ಆರ್ಟಿಇ ಮರು ಪರಿಶೀಲನೆ ಅಗತ್ಯ: ಬರಗೂರು
ಖಾಸಗಿ ಶಾಲೆಗಳನ್ನು ನಿಯಂತ್ರಿಸಬೇಕಿರುವ ಸರಕಾರವೇ ಅವುಗಳಿಗೆ ಕೋಟ್ಯಂತರ ರೂ. ಹಣ ನೀಡಿ ಬಡ ಮಕ್ಕಳಿಗೆ ಶಿಕ್ಷಣ ಕೊಡಿಸುವ ‘ಶಿಕ್ಷಣ ಹಕ್ಕು ಕಾಯ್ದೆ’ (ಆರ್ಟಿಇ) ಮರು ಪರಿಶೀಲನೆ ಅಥವಾ ರದ್ದುಪಡಿಸುವುದು ಸೂಕ್ತ ಎಂದು ಕರ್ನಾಟಕ ಪಠ್ಯ-ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ನಾಡೋಜ ಪ್ರೊ. ಬರಗೂರು ರಾಮಚಂದ್ರ ಅಭಿಪ್ರಾಯ ಪಟ್ಟಿದ್ದಾರೆ.

ಖಾಸಗಿ ಶಾಲೆಗಳನ್ನು ನಿಯಂತ್ರಿಸಬೇಕಿರುವ ಸರಕಾರವೇ ಅವುಗಳಿಗೆ ಕೋಟ್ಯಂತರ ರೂ. ಹಣ ನೀಡಿ ಬಡ ಮಕ್ಕಳಿಗೆ ಶಿಕ್ಷಣ ಕೊಡಿಸುವ ‘ಶಿಕ್ಷಣ ಹಕ್ಕು ಕಾಯ್ದೆ’ (ಆರ್ಟಿಇ) ಮರು ಪರಿಶೀಲನೆ ಅಥವಾ ರದ್ದುಪಡಿಸುವುದು ಸೂಕ್ತ ಎಂದು ಕರ್ನಾಟಕ ಪಠ್ಯ-ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ನಾಡೋಜ ಪ್ರೊ. ಬರಗೂರು ರಾಮಚಂದ್ರ ಅಭಿಪ್ರಾಯ ಪಟ್ಟಿದ್ದಾರೆ.
ರವಿವಾರ ಇಲ್ಲಿನ ಕೆಎಎಸ್ ಅಧಿಕಾರಿಗಳ ಸಭಾಂಗಣದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಏರ್ಪಡಿಸಿದ್ದ ‘ವೈಜ್ಞಾನಿಕ-ಪ್ರಜಾತಾಂತ್ರಿಕ ತತ್ವಗಳ ಆಧಾರದ ಮೇಲೆ ಪಠ್ಯ-ಪುಸ್ತಕಗಳ ರಚನೆ’ ಕುರಿತ ಶೈಕ್ಷಣಿಕ ಸಂವಾದ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ತಾನು ನಡೆಸುವ ಶಾಲೆಗಳ ಮೇಲೆ ನಂಬಿಕೆ ಕಳೆದುಕೊಂಡಿದೆ ಎಂದರು.
ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ)ಯಡಿ ಖಾಸಗಿ ಶಾಲೆಗಳಿಗೆ ಬಡ ಮಕ್ಕಳನ್ನು ಸೇರಿಸಲು ವಾರ್ಷಿಕ 165 ಕೋಟಿ ರೂ.ಗಳನ್ನು ಸರಕಾರ ನೀಡುತ್ತಿದ್ದು, ಇದೇ ಮೊತ್ತವನ್ನು ಬಳಸಿ ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಪಡಿಸಿದರೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಹೇಳಿದರು.
ಯುಪಿಎ ಸರಕಾರ ಆರ್ಟಿಇ ಜಾರಿಗೆ ತಂದಿದ್ದು, ಕೇಂದ್ರದ ಕಾಯ್ದೆ ಎಂಬ ಕಾರಣಕ್ಕೆ ರಾಜ್ಯ ಸರಕಾರಗಳು ಅದನ್ನು ಅನುಸರಿಸುತ್ತಿವೆ ಎಂದ ಅವರು, ಕಾಯ್ದೆಯಲ್ಲಿನ ಲೋಪದೋಷಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆಂದೇನೂ ಇಲ್ಲ. ಆದುದರಿಂದ ಕೂಡಲೇ ಈ ಕಾಯ್ದೆ ಮರು ಪರಿಶೀಲನೆ ಆಗಬೇಕು ಅಥವಾ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಮುಕ್ತ ಆರ್ಥಿಕ ನೀತಿ ಎಂದು ಎಲ್ಲದರಲ್ಲೂ ಉತ್ಪಾದನೆ ಬಯಸುವುದು, ಅನುತ್ಪಾದಕ ಕ್ಷೇತ್ರವೆಂದು ನಿರ್ಲಕ್ಷ ತಾಳುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಶಿಕ್ಷಣ ಕ್ಷೇತ್ರ ದೇಶಕ್ಕೆ ಅಕ್ಷರ ಜ್ಞಾನಿಗಳನ್ನು ನೀಡುತ್ತದೆ ಎಂಬುದನ್ನು ಮರೆಯಬಾರದು ಎಂದು ಸಲಹೆ ಮಾಡಿದರು. ಜಾಗತೀಕರಣದ ಪರಿಣಾಮ ನಮ್ಮ ದೇಶದಲ್ಲಿ ಶಿಕ್ಷಣ ಮಾರಾಟದ ಸರಕಾಗಿದೆ. ಒಂದೇ ವಯಸ್ಸಿನ ಮಕ್ಕಳು ಸರಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ಖಾಸಗಿ ಶಾಲೆಗಳಲ್ಲಿ ಬೇರೆ-ಬೇರೆ ಪಠ್ಯ ವಿಷಯಗಳನ್ನು ಕಲಿಯುತ್ತವೆ. ಇದರಿಂದ ಮಕ್ಕಳಲ್ಲಿ ತಾರತಮ್ಯ ಉಂಟಾಗಿದೆ ಎಂದರು.
