್ಪತ್ತೊಂದನೇ ಶತಮಾನದ ಇಂಟರ್ನೆಟ್ ಯುಗವಂತೂ ಇದೀಗ ಸಾಮಾಜಿಕ ಮಾಧ್ಯಮದ ಹೆಸರಿನಲ್ಲಿ ಒಂದರ್ಥದ ಜನಮಾನಸದಲ್ಲಿ ಬಿಡಿಸಲಾಗದ ಕಪಿಮುಷ್ಟಿಯ ವಾತಾವರಣವನ್ನು ಸೃಷ್ಟಿಸಿ ಇಡೀ ಮಾಧ್ಯಮ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲದ ವಾತಾವರಣವನ್ನೇ ಹುಟ್ಟುಹಾಕಿದೆ.
ತಲೆಮಾರಿನ ಅಂತರದಲ್ಲಿ ಇರುವ ಅವುಗಳ ಫಲಾನುಭವಿಗಳಿಗೆ ಒಂದಿಷ್ಟು ಮುಜುಗರ, ಮತ್ಸರ ತಂದರೂ ಮಾಧ್ಯಮ ಸೇರಿದಂತೆ ಯಾವುದೇ ಕ್ಷೇತ್ರದ ಬದಲಾವಣೆ ಅನಿವಾರ್ಯ ಮತ್ತು ಸ್ವಾಗತಾರ್ಹ. ಎಲ್ಲವೂ ಕಾಲದ ನಿಯಮದ ಬದಲಾವಣೆ. ಆದರೆ ಪತ್ರಿಕೆ ಮತ್ತು ಪತ್ರಕರ್ತರು ಅವಲಂಬಿತವಾಗಿರಬೇಕಾದ ಮೌಲ್ಯ ಎಂಬುದು ಕಾಲಾತೀತ. ಇಂತಹ ಸಂದರ್ಭದಲ್ಲಿ ಜೀವನಪೂರ್ತಿ ಪ್ರಾಮಾಣಿಕವಾಗಿ ಅರೆಹೊಟ್ಟೆ ತುಂಬಿಸಿ ದುಡಿದ ಪತ್ರಕರ್ತರನ್ನು ಸಮಾಜ ಕಂಡಿದೆ ಮತ್ತು ಈಗ ಸದಾ ಹೊಟ್ಟೆ ತುಂಬಿಸಿಕೊಳ್ಳಲೆಂದೇ ಇರುವ ಪತ್ರಕರ್ತರೂ ಇದ್ದಾರೆ ಎಂಬುದು ನಿಜ. ಒಂದು ಕಾಲಕ್ಕೆ ಹೆಚ್ಚಿನ ಶಿಕ್ಷಣದ ಅನುಕೂಲ ಇಲ್ಲದಿದ್ದರೂ ಮಾಧ್ಯಮ ರಂಗದಲ್ಲಿ ಓದು ಬರಹ ಕಲಿಕೆ ಆಸಕ್ತಿಯನ್ನೇ ಬಂಡವಾಳವನ್ನಾಗಿರಿಸಿ ಜ್ಞಾನಧಾರಿತ ಅಪೂರ್ವ ಸಾಧನೆ ಮಾಡಿದ ಅನೇಕರ ನಡುವೆ ಇಂದು ಬರೀ ಬೊಬ್ಬೆ, ನಿರ್ದಿಷ್ಟ ರಾಜಕೀಯ, ಸಾಮಾಜಿಕ ಮತ್ತಿತರರ ಖಾಸಗಿ ಲಾಭದಾಯಕ ಒಲವುಗಳನ್ನೇ ಬಂಡವಾಳ ಮಾಡಿ ಬೇಳೆ ಬೇಯಿಸುವ ಒಂದಿಷ್ಟು ಮಂದಿಗೂ ಖಂಡಿತ ಕೊರತೆಯಿಲ್ಲ. ಇದಕ್ಕೆ ಪೂರಕವಾದ ಮಾಧ್ಯಮ ರಂಗದ ಒಡೆತನ, ಅವರ ರಾಜಕೀಯ, ಔದ್ಯೋಗಿಕ ಸಂಬಂಧಗಳು ಕಾಲದ ಶಾಪವಾಗಿ ಈ ಕ್ಷೇತ್ರದ ಅಧೋಗತಿಗೆ ಪರೋಕ್ಷ ಕಾರಣವಾಗುತ್ತಿರುವುದು ಕಣ್ಣಿಗೆ ರಾಚುವ ಸತ್ಯ.
