ಅಲ್ಲಲ್ಲಿ ಇಂದು...
ಡಿಸಿ ಕಚೇರಿಯಲ್ಲಿ ಸಭೆ
ಕಾಸರಗೋಡು, ಜ.10: ಗಣರಾಜ್ಯೋತ್ಸವ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಜ.11ರಂದು ಅಪರಾಹ್ನ 3 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನಗರಾಭಿವೃದ್ಧಿ ಸಚಿವರ ಜಿಲ್ಲಾ ಪ್ರವಾಸ
ಮಂಗಳೂರು, ಜ.10: ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಜ.11ರಂದು ಬೆಳಗ್ಗೆ 9:30ಕ್ಕೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್ ವಲಯದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ/ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜ.11ಕ್ಕೆ ದ.ಕ ಜಿಲ್ಲೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ/ಬಾಕಿ ಉಳಿದಿರುವ ಪ್ರಸ್ತಾವನೆ ಕುರಿತಂತೆ ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿರುವ ಸಭೆಯಲ್ಲಿ ಭಾಗವಹಿಸುವರು.ಸಂಜೆ 4ಕ್ಕೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ/ಬಾಕಿ ಉಳಿದಿರುವ ಪ್ರಸ್ತಾವನೆ ಕುರಿತಂತೆ ಚರ್ಚಿಸಲು ಏರ್ಪಡಿಸಿರುವ ಸಭೆಯಲ್ಲಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
ಆರ್ಟಿಐ ಕಾರ್ಯಾಗಾರ
ಮಂಗಳೂರು, ಜ.10: ಮಾಹಿತಿ ಹಕ್ಕು ಕಾಯ್ದೆ-2015ಕ್ಕೆ ಸಂಬಂಧಿಸಿದಂತೆ ರಾಜ್ಯ ಮಾಹಿತಿ ಆಯುಕ್ತ ಡಾ.ಶೇಖರ ಡಿ. ಉಪಸ್ಥಿತಿಯಲ್ಲಿ ಜ.11ರಂದು ಅಪರಾಹ್ನ 3 ಗಂಟೆಗೆ ದ.ಕ. ಜಿಪಂ ಕಚೇರಿಯ ನೇತ್ರಾವತಿ ಸಭಾಂಗಣದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ದಲಿತ ಮುಖಂಡರ ಸಭೆ
ಮಂಗಳೂರು, ಜ.10: ದ.ಕ ಜಿಲ್ಲಾ ಮಟ್ಟದ ದಲಿತ ಮುಖಂ ಡರ ಸಭೆಯು ಜ.11ರಂದು ಪೂರ್ವಾಹ್ನ 11ಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ದ.ಕ. ಜಿಲ್ಲಾ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.
ಸಂದಲ್ ವೆುರವಣಿಗೆ
ಉಳ್ಳಾಲ, ಜ.10: ತಾಜುಲ್ ಉಲಮಾ ಅಸ್ಸೈಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿರವರ ಉರೂಸ್ ಸಮಾರಂಭವು ಜ.11,12,13ರಂದು ಕೇರಳದ ಪಯ್ಯನ್ನೂರ್ ಸಮೀಪದ ಎಟ್ಟಿಕುಳಂನಲ್ಲಿ ನಡೆಯಲಿರುವುದರಿಂದ ಜ.11ರಂದು ಬೆಳಗ್ಗೆ 7 ಗಂಟೆಗೆ ಉಳ್ಳಾಲ ಸೈಯದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ.ರವರ ದರ್ಗಾ ಝಿಯಾರತ್ ಹಾಗೂ ಸಂದಲ್ ಮೆರವಣಿಗೆಯ ಮೂಲಕ ಉರೂಸ್ ಸಮಾರಂಭ ಚಾಲನೆಗೊಳ್ಳಲಿದೆ ಎಂದು ಎಸ್ಸೆಸ್ಸೆಫ್ ಮತ್ತು ಎಸ್ವೈಎಸ್ ಅಕ್ಕರೆಕೆರೆ ಶಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಬೆಳ್ಳಾರೆ ಮಖಾಂ ಉರೂಸ್
ಸುಳ್ಯ, ಜ.10: ಬೆಳ್ಳಾರೆ ವಲಿಯುಲ್ಲಾಹಿ ಹೆಸರಿನಲ್ಲಿ 3 ವರ್ಷಗಳಿಗೊಮ್ಮೆ ನಡೆಯುವ ಉರೂಸ್ ಕಾರ್ಯಕ್ರಮ ಜ.11ರಿಂದ 17ರವರೆಗೆ ನಡೆಯಲಿದೆ. ಆ ಪ್ರಯುಕ್ತ ಧಾರ್ಮಿಕ ಪ್ರವಚನ, ಸ್ವಲಾತ್ ಮಜ್ಲಿಸ್, ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ, ಬುರ್ದಾ ಮಜ್ಲಿಸ್, ದಫ್ ಸ್ಪರ್ಧೆ, ಖತ್ಮುಲ್ ಖುರ್ಆನ್ ಮತ್ತು ತಹ್ಲೀಲ್ ಸಮರ್ಪಣೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.







