ಸಂವಿಧಾನದ ಪರಿಷ್ಕರಣೆ ಬಿಜೆಪಿ ಅಜೆಂಡಾ:ಬಂಜಗೆರೆ ಜಯಪ್ರಕಾಶ್

ಮಂಗಳೂರು,ಜ.8:ಸಂವಿಧಾನವನ್ನು ಪರಿಷ್ಕರಣೆ ಮಾಡುವುದು ಸಂಘಪರಿವಾರದ ನಿಜವಾದ ಅಜೆಂಡಾ. ಸಂವಿಧಾನದ ವಿರೋಧಿಯಾಗಿರುವ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ. ಫ್ಯಾಶಿಸಂ ಬಿಜೆಪಿ ಪಕ್ಷ ದೇಶದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಸಿ ಶಾಂತಿ ಕಾಪಾಡುವ ಹೆಸರಿನಲ್ಲಿ ದೇಶದಲ್ಲಿ ಮಿಲಿಟರಿ ಆಡಳಿತವನ್ನು ತರಲು ಹುನ್ನಾರ ನಡೆಸುತ್ತಿದೆ . ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಹಿಟ್ಲರ್, ಮುಸೋಲಿನಿಯ ಪುನಾರವತಾರ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಹೇಳಿದರು.
ನಗರದ ಪುರಭವನದಲ್ಲಿ ಇಂದು ನಡೆದ ಪ್ರಸ್ತುತ ಪಾಕ್ಷಿಕದ ಹತ್ತರ ವರುಷ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಮತ್ತು ಐದು ಕೃತಿಗಳ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಪ್ರಸಕ್ತ ಸಾಂಸ್ಕೃತಿಕ ವೌಲ್ಯದ ಹೆಸರಿನಲ್ಲಿ ವೌಢ್ಯಾಚರಣೆಗೆ ಬೆಂಬಲ ನೀಡಲಾಗುತ್ತದೆ. ವೌಢ್ಯಾಚಾರಣೆಯನ್ನು ವಿರೋಧಿಸುವವರು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತದೆ. ವೌಢ್ಯವನ್ನು ಬೆಂಬಲಿಸುವವರನ್ನು ಸಂಸ್ಕೃತಿರಕ್ಷಕರು ಎಂದು ಗೌರವಿಸಲಾಗುತ್ತಿದೆ. ನಂಬಿಕೆಯ ಹೆಸರಿನಲ್ಲಿ ಕೆಳವರ್ಗದವರನ್ನು ನಿರಂತರ ಶೋಷಣೆ ಮಾಡಲಾಗುತ್ತದೆ . ಯಾವುದೆ ಒಂದು ಆಚರಣೆಯು ಯಾವುದೆ ಸಮುದಾಯಕ್ಕೆ ಅವಮಾನ ಎಂದು ಕಂಡರೆ ಅದನ್ನು ನಿಲ್ಲಿಸಬೇಕು.ಮುಜರಾಯಿ ದೇವಸ್ಥಾನಗಳಲ್ಲಿ ನಡೆಯುವ ಮಡೆಸ್ನಾನ, ಪಂಕ್ತಿಭೇಧವನ್ನು ಕೊನೆಗಾಣಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಡಾ. ಸಿ ಎಸ್ ದ್ವಾರಕನಾಥ್ ಪ್ರಸ್ತುತ ರಾಜಕೀಯವೆಂದರೆ ಜಾತಿಗಳ ಸಮೀಕರಣ, ಸಂಪನ್ಮೂಲಗಳ ಕ್ರೋಡಿಕರಣವೆಂಬಂತಾಗಿದೆ. ಆದುದರಿಂದ ಕೆಳವರ್ಗದ ಜನರ ಕೈಗೆ ಅಧಿಕಾರ ಸಿಗಬೇಕು. ಮೇಲ್ವರ್ಗದ ಕೈಯಲ್ಲಿರುವ ಅಧಿಕಾರವನ್ನು ತಪ್ಪಿಸಬೇಕಾಗಿದೆ ಎಂದರು.
ಅಲ್ಪಸಂಖ್ಯಾತರ, ದಲಿತರ, ಹಿಂದುಳಿದ ವರ್ಗದವರ ಸಮಸ್ಯೆಗಳು ಮಾಧ್ಯಮ ಮತ್ತು ರಾಜಕಾರಣಕ್ಕೆ ಅರ್ಥವಾಗುತ್ತಿಲ್ಲ. ಶೇಕಡ 15 ರಷ್ಟು ಜನರಿಗೆ ಬೇಕಿರುವ ಸರಕನ್ನು ಮಾಧ್ಯಮಗಳು ಎಲ್ಲರಿಗೂ ಉಣಬಡಿಸುತ್ತಿದೆ. ಇಂದಿನ ಮಾಧ್ಯಮಗಳು ಶೋಷಿತರ ಪರವಾದ ಮಾಧ್ಯಮವಾಗಿ ಉಳಿದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ದಲಿರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗದವರಿಗೆ ತಮ್ಮ ಶತ್ರುಗಳ್ಯಾರು, ಸ್ನೇಹಿತರ್ಯಾರು ಎಂಬುದೆ ಗೊತ್ತಿಲ್ಲ. ಅಲ್ಪಸಂಖ್ಯಾತರು ದಲಿತರೊಂದಿಗಿದ್ದರೆ ಅಲ್ಪಸಂಖ್ಯಾತರು ಸುರಕ್ಷಿತವಾಗಿರುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬಂಡವಾಳ ಹೂಡಿಕೆ ಮಾಡುವವರಿಗೆ ನಡೆಲಾಗುವ ಜಿಮ್ ಸಮಾವೇಶದಲ್ಲಿ ಉತ್ತರಪ್ರದೇಶದಲ್ಲಿ ಮಾಯವತಿ ಸರಕಾರದಲಿ ಮಾಡಿದ ಮೀಸಲಾತಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಸ್ತುತ ಪಾಕ್ಷಿಕದ ಪ್ರಧಾನ ಸಂಪಾದಕ ಕೆ ಎಂ ಶರೀಫ್ ಮಾತನಾಡಿ ಪ್ರಸ್ತುತ ಜಗತ್ತಿನ ಭಯೋತ್ಪಾದನೆಗಿಂತ ಭಯೋತ್ಪಾದನೆಯ ವರದಿಗಳು ಭೀಕರವಾಗಿ ಬರುತ್ತಿದೆ. ಇಂದಿನ ಮಾಧ್ಯಮಗಳು ಇಸ್ಲಾಂ ಫೋಬಿಯಾವನ್ನು ಸೃಷ್ಟಿಸಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವುದು ನಮ್ಮ ಮುಂದಿರುವ ಸವಾಲು ಎಂದು ಹೇಳಿದರು.
