ಕವನ ಕವಿಯ ವಿಭಿನ್ನ ಅಭಿವ್ಯಕ್ತಿಯ ಭಾಷೆ: ನಾರಾಯಣ ಸ್ವಾಮಿ
ಕವನ ಎಂಬುದು ಕವಿಯ ಪ್ರತಿಭಟನೆ, ವಾದದ, ಚರ್ಚೆಯ ಅಭಿವ್ಯಕ್ತಿಯ ಭಾಷೆ ಎಂದು ಚಿಂತಕ ಡಾ.ಕೆ.ವೈ.ನಾರಾಯಣ ಸ್ವಾಮಿ ಹೇಳಿದರು. ನಗರದ ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ನಡೆದ ‘ಜನನುಡಿ-2015’ರ ‘ನುಡಿಕಾವ್ಯ’ದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕವನ ಎಂಬುದು ಕವಿಯ ಪ್ರತಿಭಟನೆ, ವಾದದ, ಚರ್ಚೆಯ ಅಭಿವ್ಯಕ್ತಿಯ ಭಾಷೆ ಎಂದು ಚಿಂತಕ ಡಾ.ಕೆ.ವೈ.ನಾರಾಯಣ ಸ್ವಾಮಿ ಹೇಳಿದರು. ನಗರದ ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ನಡೆದ ‘ಜನನುಡಿ-2015’ರ ‘ನುಡಿಕಾವ್ಯ’ದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕವಿತೆ ಹೇಳಲು ಹಲವು ಮುಖಗಳಿದ್ದು, ರೂಪಕದ ಭಾಷೆಯಲ್ಲಿ ಕವಿತೆಯನ್ನು ಕವಿಗಳು ಹೇಳಿಕೊಳ್ಳಬೇಕು. ಇಂದಿನ ಯುವಕವಿಗಳು ಕವಿತೆಯ ಮೂಲಕ ಮಾತನಾಡಲು ಪ್ರಯತ್ನಿಸುತ್ತಿರುವುದು ಒಳ್ಳೆಯ ಲಕ್ಷಣ ಎಂದು ಹೇಳಿದರು.
ಕವಿತೆಯಲ್ಲಿ ಸ್ಪಷ್ಟತೆ ಮತ್ತು ಗುಣಮಟ್ಟವಿರುತ್ತದೆ. ನಮ್ಮ ಆಶಯಗಳನ್ನು ಪರಿಣಾಮಕಾರಿಯಾಗಿ ಹೇಳಿಕೊಳ್ಳಲು ಮತ್ತು ಅದನ್ನು ಕೇಳಿದ ಜನರು ನಾಲ್ಕು ಹೆಜ್ಜೆ ಮುಂದಡಿ ಇಡಲು ಕವನಗಳು ಪ್ರೇರಣೆ ನೀಡಬೇಕು ಎಂದು ಹೇಳಿದರು.
ಪ್ರೇಮವೆಂಬುದು ಹಿಂಸೆಯ ವಿರುದ್ಧದ ಅರ್ಥವಾಗಿದ್ದು, ಯುವಕವಿಗಳು ಪ್ರೇಮಕವನಕ್ಕೆ ಒತ್ತು ನೀಡಬೇಕು. ಸಿನೆಮಾದ ಪ್ರೇಮಕವಿತೆಗೆ ಹೊರತಾದ ಪ್ರೇಮಕಾವ್ಯ ಮೂಡಿ ಬರಬೇಕು ಎಂದವರು ನುಡಿದರು. ಹೆಣ್ಣು ಮಕ್ಕಳ ನಿಟ್ಟುಸಿರಿನಲ್ಲಿ ಕಾವ್ಯಗಳಿವೆ. ಶತಮಾನ ಗಳಿಂದ ನೋವು ಹೇಳಿಕೊಳ್ಳಲಾಗದವರು, ಮಾತನಾಡದಂತೆ ನಿರ್ಬಂಧಕ್ಕೊಳಪಟ್ಟವರಲ್ಲಿ ಕಾವ್ಯವಿದೆ. ಮಹಿಳೆಯರು ಪುರುಷರಂತೆ ಕಾವ್ಯ ಬರೆದರೆ ಪ್ರಯೋಜನವಿಲ್ಲ. ಹೆಣ್ಣು ಮಕ್ಕಳು ಹೆಣ್ಣು ಭಾಷೆಯಲ್ಲಿ ಕವನ ಬರೆಯುವ ಮೂಲಕ ಹೊಸ ಲೋಕ ಸೃಷ್ಟಿಸಬೇಕು ಎಂದು ಹೇಳಿದರು.
