ಚುನಾವಣೆ ಬಹಿಷ್ಕರಿಸಲು ನಾಗರಿಕರ ನಿರ್ಧಾರ
ಸುಳ್ಯ, ಜ.9: ರಸ್ತೆ ಮತ್ತು ನೀರಿನ ಸಮಸ್ಯೆ ಮುಂದಿಟ್ಟು ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಯನ್ನು ಬಹಿಷ್ಕರಿಸಲು ಅರಂತೋಡು ಗ್ರಾಮದ ಒಂದನೆ ವಾರ್ಡ್ನ ಜನರು ನಿರ್ಧರಿಸಿದ್ದಾರೆ ಎಂದು ಗ್ರಾಮಸ್ಥರ ಪರವಾಗಿ ಜ್ಞಾನಪ್ರಕಾಶ್ ತಿಳಿಸಿದರು.
ಪಿಂಗಾರತೋಟ-ಕಟ್ಟಕೋಡಿ-ಕಳುಬೈಲು-ಅಡ್ಕಬಳೆ-ಬನ-ಬಾಜಿನಡ್ಕ 10.44 ಕಿ.ಮೀ. ರಸ್ತೆ ಅಭಿವೃದ್ಧಿಗೆ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿ 3.63 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕಳೆದ ಗ್ರಾಪಂ ಚುನಾವಣೆಯ ಸಂದರ್ಭ 1.2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಶಂಕುಸ್ಥಾಪನೆ ಮಾಡಲಾಗಿತ್ತು. ಜಿಪಂನಿಂದ 3 ಲಕ್ಷ ರೂ. ಅನುದಾನವನ್ನೂ ನೀಡಲಾಗಿದೆ. ಹಾಗಿದ್ದೂ ಕಾಮಗಾರಿ ಅರ್ಧದಲ್ಲೇ ಸ್ಥಗಿತವಾಗಿದೆ. ಪಿಂಗಾರತೋಟದಿಂದ ಕಲ್ಲುಮುಟ್ಲುವರೆಗೆ 2 ಕಿ.ಮೀ.ರಸ್ತೆ ಇನ್ನೂ ಡಾಮರೀಕರಣಗೊಂಡಿಲ್ಲ ಎಂದು ಅವರು ದೂರಿದರು.
ಬಿಳಿಯಾರು ಮಾಡದಕಾನ ರಸ್ತೆಗೆ 5 ವರ್ಷಗಳ ಹಿಂದೆ ಜಲ್ಲಿ ಹಾಕಲಾಗಿದ್ದರೂ ಡಾಮರೀಕರಣ ಮಾಡಿಲ್ಲ. ಮಾಡದಕಾನದಲ್ಲಿ ನೀರಿನ ಟ್ಯಾಂಕ್ ರಚನೆಗೊಂಡು 3 ವರ್ಷ ಕಳೆದರೂ ನೀರು ಸರಬರಾಜು ಆರಂಭಗೊಂಡಿಲ್ಲ. ನೀರು ಹಾಗೂ ರಸ್ತೆ ಸಮಸ್ಯೆಯನ್ನು ಪರಿಹರಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಜ್ಞಾನಪ್ರಕಾಶ್ ಹೇಳಿದರು.
ವಿಜಯಪ್ರಕಾಶ್ ಮೇರ್ಕಜೆ, ಚೌಕಾರು ಕಟ್ಟಕೋಡಿ, ಶಂಕರನಾರಾಯಣ ಕಟ್ಟಕೋಡಿ, ಮೋಹಿನಿ ಬಾಜಿನಡ್ಕ, ಮೀನಾಕ್ಷಿ ಬಾಜಿನಡ್ಕ ಉಪಸ್ಥಿತರಿದ್ದರು.





