ಜ.30: ‘ಸಹಬಾಳ್ವೆಯ ಸಾಗರ’ ಕಾರ್ಯಕ್ರಮ
ಮಂಗಳೂರು, ಜ.4: ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ವತಿಯಿಂದ ಜ.30ರಂದು ನಗರದ ಪುರಭವನದಲ್ಲಿ ‘ಸಹಬಾಳ್ವೆಯ ಸಾಗರ’ ಎಂಬ ಸಾಂಸ್ಕೃತಿಕ ವೈವಿಧ್ಯ ರಾಷ್ಟ್ರೀಯ ಸಮಾವೇಶ ಆಯೋಜಿಸಲಾಗಿದೆ.
ಇದರ ಪೂರ್ವಭಾವಿ ಸಭೆಯು ಇತ್ತೀಚೆಗೆ ನಡೆದಿದ್ದು, ಈ ವೇಳೆ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ರಂಗಕರ್ಮಿ ಸದಾನಂದ ಸುವರ್ಣ, ಅಧ್ಯಕ್ಷರಾಗಿ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಪ್ರ. ಕಾರ್ಯದರ್ಶಿಯಾಗಿ ಉಮರ್ ಯು.ಎಚ್. ಮತ್ತು ಕೋಶಾಧಿಕಾರಿಯಾಗಿ ಸುರೇಶ್ ಭಟ್ ಬಾಕ್ರಬೈಲ್ರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಗಾಂಧಿಹತ್ಯೆಯಾದ ದಿನವಾದ ಜ.30ರಂದು ಈ ಕಾರ್ಯಕ್ರಮದಲ್ಲಿ ಸೂಫಿ, ವಚನ, ಯಕ್ಷಗಾನ, ಬ್ಯಾರಿ ದಫ್ ಹಾಡುಗಳು, ಧಾರ್ಮಿಕ ಸಹಬಾಳ್ವೆ, ವೈಚಾರಿಕ ವಿಚಾರಧಾರೆಗಳನ್ನು ಒಳಗೊಂಡಿರುತ್ತವೆ. ಅಸಹಿಷ್ಣುತೆಯ ವಿರುದ್ಧ ಪ್ರಶಸ್ತಿ ಹಿಂದಿರುಗಿಸಿದ ಸಾಹಿತಿಗಳು, ಕಲಾವಿದರು, ಹೋರಾಟಗಾರರು, ರಾಜ್ಯ ಹಾಗೂ ಹೊರ ರಾಜ್ಯಗಳ ಸೌಹಾರ್ದಪ್ರಿಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಭೆಯಲ್ಲಿ ಕರ್ನಾಟಕ ಕೋಮುಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಉಪಸ್ಥಿತರಿದ್ದರು.