ಬಹುತ್ವ ಅಗತ್ಯ: ನಂಬಿಕೆ, ಧರ್ಮ, ಸಿದ್ಧಾಂತಗಳ ಆಧಾರದಲ್ಲಿ ಪಠ್ಯ-ಪುಸ್ತಕ ಪರಿಷ್ಕರಣೆ ಸರಿಯಲ್ಲ ಎಂದ ಅವರು, ಸಂವಿದಾನದ ಆಶಯಗಳಾದ ಲಿಂಗ ತಾರತಮ್ಯ ನಿವಾರಣೆ, ಸಮಾನತೆ, ವೈಜ್ಞಾನಿಕ ಮನೋಭಾವ, ಸಾಮಾಜಿಕ ನ್ಯಾಯ ಹಾಗೂ ಬಹು ಸಮಾಜತ್ವದ ಆಧಾರದಲ್ಲಿ ಪಠ್ಯ-ಪುಸ್ತಕ ರಚನೆ ಆಗಬೇಕು ಎಂದು ಹೇಳಿದರು.
ಸೆಮಿಸ್ಟರ್ ಪದ್ಧತಿ ಸರಿಯಲ್ಲ, ವಾರ್ಷಿಕ ಪದ್ಧತಿಯೇ ಸೂಕ್ತ ಎಂಬುದನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದೇನೆ ಎಂದ ಅವರು, ಸ್ಥಳೀಯ ವಿಷಯಗಳನ್ನು ಆಧರಿಸಿ ಪಠ್ಯಕ್ರಮ ರಚಿಸಲಾಗಿದೆ. ಇದರಿಂದಾಗಿ ಬೆಳಗಾವಿ ಭಾಗದ ಪಠ್ಯದಲ್ಲಿ ಬಸವಣ್ಣನವರ ಬಗ್ಗೆ ಇದ್ದರೆ, ಇತರೆ ಭಾಗಗಳಲ್ಲಿ ಪಠ್ಯಗಳಲ್ಲಿ ಬಸವಣ್ಣನ ಪರಿಚಯವೇ ಇರುವುದಿಲ್ಲ. ಹೀಗಾಗಿ ಇದನ್ನು ರದ್ದು ಮಾಡಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ ಡಾ.ಷ.ಶೆಟ್ಟರ್, ಪ್ರಾಧ್ಯಾಪಕ ಡಾ.ಪೃಥ್ವಿ ದತ್ತ ಚಂದ್ರಶೋಭಿ, ಶಿಕ್ಷಣ ಉಳಿಸಿ ಸಮಿತಿ ಕಾರ್ಯದರ್ಶಿ ಕೆ.ಉಮಾ, ಪ್ರಾಣಿಶಾಸ್ತ್ರ ಉಪನ್ಯಾಸಕ ಡಾ. ಚಂದ್ರ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
♦♦♦
‘ಬಲಪಂಥೀಯರು ಅಧಿಕಾರಕ್ಕೇರಿದಾಗ ತಮ್ಮ ಸಿದ್ಧಾಂತಗಳನ್ನು ಪಠ್ಯ-ಪುಸ್ತಕಗಳಲ್ಲಿ ಹೇರುವ ಆತುರ ತೋರಿಸುತ್ತಾರೆ. ಆದರೆ, ಕಾಂಗ್ರೆಸ್ನವರಿಗೆ ಈ ಆತುರವಿಲ್ಲ. ಏಕೆಂದರೆ ಅವರಿಗೆ ಆ ಬಗ್ಗೆ ಅರಿವಿಲ್ಲ. ಮುಗ್ಧ ಮಕ್ಕಳಲ್ಲಿ ಹೊಸ ಆಲೋಚನೆಗಳನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಪಠ್ಯ-ಪುಸ್ತಕಗಳಿದ್ದರೆ ಹೆಚ್ಚು ಪರಿಣಾಮಕಾರಿ’
-ಡಾ.ಷ.ಶಟ್ಟರ್ ಇತಿಹಾಸ ತಜ್ಞ







