2019ರ ಮುನ್ನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆ
ಇಟಾ(ಉ.ಪ್ರ.),ಜ.8: ರಾಮ ಮಂದಿರವು ಪಕ್ಷದ ಅಜೆಂಡಾದಲ್ಲಿದೆ ಮತ್ತು 2019ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಅದು ನಿರ್ಮಾಣಗೊಳ್ಳಲಿದೆ ಎಂದು ಬಿಜೆಪಿಯ ವಿವಾದಾತ್ಮಕ ಸಂಸದ ಸಾಕ್ಷಿ ಮಹಾರಾಜ್ ಅವರು ಶುಕ್ರವಾರ ಇಲ್ಲಿ ಹೇಳಿದರು. ಅಯೋಧ್ಯೆಯಲ್ಲಿ ಶ್ರೀರಾಮನ ಪೂಜೆಗೆ ರಾಜೀವ್ ಗಾಂಧಿಯವರು ಅವಕಾಶ ನೀಡಿದಾಗಿನಿಂದ ಮಂದಿರದ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.
ರಾಮಜನ್ಮಭೂಮಿ-ಬಾಬರಿ ಮಸೀದಿಯ ಬೀಗಗಳನ್ನು ತೆರೆಯುವಂತೆ 1985ರಲ್ಲಿ ಆಗಿನ ಪ್ರಧಾನಿ ರಾಜೀವ ಗಾಂಧಿಯವರು ಆದೇಶಿಸಿದ್ದರು.
ಪ್ರತಿಯೊಬ್ಬರ ಸಹಕಾರದೊಂದಿಗೆ ವಿವಾದಿತ ನಿವೇಶನದಲ್ಲಿ ರಾಮಮಂದಿರವನ್ನು ನಿರ್ಮಿಸಬಹುದಾಗಿದೆ. ಸಂಸತ್ತಿನಲ್ಲಿ ಮಸೂದೆ ಅಂಗೀಕಾರದಂತಹ ಇತರ ಕೆಲವು ಮಾರ್ಗಗಳೂ ಇವೆ ಎಂದು ಸಾಕ್ಷಿ ಹೇಳಿದರು.
ನಾವು ಕುರ್ಆನ್ನ್ನು ಗೌರವಿಸುತ್ತೇವೆ,ಆದ್ದರಿಂದ ಮುಸ್ಲಿಮರು ಗೀತಾ,ರಾಮಾಯಣ ಮತ್ತು ಶ್ರೀರಾಮನನ್ನು ಗೌರವಿಸಬೇಕು. ನಾವು ಮಸೀದಿಗಳಿಗೆ ವಿರುದ್ಧವಾಗಿಲ್ಲ,ಹೀಗಾಗಿ ಮಂದಿರ ನಿರ್ಮಾಣದ ಬಗ್ಗೆ ಮುಸ್ಲಿಮರು ಅಸಮಾಧಾನಗೊಳ್ಳಬಾರದು ಎಂದರು.
Next Story