ಲಖ್ನೋ: ಕೇಸರಿ ಅಟ್ಟಹಾಸಕ್ಕೆ ಭುಗಿಲೆದ್ದ ಹಿಂಸಾಚಾರ

ಲಖನೌ: ಹಿಂದೂ ಸಂಘಟನೆಗಳ ಕಾರ್ಯಕರ್ತರು ಖಡ್ಗ ಹಾಗೂ ಕೇಸರಿಧ್ವಜಗಳೊಂದಿಗೆ ಮೆರವಣಿಗೆ ನಡೆಸಿದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದು 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಫತ್ತೇಪುರ ಜಿಲ್ಲೆ ಜನಾಬಾದ್ ನಗರದ ಕಿಚಡಿ ಮೇಳದ ವೇಳೆ ನಡೆದಿದೆ.
ಈ ಮೇಳಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ವಿಎಚ್ಪಿ ಮುಖಂಡ ಪ್ರವೀಣ್ಭಾಯಿ ತೊಗಾಡಿಯಾ ಹಾಗೂ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಭಾಗಹಿಸುವ ಕಾರ್ಯಕ್ರಮ ನಿಗದಿಯಾಗಿದ್ದು, ಇದಕ್ಕೆ ಒಂದು ಗಂಟೆ ಮುನ್ನ ಹಿಂಸಾಚಾರ ಭುಗಿಲೆದ್ದಿದೆ.
ಮೆರವಣಿಗೆಯ ಜತೆಗಿದ್ದ ಟೆಂಪೋ ಹೋಗಲು ಅನುವಾಗುವಂತೆ ವಿದ್ಯುತ್ ತಂತಿಯನ್ನು ಬೀಳಿಸಿದ್ದು, ಇದಕ್ಕೆ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಹೀಗೆ ಆರಂಭವಾದ ವಾಗ್ವಾದ ತಾರಕಕ್ಕೇರಿ, ಹಿಂಸಾತ್ಮಕ ರೂಪ ಪಡೆಯಿತು. ಎರಡೂ ಕಡೆಯವರೂ ಈ ಸಂದರ್ಭದಲ್ಲಿ ಗುಂಡು ಹಾರಿಸಿದ್ದಾರೆ. ಕಲ್ಲು ಹಾಗೂ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದುಕೊಂಡಿದ್ದಾರೆ. ಹಲವು ಅಂಗಡಿಗಳು ಭಸ್ಮವಾಗಿದ್ದು, ವಾಹನಗಳು ಜಖಂಗೊಂಡಿವೆ. ಪೊಲೀಸರು ಹಾಗೂ ಪಿಎಸಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ಪೊಲೀಸರು ಈ ಭಾಗಕ್ಕೆ ಬರುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿದ್ದು, ಗಲಭೆ ಹರಡದಂತೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.





