ತಪ್ಪಿತಸ್ಥರ ಪರ ವಾದಿಸದಂತೆ ವಕೀಲರಿಗೆ ಪೇಜಾವರ ಶ್ರೀ ಕರೆ

ಉಡುಪಿ, ಯಾವುದೇ ಪ್ರಕರಣದಲ್ಲಿ ಆರೋಪಿ ತಪಿತಸ್ಥ ಎಂಬುದು ಖಾತ್ರಿಯಾದರೆ ಆತನ ಪರವಾಗಿ ವಕೀಲರು ವಾದ ಮಾಡುವುದನ್ನು ನಿಲ್ಲಿಸ ಬೇಕು. ಈ ಮೂಲಕ ನಿಜವಾದ ನ್ಯಾಯದಾನ ಅವಕಾಶ ಮಾಡಿಕೊಡಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಐದನೆ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ಉಡುಪಿ ವಕೀಲರ ಸಂಘಕ್ಕೆ ಭೇಟಿ ನೀಡಿದ ಅವರು ವಕೀಲರನ್ನುದ್ದೇಶಿಸಿ ಮಾತನಾಡುತ್ತಿ ದ್ದರು. ಜನರಿಗೆ ಹಾಗೂ ರಾಜ್ಯ ನ್ಯಾಯ ಒದಗಿಸಿಕೊಡುವಲ್ಲಿ ವಕೀಲರ ಪಾತ್ರ ಅತಿಮುಖ್ಯ. ಸ್ವಾತಂತ್ರ ಹೋರಾಟಕ್ಕೆ ವಕೀಲರಿಂದ ಹೆಚ್ಚಿನ ಬಲ ಸಿಕ್ಕಿತ್ತು ಎಂದರು.
ಮಾಜಿ ಅಡ್ವಕೇಟ್ ಜನರಲ್ಗಳಾದ ಬಿ.ವಿ.ಆಚಾರ್ಯ, ಅಶೋಕ್ ಹಾರ್ನ ಹಳ್ಳಿ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಎಲ್ಲ ರೀತಿಯ ನೂನ್ಯತೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಧ್ಯಾತ್ಮಿಕ ಮಾರ್ಗದರ್ಶನ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ದಯಾನಂದ, ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
Next Story