ಇಂದಿನ ಪಠ್ಯಪುಸ್ತಕಗಳಲ್ಲಿಯೂ ಮುಸ್ಲಿಮರ ಬಗ್ಗೆ ಭೀತಿಯನ್ನು ಸೃಷ್ಟಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ವಿವಿಧ ವಿಭಾಗಕ್ಕೆ ಮುಖ್ಯಸ್ಥರಿದ್ದರೆ ಬಡವರ ಬಗ್ಗೆ ಬರೆಯಲು ಯಾವುದೆ ವಿಭಾಗವಿಲ್ಲ. ದಲಿತ, ಅಲ್ಪಸಂಖ್ಯಾತರಿಗೆ ಮೀಸಲಾಗಿರುವ ಕಾಲಂಗಳು ಇಲ್ಲ. ಪತ್ರಿಕೆಗಳು ಕೇವಲ ಮೇಲ್ವರ್ಗದವರಿಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಜೆ ಆರ್ ಲೋಬೋ, ಮೈಸೂರು ವಿವಿಯ ಮಾಧ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಮಹೇಶ್ ಚಂದ್ರ ಗುರು, ಪಾಪ್ಯುಲರ್ ಫ್ರಂಟ್ ಆಫ ಇಂಡಿಯಾದ ರಾಜ್ಯ ಪ್ರ.ಕಾರ್ಯದರ್ಶಿ ಯಾಸೀರ್ ಹಸನ್, ನ್ಯಾಷನಲ್ ವಿಮೆನ್ಸ್ ಫ್ರಂಟ್ ಅಧ್ಯಕ್ಷೆ ಶಾಹಿದಾ ಅಸ್ಲಮ್, ನ್ಯಾಷನಲ್ ವಿಮೆನ್ಸ್ ಫ್ರಂಟ್ , ರಾಜ್ಯ ಅಧ್ಯಕ್ಷೆ ಫಾತಿಮಾ ನಸೀಮಾ, ಎಂಪವರ್ ಇಂಡಿಯಾ ಪೌಂಡೇಶನ್ ಅಧ್ಯಕ್ಷ ಇ ಎಂ ಅಬ್ದುರ್ರಹ್ಮಾನ್,
ಎಸ್ ಡಿ ಪಿ ಐ ಮುಖಂಡ ದೇವನೂರು ಪುಟ್ನಂಜಯ್ಯ, ಬಾರುಕೋಲು ಪಾಕ್ಷಿಕ ಪತ್ರಿಕೆ ಸಂಪಾದಕ ರಂಗಸ್ವಾಮಿ, ಎಸ್.ಬಿ. ದಾರಿಮಿ, ಸನ್ಮಾರ್ಗ ಪತ್ರಿಕೆ ಸಂಪಾದಕ ಎ.ಕೆ.ಕುಕ್ಕಿಲ, ಪವಿತ್ರ ಸಂದೇಶ ಪತ್ರಿಕೆ ಸಂಪಾದಕ ಎಚ್ ಎ ಮುಹಮ್ಮದ್ ಉಪಸ್ಥಿತರಿದ್ದರು.
ಐದು ಕೃತಿಗಳ ಬಿಡುಗಡೆ
ಕಾರ್ಯಕ್ರಮದಲ್ಲಿ ಸ್ತುತಿ ಪಬ್ಲಿಕೇಶನ್ ಪ್ರಕಟಿಸಿದ ಅರ್ಶದ್ ಮುಹಮ್ಮದ್ ನದ್ವಿ ಬರೆದ 'ಉಲಮಾ ಹೋರಾಟಗಾರರು', ಎಸ್. ಎಂ. ಮುಶ್ರಫ್ ಬರೆದ 'ಕರ್ಕರೆಯನ್ನು ಕೊಂದವರ್ಯಾರು?', ಅಬ್ದುಲ್ ಹಮೀದ್ ಬರೆದ 'ಸತ್ಯವಿಶ್ವಾಸಿಯ ದಿನಚರಿ', ಇ.ಎಂ ಅಬ್ದುರ್ರಹ್ಮಾನ್ ಬರೆದ 'ಮುಸ್ಲಿಂ ಸಬಲೀಕರಣ' , ' ಎ. ಸಯಿದ್ ' ಬರೆದ ' ಅನ್ಪಾಲ್ 'ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.







