ತಾಪಮಾನ ಏರಿಕೆ: ನಿಯಂತ್ರಣ ಸಾಧ್ಯವೇ?
ಮಾಲಿನ್ಯ ತಡೆಯ ಗುರಿಯನ್ನು ಸಾಧಿಸಬೇಕಾದರೆ ಮನುಷ್ಯನ ಜೀವನಶೈಲಿಯೇ ಬದಲಾಗಬೇಕಾಗುತ್ತದೆ. ನಾವು ನಮ್ಮ ಐಷಾರಾಮಿ ಜೀವನಕ್ಕಾಗಿ ಏನನ್ನು ಬಳಕೆ ಮಾಡಬೇಕು, ಏನನ್ನು ಉತ್ಪಾದಿಸಬೇಕು ಎಂಬ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಮುಂದುವರಿದ ಬಂಡವಾಳಶಾಹಿ ದೇಶಗಳು ಆರ್ಥಿಕ ಬೆಳವಣಿಗೆಯ ಗುರಿ ಸಾಧಿಸಲು ರೂಪಿಸಿದ ಅಭಿವೃದ್ಧಿಯ ಮಾದರಿಯಿಂದ ಜಗತ್ತು ಈ ಸ್ಥಿತಿಗೆ ಬಂದು ತಲುಪಿದೆ. ಭೂಮಿಯ ಮೇಲೆ ನಿತ್ಯವೂ ನಡೆಯುತ್ತಿರುವ ಅತ್ಯಾಚಾರಕ್ಕೆ ಕಡಿವಾಣ ಹಾಕಬೇಕಾಗಿದೆ. ಪರ್ಯಾಯ ಶಕ್ತಿಮೂಲಗಳ ಬಗ್ಗೆ ಯೋಚಿಸಬೇಕಾಗಿದೆ. ಈ ಭೂಮಿಯನ್ನು ಅಪಾಯದಿಂದ ರಕ್ಷಿಸಲು ಪ್ಯಾರಿಸ್ ಒಪ್ಪಂದ ಸಹಕಾರಿಯಾಗಿದೆ ಎಂಬುದೇನೋ ನಿಜ. ಆದರೆ ಆ ಗುರಿ ತಲುಪಲು ಇನ್ನೂ ಬಹುದೂರ ಸಾಗಬೇಕಾಗಿದೆ. ಇದರಲ್ಲಿ ಸಿರಿವಂತ ದೇಶಗಳ ಜವಾಬ್ದಾರಿ ಬಹಳ ದೊಡ್ಡದು.

ಪ್ಯಾರಿಸ್ನಲ್ಲಿ ನಡೆದ ಜಾಗತಿಕ ತಾಪಮಾನ ಕುರಿತ ಶೃಂಗಸಭೆ ಕೊಂಚ ಮಟ್ಟಿಗೆ ಯಶಸ್ವಿಯಾಗಿದೆ. ಈ ಶೃಂಗಸಭೆಯಲ್ಲಿ ಮಾಡಿಕೊಂಡ ಒಪ್ಪಂದಕ್ಕೆ 196 ದೇಶಗಳು ಸಹಿಹಾಕಿವೆ. ಪೃಥ್ವಿಯ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಇದು ಒಂದು ಮೈಲುಗಲ್ಲಾಗಿದೆ. ತಾಪಮಾನ ಏರಿಕೆಯ ಮಿತಿಯನ್ನು ಗರಿಷ್ಠ 2 ಡಿಗ್ರಿ ಸೆಲ್ಸಿಯಸ್ಗೆ ನಿಯಂತ್ರಿಸಲು ಬಹುತೇಕ ಎಲ್ಲ ರಾಷ್ಟ್ರಗಳು ಒಪ್ಪಿಗೆ ನೀಡಿವೆ. ಇದೊಂದು ಐತಿಹಾಸಿಕ ಹೆಜ್ಜೆಯೆಂದರೆ ಅತಿಶಯೋಕ್ತಿಯಲ್ಲ. ಭೂಮಿಯ ವಾತಾವರಣ ಹದಗೆಡಲು ಮುಖ್ಯಕಾರಣ ಅಭಿವೃದ್ಧಿ ಹೊಂದಿದ ದೇಶಗಳೇ ಆಗಿವೆ. ಲಂಗುಲಗಾಮು ಇಲ್ಲದ ಲಾಭಕೋರತನದಿಂದಾಗಿ ಪರಿಸರವನ್ನು ಹಾಳುಮಾಡುತ್ತ ಬಂದ ಈ ಸಿರಿವಂತ ದೇಶಗಳು ಭಾರತದಂತಹ ಅಭಿವೃದ್ಧಿಶೀಲ ದೇಶಗಳಿಗೆ ಹಸಿರಿನ ಮಹತ್ವದ ಕುರಿತು ಒಣ ಉಪದೇಶ ನೀಡುತ್ತಿವೆ. ನಮಗೆಲ್ಲ ಆಸರೆ ನೀಡಿದ ಈ ಪೃಥ್ವಿ, ಮಾಲಿನ್ಯದಿಂದಾಗಿ ವಿನಾಶದ ಅಂಚಿಗೆ ಬಂದು ನಿಂತಿದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಈ ಮಾಲಿನ್ಯವನ್ನು ತಡೆಯಲು ಈ ಹಿಂದೆ 20 ಬಾರಿ ಶೃಂಗಸಭೆ ನಡೆದರೂ ಪ್ರಯೋಜನವಾಗಿರಲಿಲ್ಲ. ಹಿಂದೆ ನಡೆದ ಶೃಂಗಸಭೆಗಳು ಆರೋಪ ಮತ್ತು ಪ್ರತ್ಯಾರೋಪಗಳಲ್ಲಿ ಕೊನೆಗೊಂಡಿದ್ದವು. ಈ ಬಾರಿ ನಡೆದ ಪ್ಯಾರಿಸ್ ಶೃಂಗಸಭೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಒಪ್ಪಂದಕ್ಕೆ ಬಂದಿದೆ.
ಜಾಗತಿಕ ತಾಪಮಾನದ ಹೆಚ್ಚಳವನ್ನು 2 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿಡಲು ಮತ್ತು 1.5 ಡಿಗ್ರಿ ಸೆಲ್ಸಿಯಸ್ ಗುರಿ ಸಾಧಿಸಲು ಈ ಶೃಂಗಸಭೆಯಲ್ಲಿ ಒಪ್ಪಂದಕ್ಕೆ ಬರಲಾಗಿದೆ. ಈ ಒಪ್ಪಂದ ಸಾಕಾರಗೊಳ್ಳುವಲ್ಲಿ ಭಾರತ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಅಭಿವೃದ್ಧಿ ಹೊಂದಿರುವ ಮತ್ತು ಇನ್ನೂ ಅಭಿವೃದ್ಧಿಯ ಪಥದಲ್ಲಿರುವ ದೇಶಗಳನ್ನು ಪ್ರತ್ಯೇಕಿಸಿ ಅವುಗಳ ಮಿತಿಯನ್ನು ಬೇರೆಬೇರೆಯಾಗಿ ಗುರುತಿಸಬೇಕೆಂಬ ಭಾರತದ ಬೇಡಿಕೆಗೆ ಶೃಂಗಸಭೆಯ ಅಂತಿಮ ಕರಡಿನಲ್ಲಿ ಆದ್ಯತೆ ನೀಡಲಾಗಿದೆ. ಈ ಗುರಿ ಸಾಧಿಸಲು ಅಭಿವೃದ್ಧಿಶೀಲ ಬಡದೇಶಗಳಿಗೆ 2020ರಿಂದ ಪ್ರತಿವರ್ಷ 100 ಶತಕೋಟಿ ಡಾಲರ್ ವೌಲ್ಯದ ಹಸಿರು ರಕ್ಷಣಾ ನಿಧಿ ಸ್ಥಾಪಿಸಬೇಕೆಂಬ ಅಂಶವು ಈ ಒಪ್ಪಂದದಲ್ಲಿ ಅಡಕವಾಗಿದೆ. ಈ ಒಪ್ಪಂದದ ಕರಡಿಗೆ 2016ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಎಲ್ಲ ದೇಶಗಳು ಅಂಕಿತ ಹಾಕಲಿವೆ. ಇಂಗಾಲದ ಹೊರಸೂಸುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಅಭಿವೃದ್ಧಿಶೀಲ ದೇಶಗಳ ಜವಾಬ್ದಾರಿ ದೊಡ್ಡದು. ಅಮೆರಿಕ ಮತ್ತು ಯುರೋಪಿನ ದೇಶಗಳು ಕಲ್ಲಿದ್ದಲನ್ನು ಉರಿಸುವ ಮೂಲಕ ತಮ್ಮ ಇಂಧನವನ್ನು ಪಡೆದುಕೊಳ್ಳುತ್ತಾ ಬಂದಿವೆ. ಇದರಿಂದ ವಾತಾವರಣದ ತಾಪಮಾನ ತೀವ್ರವಾಗಿ ಹೆಚ್ಚಾಗುತ್ತಾ ಸಾಗಿದೆ. ಇದು ತಕ್ಷಣ ಕಡಿಮೆಯಾಗಬೇಕಾಗಿದೆ. ಈ ಬಗ್ಗೆ ಭಾರತ ಮತ್ತು ಇತರ ಅಭಿವೃದ್ಧಿಶೀಲ ದೇಶಗಳು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದವು. ಇಂಗಾಲದ ಹೊರಸೂಸುವಿಕೆಗೆ ಕಡಿವಾಣ ಹಾಕಬೇಕೆಂದು ಆಗ್ರಹಪಡಿಸಿದ್ದವು. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಆವಿಷ್ಕಾರವು ನಡೆಯುತ್ತಿದೆ. ಭವಿಷ್ಯದಲ್ಲಿ ಕಲ್ಲಿದ್ದಲಿನ ಅವಲಂಬನೆ ಕಡಿಮೆಯಾಗುವ ನಿರೀಕ್ಷೆಯಿದೆ. ನೂತನ ತಂತ್ರಜ್ಞಾನ ಆವಿಷ್ಕಾರದ ಪ್ರಯೋಜನ ಜಗತ್ತಿನ ಎಲ್ಲ ದೇಶಗಳಿಗೂ ಸಿಗಬೇಕೆಂಬುದು ಭಾರತದ ನಿಲುವಾಗಿದೆ. ಎಲ್ಲ ದೇಶಗಳಿಗೂ ಈ ತಂತ್ರಜ್ಞಾನ ಲಭ್ಯವಾದರೆ ತಾಪಮಾನ ಏರಿಕೆಗೆ ಕಡಿವಾಣ ಹಾಕಬಹುದು.
ಈಗ ಪ್ಯಾರಿಸ್ನಲ್ಲಿ ಮಾಡಿಕೊಂಡ ಒಪ್ಪಂದ ಬಹುಪಾಲು ಆಶಯ ಮತ್ತು ಆಶೋತ್ತರಗಳ ಹಂತದಲ್ಲಿದೆ. ಮುಂದಿನ ಏಳು ವರ್ಷಗಳಲ್ಲಿ ಸೌರಶಕ್ತಿ ಬಳಕೆಯನ್ನು ಏಳುಪಟ್ಟು ಹೆಚ್ಚಿಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ವರ್ಷಕ್ಕೆ 50 ಲಕ್ಷ ಗಿಡಗಳನ್ನು ನೆಡುವುದಾಗಿ ಭಾರತ ಮಾತುಕೊಟ್ಟಿದೆ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ದೇಶಗಳೂ ಕೂಡ ಮಾಲಿನ್ಯ ತಡೆಯ ಗುರಿಗಳನ್ನು ಪ್ರಕಟಿಸಿವೆ. ಪ್ರಪಂಚದ ವಾತಾವರಣವನ್ನು 1990ರ ಇಸವಿಯಲ್ಲಿ ಇದ್ದ ತಾಪಮಾನದ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಾಗಿ ಘೋಷಿಸಿವೆ. ಅಮೆಝಾನ್ನಲ್ಲಿ ಭಾರೀ ಪ್ರಮಾಣದಲ್ಲಿ ಅರಣ್ಯ ನಾಶ ಮಾಡಿದ್ದ ಬ್ರೆಝಿಲ್ ಅಲ್ಲಿ ಮತ್ತೆ ಹಿಂದಿನ ಪ್ರಮಾಣದಲ್ಲೇ ಅರಣ್ಯ ಬೆಳೆಸುವ ಭರವಸೆಯನ್ನು ನೀಡಿದೆ. ಆದರೆ ಇವೆಲ್ಲ ಸುಲಭದ ಸಂಗತಿಯಲ್ಲ. ಗುರಿಯನ್ನು ಇರಿಸಿಕೊಂಡ ಮಾತ್ರಕ್ಕೆ ಎಲ್ಲವೂ ಕಾರ್ಯಗತಗೊಳ್ಳುವುದಿಲ್ಲ. ಅದಕ್ಕಾಗಿ ಬದ್ಧತೆ ಇರಬೇಕಾಗುತ್ತದೆ.