ಕಾಲಾನುಸಾರದ ಈ ಚಿತ್ರಣದಲ್ಲಿ ಪತ್ರಕರ್ತರ ನೈಜತೆಗೆ ಕಡಿವಾಣ ಹಾಕಲು ಪ್ರಯತ್ನಿಸಿದ ಹಾಗೂ ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆದ ಅಪಕೀರ್ತೀಗೆ ಇಡೀ ಸಮಾಜವು ಹೊಣೆ. ರಾಜಕೀಯ ನೇತಾರರು ಸೇರಿ ಆರೋಗ್ಯ, ಶಿಕ್ಷಣ... ಈ ರೀತಿಯ ಎಲ್ಲಾ ಲಾಬಿಗಳು ಸಹ ಇದರ ಅಪಮೌಲ್ಯಕ್ಕೆ ನೇರ ಕಾರಣ. ಸುದ್ದಿ ಬುದ್ಧಿಗಳ ನಡುವೆ ಹೊಸದಾಗಿ ಬಂದ ಕಮರ್ಷಿಯಲ್ ರೂಪ, ಜಾಹೀರಾತು ಹೊರತುಪಡಿಸಿ ಇತರ ಮಾದರಿಯ ರೆವಿನ್ಯೂ ತರಲು ಆರಂಭವಾದ ಮೇಲಂತೂ ಕಾಲದ ಓಟಕ್ಕೆ ಸೋತು ಬಹುತೇಕ ಪತ್ರಕರ್ತರ ನೈಜ ರೂಪವೇ ದುರದೃಷ್ಟವಶಾತ್ ಕಾಣದಾಯಿತು. ಇದಕ್ಕೆ ಪೂರಕವಾಗಿ ಬೆಳೆದ ಸಂಪಾದಕರ ರೀತಿ ನೀತಿ, ಧಾರ್ಮಿಕ ಒಲವು ಇತ್ಯಾದಿ ತಮ್ಮ ಸ್ಥಾನಮಾನದ ನಡು ಮುರಿದ್ದದ್ದನ್ನು ಸಮಾಜ ನೋಡಿದೆ ಪತ್ರಕರ್ತರ ಅಸಹಾಯಕತೆಯೆದುರು. ಬಹುಶಃ ಇದಕ್ಕೊಪ್ಪದ ಹಲವರು ಅರ್ಧದಲ್ಲಿಯೇ ಈ ಕ್ಷೇತ್ರ ಬಿಟ್ಟು ಹೋದ ನಿದರ್ಶನಗಳು ಇಲ್ಲದಿಲ್ಲ.
ಈಗ ತಕ್ಷಣದ ಸಾಮಾಜಿಕ ಮಾಧ್ಯಮದ ಭರಾಟೆಯ ನಡುವೆಯಂತೂ ಹಲವು ಸಲ ನೈಜ ಪತ್ರಕರ್ತರ ಸ್ಥಿತಿಯಂತೂ ಅಯೋಮಯ. ಒಂದೆಡೆ ಮೂಲೆಗುಂಪಾಗುತ್ತಿರುವ ಮುದ್ರಣ ಮಾಧ್ಯಮ, ಮೊದಲಿನ ಛಾಪು ಕಳೆದುಕೊಂಡಿರುವ ಟಿ.ವಿ. ಕ್ಷೇತ್ರ, ಉದ್ಯೋಗ ಸುರಕ್ಷತೆಯಂತಹ ಗಂಭೀರ ವಿದ್ಯಮಾನದ ನಡುವೆ ಪತ್ರಕರ್ತರು ಮೌಲ್ಯದ ಹುಡುಕಾಟದಲ್ಲಿಯೇ ಬಾಕಿಯಾದರೆ ಪುನಃ ಗತಕಾಲದ ಅರೆಹೊಟ್ಟೆಯ ಸ್ಥಾನಮಾನಕ್ಕೆ ಮರಳಬೇಕಾದೀತೇನೋ? ಈ ಸವಾಲಿನ ಒಟ್ಟಿಗೆ ಹೊಸದಾಗಿ ಪತ್ರಕರ್ತರ ಸ್ಥಾನಮಾನಕ್ಕೆ ಸರಿಸಮಾನಾದ ಸೋಶಿಯಲ್ ಮೀಡಿಯಾ influencersಗಳ (ಇದಕ್ಕಿರುವ ಕಾಲದ ಪರಿಧಿ ಗೊತ್ತಿಲ್ಲ, ಖಂಡಿತ ಕಾದು ನೋಡಬೇಕು!) ಹಾರಾಟಗಳ ಮಧ್ಯದಲ್ಲಂತೂ ಅಪರೂಪಕ್ಕೆ ಈ ಸಾಂಪ್ರದಾಯಿಕ ಪತ್ರಕರ್ತರ ಪಾಡು ಒಮ್ಮೊಮ್ಮೆ ಶೋಚನೀಯ! ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ಸಹ ನಮ್ಮ ನಡುವೆ ಯಾವುದೇ ರೀತಿಯಲ್ಲೂ ಮಾರಾಟಕ್ಕೆ ಸಿದ್ಧವಾಗದೆ, ಘನತೆ ಉಳಿಸಲು ಪ್ರಾಮಾಣಿಕವಾಗಿ ಹೋರಾಡಿ ಹೆಣಗಾಡುತ್ತಿರುವ ಎಲ್ಲ ಮಾಧ್ಯಮ ರೂಪದ ಪತ್ರಕರ್ತರು ಮಾತ್ರ ಈ ಕಾಲದ ನೈಜತೆಗೆ ಸಾಕ್ಷಿ.






