ಕೃಷಿ-ತೋಟಗಾರಿಕಾ ಬೆಳೆ ಹಾನಿಗೆ ಪರಿಹಾರ: 25 ಜಿಲ್ಲೆಗಳಿಗೆ ಹಣ ಬಿಡುಗಡೆ

ಬೆಂಗಳೂರು, ಜ.10: ರಾಜ್ಯದಲ್ಲಿನ ಬರಪೀಡಿತ ಪ್ರದೇಶಗಳಲ್ಲಿ ಉಂಟಾದ ಬೆಳೆ ಹಾನಿಗೆ ಪರಿಹಾರ ಹಾಗೂ ಅಗತ್ಯ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಬಿಡುಗಡೆ ಮಾಡಿರುವ 1,540 ಕೋಟಿ ರೂ.ಗಳನ್ನು ಇಪ್ಪತ್ತೈದು ಜಿಲ್ಲೆಗಳಿಗೂ ಹಂಚಿಕೆ ಮಾಡಿ ಶನಿವಾರ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಬರದ ಹಿನ್ನೆಲೆಯಲ್ಲಿ ಹಾನಿಗೆ ಒಳಗಾಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಪರಿಹಾರ ನೀಡಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವ ರಾಜ್ಯ ಸರಕಾರ ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ರಾಜ್ಯದ ಬರ ಪೀಡಿತ ಇಪ್ಪತ್ತೈದು ಜಿಲ್ಲೆಗಳಿಗೂ ಅನುದಾನ ಬಿಡುಗಡೆ ಮಾಡಿದೆ.
ಕೇಂದ್ರದಿಂದ ಪ್ರಸ್ತುತ ಬಿಡುಗಡೆಯಾಗಿರುವ ಸಂಪೂರ್ಣ ಹಣವನ್ನು ಬೆಳೆ ಹಾನಿಗೆ ‘ಸಬ್ಸಿಡಿ’ ನೀಡಲು ಮಾತ್ರವೇ ಬಳಸಿಕೊಳ್ಳಬೇಕು. ಆಯಾ ತಾಲೂಕುಗಳ ತಹಶೀಲ್ದಾರರು ಬೆಳೆ ಹಾನಿಯಾದ ರೈತರ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್/ ಎನ್ಇಎಫ್ಟಿ ಮೂಲಕವೇ ಜಮಾ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಬೆಳೆ ಹಾನಿ ಸಬ್ಸಿಡಿಯನ್ನು ಕೇಂದ್ರ ಸರಕಾರದ ಮಾರ್ಗಸೂಚಿಯ ಅನ್ವಯವೇ ಅರ್ಹ ಫಲಾನುಭವಿಗಳಿಗೆ ನೀಡಬೇಕು. ಜಿಲ್ಲಾಧಿಕಾರಿಗಳು ಬೆಳೆ ಹಾನಿಯ ಶೇ.68ರಷ್ಟು ಮಾತ್ರ ಪರಿಹಾರ ನೀಡಬೇಕು. ಹಣ ಬಳಕೆಗೆ ಪ್ರಮಾಣಪತ್ರ ತಪ್ಪದೇ ಸಲ್ಲಿಸಬೇಕು ಎಂದು ಕಂದಾಯ ಇಲಾಖೆ ತಿಳಿಸಿದೆ.
2015-16ನೆ ಸಾಲಿನಲ್ಲಿ ರಾಜ್ಯದ 27ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಆವರಿಸಿದ್ದು, ಆ ಪೈಕಿ 28.88ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 1.88 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿದಂತೆ 30.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದ ಮಾರ್ಗಸೂಚಿಯಂತೆ ಒಟ್ಟು 2,278 ಕೋಟಿ ರೂ.ಬಿಡುಗಡೆ ಮಾಡುವಂತೆ ಕೋರಲಾಗಿತ್ತು ಎಂದು ತಿಳಿಸಲಾಗಿದೆ.
ಆದರೆ, ಇದೀಗ ಕೇಂದ್ರ ಸರಕಾರ ಕೃಷಿ ಬೆಳೆಹಾನಿಗೆ 1,388 ಕೋಟಿ ರೂ., ತೋಟಗಾರಿಕೆ ಬೆಳೆ ಹಾನಿಗೆ 136 ಕೋಟಿ ರೂ., ಪಶು ಸಂಗೋಪನೆಗೆ 2.92 ಕೋಟಿ ರೂ. ಹಾಗೂ ಕುಡಿಯುವ ನೀರಿಗೆ 11.97 ಕೋಟಿ ರೂ. ಸೇರಿದಂತೆ ಒಟ್ಟು 1,540.20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಬಳ್ಳಾರಿ-46.50 ಕೋಟಿ ರೂ., ಕೊಪ್ಪಳ-63.75 ಕೋಟಿ ರೂ., ರಾಯಚೂರು-35.40 ಕೋಟಿ ರೂ., ಕಲಬುರ್ಗಿ-197.55 ಕೋಟಿ ರೂ., ಯಾದಗಿರಿ- 75.35 ಕೋಟಿ ರೂ., ಬೀದರ್- 89.81 ಕೋಟಿ ರೂ., ಬೆಳಗಾವಿ- 241.50 ಕೋಟಿ ರೂ., ಬಾಗಲಕೋಟೆ-37.61 ಕೋಟಿ ರೂ., ವಿಜಯಪುರ- 115.49 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಗದಗ-69.29 ಕೋಟಿ ರೂ., ಹಾವೇರಿ- 26.70 ಕೋಟಿ ರೂ., ಧಾರವಾಡ- 94.81 ಕೋಟಿ ರೂ., ಬೆಂಗಳೂರು ಗ್ರಾಮಾಂತರ-3.42 ಕೋಟಿ ರೂ., ಕೋಲಾರ- 48.06 ಕೋಟಿ ರೂ., ಚಿಕ್ಕಬಳ್ಳಾಪುರ-44.46 ಕೋಟಿ ರೂ., ತುಮಕೂರು-72.49 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ.
ಚಿತ್ರದುರ್ಗ-58.33 ಕೋಟಿ ರೂ., ದಾವಣಗೆರೆ-53.37 ಕೋಟಿ ರೂ., ಮಂಡ್ಯ-28.48 ಕೋಟಿ ರೂ., ಹಾಸನ-50.67 ಕೋಟಿ ರೂ., ಚಿಕ್ಕಮಗಳೂರು-21.11 ಕೋಟಿ ರೂ.,ಶಿವಮೊಗ್ಗ-1.67ಕೋಟಿ ರೂ., ಉತ್ತರ ಕನ್ನಡ-11.10 ಕೋಟಿ ರೂ.ಗಳು ಸೇರಿದಂತೆ ಒಟ್ಟು 1,540 ರೂ.ಗಳನ್ನು ಹಂಚಿಕೆ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.







