ಉಪನ್ಯಾಸಕರ ವೇತನ ತಾರತಮ್ಯ ಗಂಭೀರ ಸಮಸ್ಯೆ: ಎಚ್.ಎಸ್.ದೊರೆಸ್ವಾಮಿ

ಬೆಂಗಳೂರು, ಜ. 13: ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ವೇತನ ತಾರತಮ್ಯವನ್ನು ನಿವಾರಿಸದಿರುವುದು ದುರದೃಷ್ಟಕರ. ಉಪನ್ಯಾಸಕರನ್ನು ಬೀದಿಗೆ ತರುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಆದ್ದರಿಂದ ತಕ್ಷಣ ರಾಜ್ಯ ಸರಕಾರ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಸರಕಾರಕ್ಕೆ ಮನವಿ ಮಾಡಿದ್ದಾರೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ಇಂದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹಾಗೂ ಪ್ರಾಂಶುಪಾಲರ ಸಂಘದ ವತಿಯಿಂದ ಏರ್ಪಡಿಸಿದ್ದ ಉಪವಾಸ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದ ಅವರು, ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ವೇತನದಲ್ಲಿ ಅನ್ಯಾಯವಾಗಿರುವುದು ಸತ್ಯ. ಶಿಕ್ಷಕರು ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದ್ದು, ಸರಕಾರ ಇದನ್ನು ಪರಿಗಣಿಸಿ ವೇತನ ತಾರತಮ್ಯವನ್ನು ಹೋಗಲಾಡಿಸಬೇಕು. ಆ ಮೂಲಕ ಶೈಕ್ಷಣಿಕ ವಾತಾವರಣ ಕೆಡದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪಮಾತನಾಡಿ, ಕಳೆದ 20 ವರ್ಷಗಳಿಂದ ಉಪನ್ಯಾಸಕರು ಹೋರಾಟ ನಡೆಸುತ್ತಿದ್ದರೂ ಯಾವ ಸರಕಾರವೂ ಸ್ಪಂದನೆ ನೀಡಿಲ್ಲ. ಎಲ್ಲಾ ಸರಕಾರಗಳೂ ಒಂದೇ ರೀತಿ ವರ್ತಿಸುತ್ತವೆ ಎಂಬುದನ್ನು ಇದು ತೋರಿಸುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲ, ಇಡೀ ಅಧ್ಯಾಪಕ ವರ್ಗಕ್ಕೆ ಮಾಡಿರುವ ಅಪಮಾನ ಎಂದು ಹೇಳಿದರು.
ವೇತನ ತಾರತಮ್ಯ ನಿವಾರಣೆಗೆ ಐಎಎಸ್ ಅಧಿಕಾರಿ ಕುಮಾರ್ ನಾಯ್ಕ ಅವರ ನೇತೃತ್ವದಲ್ಲಿ ಸರಕಾರ 2011ರಲ್ಲಿ ಸಮಿತಿ ರಚಿಸಿತ್ತು. ವರದಿ ಸಲ್ಲಿಕೆಯಾಗಿ 4 ವರ್ಷ ಕಳೆದರೂ ಯಾವುದೇ ಬೆಳವಣಿಗೆ ಆಗಿಲ್ಲ. ಪ್ರಜಾಪ್ರಭುತ್ವದಲ್ಲಿ ಮಾತುಕತೆ, ಸಂವಾದ ನಡೆಯಬೇಕು. ಆದರೆ ಇಲ್ಲಿ ಇದ್ಯಾವುದೂ ನಡೆಯುತ್ತಿಲ್ಲ ಎಂದು ವಿಷಾದಿಸಿದರು.
ಪ್ರಾಂಶುಪಾಲ ಸಂಘದ ಅಧ್ಯಕ್ಷ ಕೆ.ಸಿ. ಶ್ರೀಕಂಠೇಗೌಡ ಮಾತ ನಾಡಿ, ಉಪನ್ಯಾಸಕರ ಹುದ್ದೆಗೆ ಸಮನಾಂತರವಾಗಿರುವ ತಹಶೀ ಲ್ದಾರ್, ವೈದ್ಯಾಧಿಕಾರಿಗಳು ನಮಗಿಂತ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಆದರೆ, ಯಾವುದೇ ಕಾರಣವಿಲ್ಲದೆ ನಮಗೆ ಅವರಿಗಿಂತಲೂ ಕಡಿಮೆ ವೇತನ ನೀಡಲಾಗುತ್ತಿದೆ. ಸರಕಾರವೇ ನೇಮಿಸಿರುವ ಸಮಿತಿ ನಮಗೆ ಅನ್ಯಾಯವಾಗಿರುವುದನ್ನು ವರದಿಯಲ್ಲಿ ಸ್ಪಷ್ಟಪಡಿಸಿದೆ. ಆದ್ದರಿಂದ ಕುಮಾರ್ ನಾಯ್ಕ ವರದಿಯನ್ನು ಇದೇ ವರ್ಷದಲ್ಲಿ ಅನುಷ್ಠಾನಕ್ಕೆ ತರಬೇಕು. ಮುಂದಿನ ವರ್ಷ 7ನೆ ವೇತನ ಆಯೋಗ ಅಸ್ತಿತ್ವಕ್ಕೆ ಬರುವುದರಿಂದ ಆಗ ಕುಮಾರ್ ನಾಯ್ಕ ವರದಿ ಅಸ್ತಿತ್ವ ಕಳೆದುಕೊಳ್ಳುತ್ತದೆ. ಆದ್ದರಿಂದ ಇದೇ ವರ್ಷ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಉಪವಾಸ ಸತ್ಯಾಗ್ರಹದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ನೂರಾರು ಉಪನ್ಯಾಸ ಕರು ಆಗಮಿಸಿದ್ದರು. ಪ್ರತಿಭಟನೆಯಲ್ಲಿ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಕಾರ್ಯದರ್ಶಿ ಎಚ್.ಬಿ. ಪ್ರಕಾಶ್, ಮುಖಂಡರಾದ ಎಸ್.ಆರ್. ವೆಂಕಟೇಶ್, ಜಯಣ್ಣ, ನಿಂಗೇಗೌಡ, ನಾಯಕ, ಹೊನ್ನರಾಜು ಮತ್ತಿತರರು ಭಾಗವಹಿಸಿದ್ದರು.