ಈ ಗುರಿಯನ್ನು ಸಾಧಿಸಬೇಕಾದರೆ ಮನುಷ್ಯನ ಜೀವನಶೈಲಿಯೇ ಬದಲಾಗಬೇಕಾಗುತ್ತದೆ. ನಾವು ನಮ್ಮ ಐಷಾರಾಮಿ ಜೀವನಕ್ಕಾಗಿ ಏನನ್ನು ಬಳಕೆ ಮಾಡಬೇಕು, ಏನನ್ನು ಉತ್ಪಾದಿಸಬೇಕು ಎಂಬ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಮುಂದುವರಿದ ಬಂಡವಾಳಶಾಹಿ ದೇಶಗಳು ಆರ್ಥಿಕ ಬೆಳವಣಿಗೆಯ ಗುರಿ ಸಾಧಿಸಲು ರೂಪಿಸಿದ ಅಭಿವೃದ್ಧಿಯ ಮಾದರಿಯಿಂದ ಜಗತ್ತು ಈ ಸ್ಥಿತಿಗೆ ಬಂದು ತಲುಪಿದೆ. ಭೂಮಿಯ ಮೇಲೆ ನಿತ್ಯವೂ ನಡೆಯುತ್ತಿರುವ ಅತ್ಯಾಚಾರಕ್ಕೆ ಕಡಿವಾಣ ಹಾಕಬೇಕಾಗಿದೆ. ಪರ್ಯಾಯ ಶಕ್ತಿಮೂಲಗಳ ಬಗ್ಗೆ ಯೋಚಿಸಬೇಕಾಗಿದೆ. ಈ ಭೂಮಿಯನ್ನು ಅಪಾಯದಿಂದ ರಕ್ಷಿಸಲು ಪ್ಯಾರಿಸ್ ಒಪ್ಪಂದ ಸಹಕಾರಿಯಾಗಿದೆ ಎಂಬುದೇನೋ ನಿಜ. ಆದರೆ ಆ ಗುರಿ ತಲುಪಲು ಇನ್ನೂ ಬಹುದೂರ ಸಾಗಬೇಕಾಗಿದೆ. ಇದರಲ್ಲಿ ಸಿರಿವಂತ ದೇಶಗಳ ಜವಾಬ್ದಾರಿ ಬಹಳ ದೊಡ್ಡದು. ಓರೆನ್ ಪದರದಲ್ಲಿ ತೂತು ಬಿದ್ದು ಮನುಷ್ಯ ಕುಲಕ್ಕೆ ಅಪಾಯ ಉಂಟಾಗಿದೆ ಎಂಬ ಮುನ್ಸೂಚನೆ ದೊರೆತ ನಂತರ ಸಿರಿವಂತ ದೇಶಗಳು ಎಚ್ಚೆತ್ತುಕೊಂಡು ಸರಿದಾರಿಗೆ ಬಂದಿವೆ. ಈಗ ಪ್ರಪಂಚದ ಉಳಿವಿನ ಬಗ್ಗೆ ಚಿಂತನೆ ನಡೆಸಿವೆ. ಪ್ಯಾರಿಸ್ ಶೃಂಗಸಭೆ ಮಾಡಿಕೊಂಡ ಒಪ್ಪಂದ ಕಾರ್ಯಗತಗೊಳ್ಳಬೇಕಾದರೆ ನಮ್ಮ ಜಾಗತಿಕ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಯನ್ನು ತರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ದೇಶಗಳು ಚಿಂತನೆ ನಡೆಸಬೇಕಾಗಿದೆ.