ನುಡಿಕಾವ್ಯದಲ್ಲಿ ಟಿ.ಕೆ. ದಯಾನಂದ ಆಶಯ ಮಾತುಗಳ ನ್ನಾಡಿ, ಕವನ ವಾಚನ ಮಾಡಿದರು. ಕವಿಗೋಷ್ಠಿಯಲ್ಲಿ ಸುಧಾ ಚಿದಾನಂದಗೌಡ, ಶಂಕರ ಕೆಂಚನೂರು, ಹೇಮಲತಾ ವಸ್ತ್ರದ್, ಪ್ರಮೋದ ತುರವಿಹಾಳ್, ಭಾಸ್ಕರ್ ಪ್ರಸಾದ್, ಜಾನ್ ಶುಂಠಿಕೊಪ್ಪ, ಹರವು ಸ್ಫೂರ್ತಿ, ಮಮತಾ ಅರಸೀಕೆರೆ, ಎಸ್.ಕೆ.ಮಂಜುನಾಥ್, ರೇಣುಕಾ ರಮಾನಂದ, ಪಂಪಾರೆಡ್ಡಿ ಅರಳಹಳ್ಳಿ, ಸಂಜ್ಯೋತಿ ವಿ.ಕೆ., ಕೆ.ಬಿ.ವೀರಲಿಂಗನ ಗೌಡ್ರ, ವೀಣಾ ಬಡಿಗೇರ, ಜಸ್ಟ್ ಶಾಫಿ, ಕಳಕೇಶ ಗುಡ್ಲಾನೂರ್, ಮುದ್ದು ತೀರ್ಥಹಳ್ಳಿ, ಪ್ರವರ ಕೊಟ್ಟೂರು, ಶಶಿ ಸಂಪಳ್ಳಿ, ಚಾಂದ್ ಪಾಷಾ, ಉಚ್ಚಂಗಿ ಪ್ರಸಾದ್ ಕವನವಾಚನ ಮಾಡಿದರು.
ರಹೀನಾ ಕಾರ್ಯಕ್ರಮ ನಿರೂಪಿಸಿದರು.
ಅಭಿವೃದ್ಧಿಯ ಹೆಸರಿನ ಜನವಿರೋಧಿ ನೀತಿಯಿಂದ ಅಸಮಾನತೆ: ಚಂದ್ರಪೂಜಾರಿ
ಮಂಗಳೂರು, ಡಿ.20: ಅಭಿವೃದ್ಧಿಯ ಹೆಸ ರಿನ ಯೋಜನೆಗಳಲ್ಲಿ ಅಂತರ್ಗತವಾಗಿರುವ ಜನವಿರೋಧಿ ನೀತಿಯಿಂದ ದೇಶದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ವಿಸ್ತರಣೆಾಗುತ್ತಿದೆ ಎಂದು ಚಿಂತಕ ಚಂದ್ರಪೂಜಾರಿ ತಿಳಿಸಿದ್ದಾರೆ.
ಅವರು ಇಂದು ನಗರದ ಶಾಂತಿಕಿರಣ ಸಭಾಂಗಣದಲ್ಲಿ ಅಭಿಮತ ಸಂಘಟನೆಯ ವತಿಯಿಂದ ನಡೆದ ಮೂರನೆ ವರ್ಷದ ‘ಜನನುಡಿ-2015’ ಸಾಹಿತ್ಯ ಸಮ್ಮೇಳನದಲ್ಲಿ ‘ಅಭಿವೃದ್ಧಿಯ ಸವಾಲುಗಳು’ ವಿಚಾರಗೋ ಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್, ಬಿಜೆಪಿ ನೇತೃತ್ವದ ಸರಕಾರಗಳು 1990ರ ನಂತರದ ಹಮ್ಮಿಕೊಂಡ ಆರ್ಥಿಕ ನೀತಿಗಳು ದೇಶದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆಯನ್ನು ಇನ್ನಷ್ಟು ವಿಸ್ತರಿಸಿದೆ. ಆದರೆ ಈ ನಡುವೆ ಆಡಳಿತದ ಚುಕ್ಕಾಣಿ ಹಿಡಿದ ಪ್ರಾದೇಶಿಕ ಪಕ್ಷಗಳು ಸ್ಪಷ್ಟವಾದ ಆರ್ಥಿಕ ನೀತಿಯನ್ನು ಹೊಂದದೇ ಇದ್ದ ಕಾರಣ ಅವುಗಳಿಂದಲೂ ಹೊಸ ಚಿಂತನೆ ಗಳು ಮೂಡಿಬರಲಿಲ್ಲ. ದೇಶದ ತೆರಿಗೆ ನೀತಿ ಕೇವಲ ಶೇ.20ರಷ್ಟು ಜನರಿಗೆ ಪೂರಕವಾಗಿದೆ. ಬಹುಸಂಖ್ಯಾತ ಜನರ ಪರವಾದ ತೆರಿಗೆ ನೀತಿ ಇನ್ನೂ ಜಾರಿಗೆ ಬಂದಿಲ್ಲ. ಯುಪಿಎ ಸರಕಾರ ಹಂಗಾಮಿ ನೌಕರರ ನೇಮಕಾತಿಗೆ ಹೆಚ್ಚಿನ ಆದ್ಯತೆ ನೀಡಿತ್ತು. ಎನ್ಡಿಎ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಇದೇ ರೀತಿಯ ಹಾಗೂ ಇದಕ್ಕಿಂತಲೂ ಹೆಚ್ಚಿನ ಜನವಿರೋಧಿ ನೀತಿಗೆ ಮುಂದಾಯಿತು. ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಶೇ.30- 40ರಷ್ಟು ಕಾರ್ಮಿಕರನ್ನು ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯ ಗಳಿಂದ ವಂಚಿತರನ್ನಾಗಿ ಮಾಡಿತು. ಇತ್ತೀಚಿನ ಭೂಸ್ವಾಧೀನ ತಿದ್ದುಪಡಿ ಮಸೂದೆ ಕೃಷಿಕ ರಿಗೆ ಪೂರಕವಾಗಿಲ್ಲ ಎಂದು ಚಂದ್ರ ಪೂಜಾರಿ ವಿವರಿಸಿದರು. ದೇಶದ ಬಹುತೇಕ ಅಭಿವೃದ್ಧಿ ಯೋಜನೆ ಗಳು ತಳ ಸಮುದಾಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡಿದ್ದು, ಅವರ ಬದುಕಿನ ಆರೋಗ್ಯಕರ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದು ವಿಚಾರ ಮಂಡಿಸಿದ ಡಾ.ಆರ್.ಸುನಂದಮ್ಮ ತಿಳಿಸಿದ್ದಾರೆ.
ಅಭಿವೃದ್ಧಿ ಯೋಜನೆಗಳು ಅನುಷ್ಠಾನ ಗೊಂಡ ಪ್ರದೇಶದ ಮಹಿಳೆಯರ ಸ್ಥಿತಿಗತಿ ಉತ್ತಮವಾಗಿಲ್ಲ. ಅಪೌಷ್ಟಿಕತೆಯಿಂದ ಬದುಕುತ್ತಿರುವವರು, ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆಯಿಂದ ಬಳಲುತ್ತಿ ರುವವರ ಸಂಖ್ಯೆ ಹೆಚ್ಚಿದೆ. ಅಭಿವೃದ್ಧಿ ಯೋಜನೆಗಳ ಹಿಂದೆ ಈ ರೀತಿಯ ಅಂತರ್ ಸಂಬಂಧಗಳು ತಳುಕು ಹಾಕಿಕೊಂಡಿವೆ ಎಂದು ಸುನಂದಮ್ಮ ವಿವರಿಸಿದರು.
ಡಾ.ಎಚ್.ವಿ.ವಾಸು ಮಾತನಾಡಿ, ನಮ್ಮ ನಡುವೆ ಬೆಳೆಯುತ್ತಿರುವ ಸಾಮ್ರಾಜ್ಯಶಾಹಿ ಜಾಗತೀಕರಣಕ್ಕೆ ದೂರದೃಷ್ಟಿಯ ಚಿಂತನೆ ಹೊಂದಿರುವ ಪರ್ಯಾಯ ರಾಜಕಾರಣ ಬೇಕಾಗಿದೆ. ಭೂಸ್ವಾಧೀನ ಮಸೂದೆಯ ಉದ್ದೇಶ ರೈತರಿಗೆ ಕೋಲ್ಡ್ ಸ್ಟೋರೇಜ್ ಮಾಡಲು ಭೂಮಿ ನೀಡುವುದಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ವಿವರಣೆ ನೀಡುತ್ತಾರೆ. ಆದರೆ ದೇಶದಲ್ಲಿ ಈಗಾಗಲೆ ಬೃಹತ್ ಪ್ರಮಾಣದ ಕೋಲ್ಡ್ ಸ್ಟೋರೇಜ್ ಹೊಂದಿರುವ ಅದಾನಿಗೆ ಇನ್ನಷ್ಟು ಸಹಾಯ ಮಾಡಲು ಈ ಮಸೂದೆ ಸಹಕಾರಿಯಾಗಲಿದೆ. ವೈಜ್ಞಾನಿಕವಾದ ಅಭಿವೃದ್ಧಿಯ ಭಾಷೆ, ವಿಚಾರ, ಪರಿಶೀ ಲನೆಯ ಪರ್ಯಾಯ ಮಾರ್ಗಗಳ ಅಗತ್ಯವಿದೆ ಎಂದು ತಿಳಿಸಿದರು.
ಮಯೂರಿ ಕಾರ್ಯಕ್ರಮ ನಿರೂಪಿ ಸಿದರು.







