ಹಿರೇಬಂಡಾಡಿ: ಗ್ರಾಪಂ ಆಡಳಿತದಲ್ಲಿ ಶಾಸಕರ, ಮಾಜಿ ಅಧ್ಯಕ್ಷರ ಹಸ್ತಕ್ಷೇಪ: ಗ್ರಾಪಂ ಅಧ್ಯಕ್ಷರ ಆರೋಪ
ಪುತ್ತೂರು, ಜ.6: ಬಸವ ವಸತಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡುವ ಪರಮಾಧಿಕಾರ ಸ್ಥಳೀಯ ಗ್ರಾಪಂ ಆಡಳಿತಕ್ಕಿದ್ದರೂ ಈ ಅಧಿಕಾರ ಕಸಿದುಕೊಳ್ಳಲು ಪುತ್ತೂರಿನ ಶಾಸಕರು ಹಾಗೂ ಹಿರೇಬಂಡಾಡಿಯ ಮಾಜಿ ಅಧ್ಯಕ್ಷರು ಯತ್ನಿಸುತ್ತಿದ್ದಾರೆ ಎಂದು ಹಿರೇಬಂಡಾಡಿ ಗ್ರಾಪಂ ಅಧ್ಯಕ್ಷ ಶೌಕತ್ ಅಲಿ ಆರೋಪಿಸಿದರು.
ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015-16ನೆ ಸಾಲಿನ ಬಸವ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಗ್ರಾಪಂ ಆಯ್ಕೆ ಮಾಡಿ ಮೂರು ತಿಂಗಳ ಹಿಂದೆ ತಾಪಂಗೆ ಕಳುಹಿಸಿ ಕೊಟ್ಟಿದ್ದೆವು. ಆದರೆ ತಾಲೂಕು ಸಮಿತಿಯ ಅಧ್ಯಕ್ಷರೂ ಆದ ಶಾಸಕಿ ಶಕುಂತಳಾ ಶೆಟ್ಟಿ ಇನ್ನೂ ಸಹಿ ಹಾಕಿಲ್ಲ. ಬದಲಾಗಿ ತಾಲೂಕು ಪಂಚಾಯತ್ನಿಂದ ಬೇರೆಯೇ ಪಟ್ಟಿ ನಮಗೆ ಕಳುಹಿಸಿಕೊಡಲಾಗಿದೆ. ಅರ್ಜಿ ಸಲ್ಲಿಸಿದ 73 ಮಂದಿಯ ಪೈಕಿ 19 ಮಂದಿಯನ್ನು ಮಾತ್ರ ಆಯ್ಕೆ ಮಾಡಲು ಅವಕಾಶವಿರುವುದರಿಂದ 19 ಮಂದಿಯನ್ನು ಆಯ್ಕೆ ಮಾಡಿ ಕಳುಹಿಸಿದ್ದು, ಈ ಫಲಾನುಭವಿಗಳ ಜಿಪಿಎಸ್ ಕೂಡ ಮಾಡಲಾಗಿದೆ. ಹೆಚ್ಚಿನವರು ಮನೆ ನಿರ್ಮಾಣಕ್ಕೆ ಪಂಚಾಂಗ ಹಾಕಿದ್ದಾರೆ. ಆದರೆ ಶಾಸಕರ ಸಹಿ ಬೀಳದೆ ಹಣ ಬಿಡುಗಡೆಯಾಗಿಲ್ಲ. ನಾವು ಆಯ್ಕೆ ಮಾಡಿ ಕಳುಹಿಸಿದ 19 ಮಂದಿ ಫಲಾನುಭವಿಗಳ ಪಟ್ಟಿಗೂ ಸಹಿ ಬೀಳುವ ತನಕ ಹೋರಾಟ ನಡೆಸುತ್ತೇವೆ. ಅಗತ್ಯ ಬಿದ್ದಲ್ಲಿ ನ್ಯಾಯಾಲಯದ ಮೆಟ್ಟಲೇರಲೂ ಸಿದ್ಧರಿದ್ದೇವೆ ಎಂದರು. ಫಲಾನುಭವಿಗಳ ಆಯ್ಕೆಯ ಅಧಿಕಾರವಿರುವುದು ಗ್ರಾಪಂ ಆಡಳಿತಕ್ಕೆ. ಅದರಂತೆ ನಾವು ಫಲಾನುಭವಿಗಳ ಆಯ್ಕೆ ಮಾಡಿದ್ದೇವೆ. ಈಗ ತಾಪಂ ಕಚೇರಿಯಿಂದ ಬಂದಿರುವ ಪಟ್ಟಿಯಲ್ಲಿ ಪೆನ್ನಲ್ಲಿ ಗುರುತು ಮಾಡಲಾದ 19 ಫಲಾನುಭವಿಗಳ ಪೈಕಿ 5 ಮಾತ್ರ ನಾವು ಆಯ್ಕೆ ಮಾಡಿರುವುದಾಗಿದೆ. ಉಳಿದ 9 ಹೊಸತು. ಇನ್ನುಳಿದ 5 ಪ್ರಕ್ರಿಯೆ ಹಂತದಲ್ಲಿದೆ ಎಂದ ಅವರು, 9 ಫಲಾನುಭವಿಗಳ ಹೆಸರುಗಳನ್ನು ಗುರುತು ಮಾಡಿದವರು ಯಾರು ಎಂಬ ಪ್ರಶ್ನೆಗೆ ಶಾಸಕರು ಉತ್ತರಿಸಬೇಕು. ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರ ಗ್ರಾಪಂಗಿಲ್ಲವೇ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಫಲಾನುಭವಿಗಳ ಪಟ್ಟಿಯಲ್ಲಿ ನಾವೇನೂ ತಾರತಮ್ಯ ನಡೆಸಿಲ್ಲ. ಅರ್ಹರನ್ನೇ ಆಯ್ಕೆ ಮಾಡಿದ್ದೇವೆ. ಗ್ರಾಪಂಗಿರುವ ಅಧಿಕಾರ ಕಸಿದುಕೊಳ್ಳಲು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಗ್ರಾಪಂ ಸಭೆಯಲ್ಲಿ ಚರ್ಚಿಸಿ ತಾಪಂ ಇಒ ವಿರುದ್ಧ ಜಿಪಂ ಸಿಇಒಗೆ ದೂರು ನೀಡಲು ನಿರ್ಣಯ ಅಂಗೀಕರಿಸಿದ್ದೇವೆ. ಅಗತ್ಯ ಬಿದ್ದರೆ ನ್ಯಾಯಾಲಯಕ್ಕೂ ಹೋಗಲೂ ಸಿದ್ಧರಿದ್ದೇವೆ ಎಂದ ಶೌಕತ್ ಅಲಿ, ತಾಪಂನಿಂದ ಬಂದಿರುವ ಪಟ್ಟಿಯಲ್ಲಿ ಹಿರೇಬಂಡಾಡಿ ಗ್ರಾಪಂ ಮಾಜಿ ಅಧ್ಯಕ್ಷೆ ಗೀತಾರ ಸಹಿ ಇದೆ. ಈ ಬಗ್ಗೆ ಶಾಸಕಿ ಉತ್ತರಿಸಬೇಕು ಎಂದು ಆಗ್ರಹಿಸಿದರಲ್ಲದೆ ಗ್ರಾಪಂ ಆಯ್ಕೆ ಮಾಡಿರುವ 19 ಫಲಾನುಭವಿಗಳ ಪಟ್ಟಿಗೆ ಸಹಿ ಬೀಳುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.
ಗ್ರಾಪಂ ಸದಸ್ಯರಾದ ಸೋಮೇಶ್ ಕೆ., ಮುದ್ದ ಎಚ್., ಚಂದ್ರಾವತಿ ಎನ್., ಸದಾನಂದ, ಮಂಜುಳಾ, ವಿಶ್ವನಾಥ, ನಿತಿನ್ ತಾರಿತ್ತಡಿ ಉಪಸ್ಥಿತರಿದ್ದರು.







