ರಿಕ್ಷಾ ಢಿಕ್ಕಿ: ಬೈಕ್ ಸವಾರ ಮೃತ್ಯು
ಮುಲ್ಕಿ, ಜ.4: ಇಲ್ಲಿಗೆ ಸಮೀಪದ ಕಾರ್ನಾಡು-ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಅಮೃತಾನಂದಮಯಿ ನಗರ ಕ್ರಾಸ್ ಬಳಿ ರಿಕ್ಷಾವೊಂದು ಬೈಕ್ಗೆ ಢಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ರವಿವಾರ ನಡೆದಿದೆ. ಮೃತ ವ್ಯಕ್ತಿಯನ್ನು ಮುಲ್ಕಿ ಕೆಎಸ್ ರಾವ್ ನಗರ ನಿವಾಸಿ ಮೂಲತ: ಬಿಜಾಪುರ ಜಿಲ್ಲೆಯ ಬಗಲೂರಿನ ಶಂಕರಲಿಂಗ (24) ಎಂದು ಗುರುತಿಸಲಾಗಿದೆ. ಕೆಎಸ್ ರಾವ್ ನಗರದ ತನ್ನ ಮನೆಯಿಂದ ಮುಲ್ಕಿ ಕಡೆಗೆ ಹೋಗುತ್ತಿದ್ದ ವೇಳೆ ಕಾರ್ನಾಡಿನಿಂದ ಕುದ್ಕಪಲ್ಲ ಅಮೃತಾನಂದಮಯಿ ನಗರಕ್ಕೆ ಹೋಗಲು ರಾಜ್ಯ ಹೆದ್ದಾರಿಯಿಂದ ರಿಕ್ಷಾವನ್ನು ಅದರ ಚಾಲಕ ಏಕಾಏಕಿ ಬಲಗಡೆ ತಿರುಗಿಸಿದ ವೇಳೆ ರಿಕ್ಷಾ ಬೈಕಿಗೆ ಢಿಕ್ಕಿ ಹೊಡೆದಿದೆ. ಅಪಘಾತದಿಂದ ತಲೆಗೆ ತೀವ್ರ ಗಾಯಗೊಂಡ ಶಂಕರಲಿಂಗರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಸಂಚಾರಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಮೃತ ಶಂಕರಲಿಂಗ ಮೂಲ್ಕಿ ಸರಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷ ಪದವಿಪೂರ್ವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಬಳಿಕ ಬೈಕಂಪಾಡಿಯಲ್ಲಿ ಕ್ಯಾಂಡಲ್ ಕಂಪೆನಿಯಲ್ಲಿ ಸೇರಿದ್ದರು.





