ಪಠಾಣ್ಕೋಟ್ ದಾಳಿ ಪ್ರಕರಣ;ತನಿಖೆಗೆ ಭಾರತಕ್ಕೆ ವಿಶೇಷ ತಂಡ ಕಳುಹಿಸಲು ಪಾಕ್ ನಿರ್ಧಾರ

ಹೊಸದಿಲ್ಲಿ, ಜ.13: ಪಠಾಣ್ಕೋಟ್ ವಾಯು ನೆಲೆಯ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನವು ವಿಶೇಷ ತನಿಖಾ ತಂಡವನ್ನು ಭಾರತಕ್ಕೆ ಕಳುಹಿಸಲು ನಿರ್ಧರಿಸಿದೆ.
ಪ್ರಧಾನ ಮಂತ್ರಿ ನವಾಝ್ ಶರೀಫ್ ನೇತೃತ್ವದಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯು ಈ ನಿರ್ಧಾರ ಕೈಗೊಂಡಿದೆ.
ಈಗಾಗಲೇ ಪ್ರಕರಣದ ತನಿಖೆ ಕೈಗೊಂಡಿರುವ ಪಾಕ್ನ ತನಿಖಾ ತಂಡ ಜೈಶೆ ಉಗ್ರ ಸಂಘಟನೆಯ ಹಲವು ಮಂದಿ ಧುರೀಣರನ್ನು ವಶಕ್ಕೆ ತೆಗೆದುಕೊಂಡಿದೆ. ಆದರೆ ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿಲ್ಲ.ಪಾಕ್ನಲ್ಲಿ ಇನ್ನೂ ಕಾರ್ಯಾಚರಿಸುತ್ತಿರುವ ನಿಷೇಧಿತ ಜೈಶೆ ಉಗ್ರಗಾಮಿ ಸಂಘಟನೆಯ ಕಚೇರಿಯನ್ನು ಪತ್ತೆ ಹಚ್ಚಿ ಬೀಗ ಜಡಿಯುವ ಅಭಿಯಾನವನ್ನು ಆರಂಭಿಸಿರುವುದಾಗಿ ಸರಕಾರ ತಿಳಿಸಿದೆ.
ಜೈಶೆ ಸಂಘಟನೆಯನ್ನು 2002ರಲ್ಲಿ ನಿಷೇಧಿಸಲಾಗಿತ್ತು. ಹೀಗಿದ್ದರೂ ಜೈಶೆ ಸಂಘಟನೆ ಪಾಕ್ ಆಕ್ರಮಿತ ಕಾಶ್ಮೀರ, ಪಂಜಾಬ್ ಪ್ರಾಂತ್ಯ ಸೇರಿದಂತೆ ಪಾಕಿಸ್ತಾನದ ಹಲವಡೆ ಇನ್ನೂ ಸಕ್ರೀಯವಾಗಿದೆ ಭಾರತ ಮತ್ತು ಅಮೆರಿಕದ ಒತ್ತಡಕ್ಕೆ ಮಣಿದು ಪಾಕಿಸ್ತಾನ ಉಗ್ರ ಸಂಘಟನೆಯನ್ನು ಮಟ್ಟ ಹಾಕಲು ಮುಂದಾಗಿದೆ.





